ಬೆಂಗಳೂರು: ಲೋಕಾಯುಕ್ತ ಸಂಸ್ಥೆಯಲ್ಲಿನ ಭ್ರಷ್ಟಾಚಾರ ಆರೋಪ ಪ್ರಕರಣ ಸಂಬಂಧ ಲೋಕಾಯುಕ್ತ ನ್ಯಾಯಮೂರ್ತಿ ವೈ.ಭಾಸ್ಕರ್ ರಾವ್ ಅವರ ಪುತ್ರ ಅಶ್ವಿನ್ ರಾವ್ ಅವರ ವಿರುದ್ಧ ಬುಧವಾರ ಲೋಕಾಯುಕ್ತ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ.
ಆರೋಪಿ ನಂಬರ್ 1 ಅಶ್ವಿನ್ ರಾವ್ ಅಲಿಯಾಸ್ ಕೃಷ್ಣರಾವ್ ವಿರುದ್ಧ ಭ್ರಷ್ಟಾಚಾರ ನಿಯಂತ್ರಣ ಕಾಯ್ದೆ 13ರಡಿ ಲೋಕಾಯುಕ್ತ ಎಸ್ಪಿ ಸೋನಿಯಾ ನಾರಂಗ್ ಅವರು ಎಫ್ಐಆರ್ ದಾಖಲಿಸಿದ್ದಾರೆ. ಸೋನಿಯಾ ನಾರಂಗ್ ಅವರು ಐಪಿಸಿ ಸೆಕ್ಷನ್ 384, 419, 120(ಬಿ)ಅಡಿ ಲೋಕಾಯುಕ್ತರ ಪುತ್ರನ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದರು. ಆದರೆ ಇಂದು ಪ್ರಕರಣದ ತನಿಖೆಗೆ ಹೈಕೋರ್ಟ್ ವಿಭಾಗೀಯ ಪೀಠ ತಡೆಯಾಜ್ಞೆ ನೀಡಿದೆ.
ಅಶ್ವಿನ್ ರಾವ್ ಅವರು ಕೃಷ್ಣಾರಾವ್ ಎಂಬ ಹೆಸರಿನಲ್ಲಿ ಎಂಜಿನಿಯರ್, ಹಿರಿಯ ಅಧಿಕಾರಿಗಳು ಹಾಗೂ ನಿವೃತ್ತ ಅಂಚಿನಲ್ಲಿರುವ ಅಧಿಕಾರಿಗಳನ್ನು ಕರೆದು ಹಣ ನೀಡದಿದ್ದಲ್ಲಿ ದಾಳಿ ಮಾಡುವ ಬೆದರಿಕೆ ಹಾಕಿರುವುದು ಬಹಿರಂಗವಾಗಿತ್ತು. ಈ ಸಂಬಂಧ ಎಂಜಿನಿಯರ್ವೊಬ್ಬರು ಸಾಕ್ಷಿ ಸಮೇತ ಎಸ್ಪಿ ಸೋನಿಯಾ ನಾರಂಗ್ ಅವರಿಗೆ ದೂರು ಸಲ್ಲಿಸಿದ್ದರು.