ಬಾಗಲಕೋಟೆ: ಆಲಮಟ್ಟಿ ಅಣೆಕಟ್ಟೆ ಎತ್ತರವನ್ನು 524.256 ಮೀಟರ್ಗೆ ಹೆಚ್ಚಿಸುವುದರಿಂದ ಮುಳುಗಡೆಯಾಗಲಿರುವ ಭೂಮಿಯನ್ನು ರೈತರಿಂದ ಸ್ವಾಧೀನ ಪಡಿಸಿಕೊಳ್ಳುವ ಬದಲು ಗುತ್ತಿಗೆ ಆಧಾರದ ಮೇಲೆ (ಲೀಸ್) ಪಡೆಯಲು ಕೃಷ್ಣಾ ಮೇಲ್ದಂಡೆ ಯೋಜನೆಯ ಪುನರ್ವಸತಿ ಮತ್ತು ಪುನರ್ ನಿರ್ಮಾಣ ವಿಭಾಗ ಗಂಭೀರ ಚಿಂತನೆ ನಡೆಸಿದೆ.
ಕೃಷ್ಣಾ ಮೇಲ್ದಂಡೆ ಯೋಜನೆಯ (ಯುಕೆಪಿ) ಮೂರನೇ ಹಂತದ ಅನುಷ್ಠಾನದಿಂದ ಹೊಸದಾಗಿ ಮುಳುಗಡೆಯಾಗುವ 75 ಸಾವಿರ ಎಕರೆ ಭೂಮಿಯಲ್ಲಿ ಆಲಮಟ್ಟಿ ಜಲಾಶಯದ ಹಿನ್ನೀರು ವರ್ಷದಲ್ಲಿ ಗರಿಷ್ಠ 4 ತಿಂಗಳು ಮಾತ್ರ ಸಂಗ್ರಹವಿರುತ್ತದೆ. ಉಳಿದ 8 ತಿಂಗಳು ನೀರು ಇರುವುದಿಲ್ಲ. ನಾಲ್ಕು ತಿಂಗಳು ಮಾತ್ರ ಹಿನ್ನೀರಿನಲ್ಲಿ ಮುಳುಗಡೆಯಾಗುವ ಜಮೀನನ್ನು ಸ್ವಾಧೀನ ಪಡಿಸಿಕೊಳ್ಳುವ ಬದಲು 30ರಿಂದ 50 ವರ್ಷದ ಅವಧಿಗೆ ಗುತ್ತಿಗೆ ಪಡೆದು ಕೊಳ್ಳುವ ಉದ್ದೇಶ ಸರ್ಕಾರದ್ದು.
ಕಾಯ್ದೆಯಲ್ಲಿ ಅವಕಾಶ: ಈ ಕುರಿತು ‘ಪ್ರಜಾವಾಣಿ’ಗೆ ಮಾಹಿತಿ ನೀಡಿದ ಯುಕೆಪಿ ಪುನರ್ವಸತಿ ಆಯುಕ್ತ ಶಿವಯೋಗಿ ಕಳಸದ, ‘ಕೇಂದ್ರ ಸರ್ಕಾರ ಜಾರಿಗೆ ತಂದಿರುವ ನೂತನ ಭೂಸ್ವಾಧೀನ ಕಾಯ್ದೆ–2013ರ ಕಲಂ 104ರಲ್ಲಿ ಭೂಸ್ವಾಧೀನದ ಬದಲು ಗುತ್ತಿಗೆ ರೂಪದಲ್ಲಿ ಪಡೆಯಲು ಅವಕಾಶವಿದೆ. ಇದನ್ನು ಬಳಸಿಕೊಂಡು ರೈತರಿಂದ ಗುತ್ತಿಗೆ ರೂಪದಲ್ಲಿ ಜಮೀನು ಪಡೆಯುವ ಚಿಂತನೆ ನಡೆದಿದೆ.
ಮುಳುಗಡೆಯಾಗುವ ಭೂಮಿ ಮಾಲೀಕನಿಂದ ಕಾಲಮಿತಿಯಲ್ಲಿ ಗುತ್ತಿಗೆ ಪಡೆಯುವುದರಿಂದ ಆತ ಭೂಮಿಯ ಮಾಲೀಕನಾಗಿ ಮುಂದುವರಿಯುತ್ತಾನೆ’ ಎಂದರು. ‘ಜಲಾಶಯ ಹಿನ್ನೀರು ಖಾಲಿಯಾದ ಬಳಿಕ 8 ತಿಂಗಳು ರೈತರು ಮೊದಲಿನಂತೆ ಕೃಷಿ ಚಟುವಟಿಕೆ ಮಾಡಿಕೊಳ್ಳಬಹುದು ಎಂದರು.
ಭೂಮಿಯನ್ನು ಗುತ್ತಿಗೆ ಪಡೆಯುವುದರಿಂದ ಉದ್ದೇಶಿತ ಯೋಜನಾ ವೆಚ್ಚ ಕಡಿಮೆಯಾಗಲಿದೆ ಮತ್ತು ಯೋಜನೆಯನ್ನು ನಿಗದಿತ ಕಾಲಾವಧಿಯೊಳಗೆ ಪೂರ್ಣಗೊಳಿಸಲು ಅನುಕೂಲವಾಗುವ ಜತೆಗೆ ರೈತರು ಮತ್ತು ಸರ್ಕಾರಕ್ಕೆ ಸಹ ಅನುಕೂಲವಾಗಲಿದೆ. ಈ ಬಗ್ಗೆ ಇನ್ನೂ ಅಂತಿಮ ತೀರ್ಮಾನವಾಗಿಲ್ಲ. ಸರ್ಕಾರದ ಗಮನಕ್ಕೆ ತರಲಾಗಿದೆ. ರೈತರ ವಿಶ್ವಾಸ ಪಡೆದು ಮುಂದುವರಿಯಲಾಗುವುದು’ ಎಂದು ಹೇಳಿದರು.
‘ಯುಕೆಪಿ ಮೂರನೇ ಹಂತದ ಅನುಷ್ಠಾನಕ್ಕೆ ಬೇಕಿರುವ ಒಂದು ಲಕ್ಷ ಎಕರೆ ಭೂಮಿಯಲ್ಲಿ ನಾಲೆಗಳ ನಿರ್ಮಾಣಕ್ಕೆ 20 ಸಾವಿರ ಎಕರೆ, ಪುನರ್ವಸತಿ ಕೇಂದ್ರಕ್ಕಾಗಿ 5 ಸಾವಿರ ಎಕರೆಯನ್ನು ಸ್ವಾಧೀನ ಪಡಿಸಿಕೊಳ್ಳಲಾಗುವುದು, ಜಲಾಶಯದ ನೀರು ಸಂಗ್ರಹವಾಗಲಿರುವ 75 ಸಾವಿರ ಎಕರೆಯನ್ನು ಮಾತ್ರ ಸ್ವಾಧೀನ ಬದಲು ಗುತ್ತಿಗೆ ರೂಪದಲ್ಲಿ ಪಡೆಯಲು ಅವಕಾಶವಿದೆ ಎಂದರು.
ಮುಳುಗಡೆಯಾಗುವ ಭೂಮಿಯನ್ನು ರೈತರಿಂದ ಎಷ್ಟು ವರ್ಷ ಗುತ್ತಿಗೆ ಪಡೆಯಬೇಕು ಮತ್ತು ಎಕರೆವಾರು ಎಷ್ಟು ಹಣ ನೀಡಬೇಕು ಎಂಬುದು ಇನ್ನೂ ನಿರ್ಧಾರವಾಗಬೇಕಿದೆ’ ಎಂದು ತಿಳಿಸಿದರು. ‘ಆಲಮಟ್ಟಿ ಜಲಾಶಯ ವ್ಯಾಪ್ತಿಯಲ್ಲಿ ಮುಳುಗಡೆಯಾಗಿರುವ ಭೂಮಿಯಲ್ಲಿ ಈಗ ಹಿನ್ನೀರು ಕಡಿಮೆಯಾದಂತೆ ರೈತರು ಒಂದೆರಡು ಬೆಳೆ ಬೆಳೆದುಕೊಳ್ಳುತ್ತಿದ್ದಾರೆ’ ಎಂದರು.
ಮೂರು ವರ್ಷದಲ್ಲಿ ಪೂರ್ಣ: ‘ಯುಕೆಪಿ 3ನೇ ಹಂತಕ್ಕೆ ಅಗತ್ಯವಿರುವ ಒಂದು ಲಕ್ಷ ಎಕರೆಯನ್ನು ಸರ್ಕಾರದ ಅನುದಾನ ಲಭ್ಯತೆ ಆಧರಿಸಿ ಮೂರು ವರ್ಷದ ಒಳಗಾಗಿ ಸ್ವಾಧೀನ ಅಥವಾ ಗುತ್ತಿಗೆ ರೂಪದಲ್ಲಿ ಹಂತಹಂತವಾಗಿ ಪಡೆದುಕೊಳ್ಳಲಾಗುವುದು. ಈಗಾಗಲೇ 20 ಸಾವಿರ ಎಕರೆ ಭೂಮಿ ಸ್ವಾಧೀನಕ್ಕೆ ಪ್ರಾಥಮಿಕ ಅಧಿಸೂಚನೆ (4/1) ಹೊರಡಿಸಲಾಗಿದೆ’ ಎಂದು ಕಳಸದ ತಿಳಿಸಿದ್ದಾರೆ.