ಚಿಕ್ಕಮಗಳೂರು: ಪ್ರವಾಸಿಗರು ಮತ್ತು ಚಾರಣಿಗರ ನೆಚ್ಚಿನ ತಾಣ ಮುಳ್ಳಯ್ಯನಗಿರಿ ತಪ್ಪಲಿನಲ್ಲಿ ಬುಧವಾರ ಕಾಣಿಸಿಕೊಂಡ ಕಾಳ್ಗಿಚ್ಚಿಗೆ ಹುಲ್ಲುಗಾವಲು ಮತ್ತು ಶೋಲಾ ಅರಣ್ಯ ನಾಶವಾಗಿದೆ. ಮುಳ್ಳಯ್ಯನಗಿರಿ ಮತ್ತು ಸೀತಾಳಯ್ಯನ ಗಿರಿಗಳ ನಡುವಣ ಶೋಲಾ ಅರಣ್ಯ ಮತ್ತು ಹುಲ್ಲುಗಾವಲಿನಲ್ಲಿ ಮಧ್ಯಾಹ್ನ 2 ಗಂಟೆಗೆ ಬೆಂಕಿ ಕಾಣಿಸಿತು. ಕೇವಲ ಇಬ್ಬರು ಅರಣ್ಯ ರಕ್ಷಕರು ಬೆಂಕಿ ನಂದಿಸಲು ಸಂಜೆವರೆಗೂ ಹರಸಾಹಸ ನಡೆಸುತ್ತಿದ್ದುದು ಕಂಡುಬಂತು.
ಕಳಸಾಪುರದ ಸಾಮಾಜಿಕ ಅರಣ್ಯದಲ್ಲಿ ಕಾಣಿಸಿದ ಬೆಂಕಿ ನಂದಿಸಲು ತೆರಳಿದ್ದ ಅರಣ್ಯ ಇಲಾಖೆ ಸಿಬ್ಬಂದಿ, ಮುಳ್ಳಯ್ಯನಗಿರಿ ತಲುಪುವಷ್ಟರಲ್ಲಿ ಸೊಂಪಾಗಿ ಬೆಳೆದಿದ್ದ ಹುಲ್ಲುಗಾವಲು, ಕುರಂಜಿ ವನ, ಅಮೂಲ್ಯ ಔಷಧ ಗಿಡಗಳು, ಶೋಲಾ ಅರಣ್ಯ ಬಹಳಷ್ಟು ಪ್ರಮಾಣದಲ್ಲಿ ಬೆಂಕಿಯಲ್ಲಿ ಬೆಂದುಹೋಗಿತ್ತು.
ಸಂಜೆ 5 ಗಂಟೆ ಹೊತ್ತಿಗೆ ಎರಡು ಜೀಪುಗಳಲ್ಲಿ ಸ್ಥಳಕ್ಕೆ ಧಾವಿಸಿದ ಹೆಚ್ಚಿನ ಸಿಬ್ಬಂದಿ, ಮುಳ್ಳಯ್ಯನಗಿರಿ ತುದಿಯ ಇಳಿಜಾರಿನ ಪ್ರದೇಶದಲ್ಲಿ ಹೊತ್ತಿ ಉರಿಯುತ್ತಿದ್ದ ಬೆಂಕಿಯನ್ನು ಹರಸಾಹಸ ಪಟ್ಟು ನಂದಿಸಿದರು. ಅಷ್ಟರಲ್ಲಿ, ಗಿರಿಯ ಬುಡದಲ್ಲಿ ಮತ್ತೆ ಬೆಂಕಿ ಕಾಣಿಸಿ, ಜ್ವಾಲೆ ಮುಗಿಲೆತ್ತರಕ್ಕೆ ಚಾಚಿಕೊಂಡಿತು. ಅತ್ತ ಬೆಂಕಿ ನಂದಿಸಲು ಕೆಲ ಸಿಬ್ಬಂದಿ ಹೊರಡಲು ಸಜ್ಜಾಗುತ್ತಿದ್ದಂತೆ, ಮುತ್ತೋಡಿ ಅಭಯಾರಣ್ಯದಂಚಿನ ಗಿರಿ ತಪ್ಪಲಿನ ಮೀಸಲು ಅರಣ್ಯದಲ್ಲಿ ಬೆಂಕಿ ಕಾಣಿಸಿತು. ಇದರಿಂದ ಬೆರಳೆಣಿಕೆ ಯಷ್ಟಿದ್ದ ಅಧಿಕಾರಿಗಳು ಮತ್ತು ಸಿಬ್ಬಂದಿ ಪೇಚಿಗೆ ಸಿಲುಕಿದರು.
ಸಂಜೆ 6 ಗಂಟೆ ವೇಳೆಗೆ ಗಿರಿಯಲ್ಲಿ ಬೆಂಕಿ ನಂದಿಸಲು ಯಶಸ್ವಿಯಾದರು. ಎಸಿಎಫ್ ಶಶಿಧರ್ ಮತ್ತು ವಲಯ ಅರಣ್ಯಾಧಿಕಾರಿ ಅಜೀಜ್ ಬೆಂಕಿ ನಂದಿಸುವ ಕಾರ್ಯಾಚರಣೆ ನೇತೃತ್ವ ವಹಿಸಿದ್ದರು.