ಬೆಂಗಳೂರು: ಮತ್ತೀಕೆರೆ ಸಮೀಪ ಮಂಗಳವಾರ ನಿರ್ಮಾಣ ಹಂತದ ಕಟ್ಟಡದಲ್ಲಿ ಕಳವು ಮಾಡಲೆತ್ನಿಸಿದ ಟೋನಿ ವಿನ್ಸೆಂಟ್ (18) ಎಂಬ ವಿದ್ಯಾರ್ಥಿಯನ್ನು ಕಟ್ಟಡದ ಮಾಲೀಕ ಕೊಲೆ ಮಾಡಿದ್ದು, ಘಟನೆ ನಡೆದ ಕೆಲವೇ ತಾಸುಗಳಲ್ಲಿ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ. ಗಂಗಮ್ಮನಗುಡಿ ಬಳಿಯ ಸಿದ್ಧಾರ್ಥನಗರದ ಟೋನಿ, ಖಾಸಗಿ ಕಾಲೇಜಿನಲ್ಲಿ ಹೋಟೆಲ್ ಮ್ಯಾನೇಜ್ಮೆಂಟ್ ಕೋರ್ಸ್್ ಓದುತ್ತಿದ್ದ.
ಕುಟುಂಬ ಸದಸ್ಯರಿಗೆ ಕಾಲೇಜಿಗೆ ಹೋಗುವುದಾಗಿ ತಿಳಿಸಿ ಮನೆಯಿಂದ ಬೆಳಿಗ್ಗೆ ಹೊರ ಹೋಗಿದ್ದ ಆತ, ಮತ್ತೀಕೆರೆ ಬಳಿ ಬಂದು ನಿರ್ಮಾಣ ಹಂತದ ಕಟ್ಟಡದಲ್ಲಿ ಕಬ್ಬಿಣದ ವಸ್ತುಗಳನ್ನು ಕಳವು ಮಾಡಲು ಯತ್ನಿಸಿದ್ದಾನೆ. ಅದೇ ವೇಳೆಗೆ ಅಲ್ಲಿಗೆ ಬಂದ ಕಟ್ಟಡದ ಮಾಲೀಕ ಮಂಜುನಾಥ್ ಅವರು ಕಾರ್ಮಿಕರ ಜತೆ ಸೇರಿ ಟೋನಿಯನ್ನು ಹಿಡಿದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ನಂತರ ಮಂಜುನಾಥ್ ಮತ್ತು ಕಾರ್ಮಿಕರು ಟೋನಿಯನ್ನು ಕಟ್ಟಡದೊಳಗೆ ಸಂಜೆವರೆಗೆ ಕಟ್ಟಿಹಾಕಿ ದೊಣ್ಣೆಯಿಂದ ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಇದರಿಂದ ಆತ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಬಳಿಕ ಮಂಜುನಾಥ್ ಕಾರ್ಮಿಕರ ಜತೆ ಸೇರಿ ಶವವನ್ನು ಕಾರಿನಲ್ಲಿ ಎಚ್ಎಂಟಿ ವಸತಿ ಸಮುಚ್ಚಯದ ಬಳಿಗೆ ಸಾಗಿಸಿಕೊಂಡು ಬಂದು ರಸ್ತೆ ಬದಿಯ ಪೊದೆಗೆ ಎಸೆದು ಹೋಗಿದ್ದರು ಎಂದು ಪೊಲೀಸರು ಹೇಳಿದ್ದಾರೆ.
ಪೊದೆಯ ಪಕ್ಕ ಶವ ಬಿದ್ದಿರುವುದನ್ನು ನೋಡಿದ ಸ್ಥಳೀಯರು ಠಾಣೆಗೆ ಬುಧವಾರ ಮಾಹಿತಿ ನೀಡಿದರು. ಆ ಮಾಹಿತಿ ಆಧರಿಸಿ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದಾಗ ಕೊಲೆ ಪ್ರಕರಣ ಬೆಳಕಿಗೆ ಬಂತು. ಪ್ರಕರಣ ಸಂಬಂಧ ಮಂಜುನಾಥ್ ಮತ್ತು ಹನುಮಂತಪ್ಪ ಎಂಬ ಕೂಲಿ ಕಾರ್ಮಿಕನನ್ನು ಬಂಧಿಸಲಾಗಿದೆ. ಇತರೆ ಆರೋಪಿಗಳು ತಲೆಮರೆಸಿಕೊಂಡಿದ್ದಾರೆ.
ಚಾಕುವಿನಿಂದ ಇರಿದು ರೌಡಿಯ ಕೊಲೆ: ಯಶವಂತಪುರ ಸಮೀಪದ ಅಂಬೇಡ್ಕರ್ ನಗರದಲ್ಲಿ ದುಷ್ಕರ್ಮಿಗಳು ಮಂಗಳವಾರ ರಾತ್ರಿ ರವಿ (25) ಎಂಬ ರೌಡಿಯನ್ನು ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾರೆ.
ಮತ್ತೀಕೆರೆ ಬಳಿಯ ಮೋಹನ್ಕುಮಾರ್ ನಗರದ ರವಿ, ಗಾರೆ ಕೆಲಸ ಮಾಡುತ್ತಿದ್ದ. ರಾತ್ರಿ ಊಟ ಮಾಡಿದ ನಂತರ ಸ್ನೇಹಿತರನ್ನು ಭೇಟಿಯಾಗಿ ಬರುತ್ತೇನೆಂದು ಕುಟುಂಬ ಸದಸ್ಯರಿಗೆ ಹೇಳಿ ಹೋಗಿದ್ದ ಆತ ಮನೆಗೆ ವಾಪಸ್ ಬಂದಿರಲಿಲ್ಲ. ಬಳಿಕ ಬುಧವಾರ ಬೆಳಗಿನ ಜಾವ ಅಂಬೇಡ್ಕರ್ ನಗರದಲ್ಲಿ ರೈಲು ಹಳಿ ಸಮೀಪ ಆತನ ಶವ ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಯಶವಂತಪುರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.