ತುಮಕೂರು, ಜೂ.17: ಬಸ್ನಲ್ಲಿ ಹುಡುಗಿಯನ್ನು ಚುಡಾಯಿಸುತ್ತಿದ್ದ ಯುವಕನನ್ನು ಪ್ರಯಾಣಿಕರು ಥಳಿಸಲು ಮುಂದಾದ್ದರಿಂದ ಆತ ಪರಾರಿಯಾಗಲು ಯತ್ನಿಸಿ ಬಸ್ನಿಂದ ಕೆಳಗೆ ಬಿದ್ದು, ಸಾವನ್ನಪ್ಪಿರುವ ಘಟನೆ ನಗರದ ಬಾಳೇಕಟ್ಟೆ ಚೌಕಿ ಬಳಿ ಕಳೆದ ರಾತ್ರಿ ನಡೆದಿದೆ.
ಮೃತನನ್ನು ಹಿರಿಯೂರಿನ ಜನತಾ ಬಜಾರ್ ಕಾಲೋನಿಯ ನಿವಾಸಿ ಸಂದೀಪ್ಕುಮಾರ್(21) ಎಂದು ಹೇಳಲಾಗಿದೆ. ತುಮಕೂರಿನಿಂದ ಮಧುಗಿರಿಗೆ ಹೋಗುತ್ತಿದ್ದ ಖಾಸಗಿ ಬಸ್ನಲ್ಲಿ ಈ ಎಡವಟ್ಟು ನಡೆದಿದೆ. ಕಾಲೇಜು ಮುಗಿಸಿಕೊಂಡು ಹೋಗುತ್ತಿದ್ದ ಯುವತಿಯನ್ನು ಈತ ಚುಡಾಯಿಸುತ್ತಿದ್ದ ಎಂದು ಹೇಳಲಾಗಿದ್ದು, ಈ ವೇಳೆ ಪ್ರಯಾಣಿಕರು ಆತನನ್ನು ಹಿಡಿದುಕೊಳ್ಳಲು ಮುನ್ನುಗ್ಗಿದಾಗ ಆತ ಬಸ್ನಿಂದ ಹಾರಿದ್ದಾನೆ. ದುರದೃಷ್ಟವಶಾತ್ ಆತ ಕಾಲುಜಾರಿ ಬಿದ್ದು ಹಿಂದಿನ ಚಕ್ರಕ್ಕೆ ಸಿಕ್ಕಿ ಮೃತಪಟ್ಟಿದ್ದಾನೆ ಎಂದು ತಿಳಿದುಬಂದಿದೆ.
ಆದರೆ ಪೊಲೀಸರು ರಸ್ತೆಬದಿ ನಡೆದು ಹೋಗುತ್ತಿದ್ದ ಯುವಕನಿಗೆ ಬಸ್ ಡಿಕ್ಕಿ ಹೊಡೆದಿದೆ ಎಂದು ಹೇಳಿದ್ದಾರೆ. ಮನೆಯವರು ತುಮಕೂರಿನ ಗಣಪತಿ ದೇವಸ್ಥಾನಕ್ಕೆ ಹೋಗಿ ಬರುವಂತೆ ಸಂದೀಪ್ಕುಮಾರ್ಗೆ ಹೇಳಿದ್ದರು. ಅದರಂತೆ ನಗರಕ್ಕೆ ಬಂದಿದ್ದ ಈ ವೇಳೆ ಬಾವಿಕಟ್ಟೆ ಕಲ್ಯಾಣ ಮಂಟಪದ ಬಳಿ ಬಸ್ ಡಿಕ್ಕಿ ಹೊಡೆದಿದೆ ಎಂದು ತಿಳಿಸಿದ್ದಾರೆ.
ಸ್ಥಳಕ್ಕೆ ಧಾವಿಸಿದ ತುಮಕೂರು ಪಶ್ಚಿಮ ಠಾಣಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಒಟ್ಟಾರೆ ಯುವಕನ ದುರಂತ ಸಾವು ಕುಟುಂಬ ಸದಸ್ಯರನ್ನು ದುಃಖದ ಮಡುವಿಗೆ ದೂಡಿದೆ.