ಪಾಂಡವಪುರ.ಜೂ.28: ಸಾಲದ ಬಾಧೆಯಿಂದ ತತ್ತರಿಸಿದ ಒಂದೇ ಕುಟುಂಬದ 4 ಮಂದಿ ಆತ್ಮಹತ್ಯೆಗೆ ಯತ್ನಿಸಿದ್ದು, ಈ ಪೈಕಿ ಓರ್ವ ಸಾವನ್ನಪ್ಪಿದ್ದು 3 ಮಂದಿ ತೀರ್ವವಾಗಿ ಅಸ್ವಸ್ಥರಾಗಿರುವ ಘಟನೆ ಚಿನಕುರುಳಿಯಲ್ಲಿ ನಡೆದಿದೆ.
ಚಿನಕುರುಳಿ ಗ್ರಾಮದ ನಿವಾಸಿ ದಿನೇಶ್ (30) ಹೆಂಡತಿ ಶ್ವೇತಾ (27) ಮಕ್ಕಳಾದ ಸ್ಪಂದನ,(4) ಮೋನಿಕ (3) ಎಂಬುವರೇ ಸಾಮೂಹಿಕ ಆತ್ಮಹತ್ಯೆಗೆ ಯತ್ನಿಸಿದ ದುರ್ಧೈವಿಗಳು. ಈ ಪೈಕಿ ಶ್ವೇತಾ ಸಾವನ್ನಪ್ಪಿದ್ದಾರೆ. ಕಳೆದ 6 ವರ್ಷದ ಹಿಂದೆ ಅಷ್ಟೆ ದಿನೇಶ್ ಹಾಗೂ ಶ್ವೇತಾ ವಿವಾಹವಾಗಿದ್ದರು ಇವರಿಗೆ ಸ್ಪಂದನ ಮತ್ತು ಮೋನಿಕ ಇಬ್ಬರು ಮಕ್ಕಳು. ಇವರ ಜೀವನ ಆರಂಭದಲ್ಲಿ ಸುಖಕರವಾಗಿತ್ತು ಎನ್ನಲಾಗಿದೆ.
ಕೃಷಿಕೂಲಿ ಕಾರ್ಮಿಕರಾಗಿದ್ದ ಇವರು ಜೀವನ ನಿರ್ವಹಣೆ ಮತ್ತು ಇನ್ನಿತರ ಕಾರ್ಯಕ್ಕಾಗಿ ಸಾಲ ಮಾಡಿದ್ದರು. ಎಂದು ತಿಳಿದುಬಂದಿದೆ. ಸಕಾಲದಲ್ಲಿ ಸಾಲ ತೀರಿಸಲು ಇವರಿಂದ ಸಾಧ್ಯವಾಗಲಿಲ್ಲ. ಇದರಿಂದ ಖಿನ್ನತೆಗೆ ಒಳಗಾಗಿದ್ದ ದಿನೇಶ್ ಇಂದು ಬೆಳಗ್ಗೆ ತನ್ನ ಹೆಂಡತಿಯೊಂದಿಗೆ ಸಮಸ್ಯೆಗಳ ಬಗ್ಗೆ ಚರ್ಚಿಸಿ ಆತ್ಮಹತ್ಯೆಯ ನಿರ್ದಾರಕ್ಕೆ ಬಂದು ತನ್ನೆರಡು ಮಕ್ಕಳಿಗೆ ವಿಷ ಉಣಿಸಿ ಇವರು ಸಹ ವಿಷ ಸೇವಿಸಿ ಅಸ್ವಸ್ಥರಾದರು.
ನೆಲದಲ್ಲಿ ಬಿದ್ದು ಉರುಳಾಡುತ್ತಿದ್ದ ಇವರ ಸ್ಥಿತಿಯನ್ನು ನೋಡಿ ಅಕ್ಕಪಕ್ಕದ ಮನೆಯವರು ಕೂಡಲೆ 4 ಮಂದಿಯನ್ನು ಚಿನಕುರುಳಿ ಆಸ್ಪತ್ರೆಗೆ ಕರೆದೋಯ್ದು ಪ್ರಥಮ ಚಿಕಿತ್ಸೆ ಕೊಡಿಸಿ ನಂತರ ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿನ ಕೆ ಅರ್ ಆಸ್ಪತ್ರೆಗೆ ದಾಖಲಿಸಿದರು. ಚಿಕಿತ್ಸೆ ಫಲಕಾರಿಯಾಗದೆ ಶ್ವೇತಾ ಸಾವನ್ನಪ್ಪಿದರು. ದಿನೇಶ್ ಸ್ಥಿತಿ ಗಂಭೀರವಾಗಿದ್ದು ಸಾವು-ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾರೆ.
ಮಕ್ಕಳಿಬ್ಬರು ಅಸ್ವಸ್ಥರಾಗಿದ್ದರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಸಾಲದ ಬಾಧೆ ಆತ್ಮಹತ್ಯೆಗೆ ಕಾರಣವಾಗಿದದ್ದು ದುರ್ಧೈವ. ವಿಷಯ ತಿಳಿಯುತ್ತಿದ್ದಂತೆ ಬಂಧು- ಬಾಂಧವರು ಆಸ್ಪತ್ರೆಯ ಬಳಿ ದಾವಿಸಿ ಧಾರುಣ ಘಟನೆಯನ್ನು ನೆನೆದು ಗೋಳಾಡುತ್ತಿದ್ದ ದೃಶ್ಯ ಎಂತವರ ಮನಸ್ಸನ್ನು ಕರಗಿಸುತ್ತಿತ್ತು. ಈ ಸಂಬಂಧ ಚಿನಕುರುಳಿ ಪೋಲಿಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.