ಸುವರ್ಣ ವಿಧಾನಸೌಧ (ಬೆಳಗಾವಿ): ಕಬ್ಬು ಬೆಳೆಗಾರರ ಸಮಸ್ಯೆ ಕುರಿತಂತೆ ಮಂಗಳವಾರ ವಿಧಾನ ಮಂಡಲದಲ್ಲಿ ನಡೆದ ಕೋಲಾಹಲ ಬುಧವಾರ ಮುಂದುವರಿಯಲಿಲ್ಲ. ಆದರೆ ಸಣ್ಣಪುಟ್ಟ ಗಲಾಟೆಯಿಂದ ಮಾತ್ರ ಮುಕ್ತವಾಗಿರಲಿಲ್ಲ. ಬೆಳಿಗ್ಗೆ 9.30ರಿಂದ ನಡೆದ ಶಾಸಕಾಂಗ ಪಕ್ಷದ ಸಭೆಯಲ್ಲಿ ಸರ್ಕಾರದ ವಿರುದ್ಧ ಹರಿಹಾಯ್ದಿದ್ದ ಕಾಂಗ್ರೆಸ್ ಶಾಸಕರು ಸದನಕ್ಕೆ ಬಂದ ನಂತರ ಸುಮ್ಮನಿದ್ದರು. ಆದರೆ ಒಳಗೊಳಗೇ ಕುದಿಯುವ ಮನಸ್ಸು ಆಗಾಗ ಸ್ಫೋಟಗೊಳ್ಳುತ್ತಿತ್ತು. ಇಂತಹದೇ ಸಮಸ್ಯೆ ಜೆಡಿಎಸ್ನಲ್ಲಿಯೂ ಕಂಡುಬಂತು.
ಪ್ರಶ್ನೋತ್ತರ ಅವಧಿಯಲ್ಲಿ ಶೃಂಗೇರಿ ಶಾಸಕ ಡಿ.ಎನ್.ದೇವರಾಜ್ ಅವರು ಚಿಕ್ಕಮಗಳೂರು ಜಿಲ್ಲಾ ಪಂಚಾಯ್ತಿಯಲ್ಲಿ 3054 ಶೀರ್ಷಿಕೆಯ ಹಣವನ್ನು 5054 ಶೀರ್ಷಿಕೆಗೆ ಬದಲಾಯಿಸಿದ್ದನ್ನು ಪ್ರಸ್ತಾಪಿಸಿದರು. ಇದಕ್ಕೆ ಗ್ರಾಮೀಣಾಭಿವೃದ್ಧಿ ಸಚಿವ ಎಚ್.ಕೆ.ಪಾಟೀಲರ ಅನುಪಸ್ಥಿತಿಯಲ್ಲಿ ಕಾನೂನು ಸಚಿವ ಟಿ.ಬಿ.ಜಯಚಂದ್ರ ಉತ್ತರ ನೀಡುತ್ತಿದ್ದಾಗ ಎದ್ದುನಿಂತ ಬಸವರಾಜ ರಾಯರೆಡ್ಡಿ, ‘ಅಧಿಕಾರಿಗಳು ಹಣ ಲೂಟಿ ಮಾಡುತ್ತಿದ್ದಾರೆ.
ಯಾವ ಅಧಿಕಾರಿಯ ಮೇಲೂ ಸರ್ಕಾರ ಕ್ರಮ ಕೈಗೊಂಡಿಲ್ಲ’ ಎಂದು ರೇಗಿದರು. ಇದಕ್ಕೆ ದನಿಗೂಡಿಸಿದ ಸಭಾಧ್ಯಕ್ಷ ಕಾಗೋಡು ತಿಮ್ಮಪ್ಪ, ‘ಪಾರದರ್ಶಕ ಆಡಳಿತ ನೀಡುತ್ತೇವೆ ಎನ್ನುತ್ತೀರಿ. ಅಧಿಕಾರಿಗಳು ತಪ್ಪು ಮಾಡಿದ್ದು ಗೊತ್ತಾಗಿ 6 ತಿಂಗಳು ಆಯಿತು. ಇನ್ನೂ ಕ್ರಮ ತೆಗೆದುಕೊಂಡಿಲ್ಲ ಎಂದರೆ ಏನ್ರಿ’ ಎಂದು ಕಾನೂನು ಸಚಿವರನ್ನು ತರಾಟೆಗೆ ತೆಗೆದುಕೊಂಡರು. ಆಗ ಪ್ರತಿಪಕ್ಷದ ಸದಸ್ಯರು ‘ಶೇಮ್ ಶೆಮ್’ ಎಂದು ಕೂಗಿದರು.
ಸಚಿವರ ಮೇಲಿನ ಸ್ಪೀಕರ್ ಸಿಟ್ಟು ನಂತರವೂ ಮುಂದುವರಿಯಿತು. ಉನ್ನತ ಶಿಕ್ಷಣ ಸಚಿವ ಆರ್.ವಿ. ದೇಶಪಾಂಡೆ ಮೇಲೂ ರೇಗಾಡಿದರು. ಕೆಲವು ಸಮಯದ ನಂತರ ‘ಎಲ್ರಿ ಸಚಿವರೆಲ್ಲಾ ಎಲ್ಲಿ ಹೋದರ್ರಿ’ ಎಂದು ಕಾನೂನು ಸಚಿವರನ್ನು ಪ್ರಶ್ನಿಸಿದರು.
ಜಗಳೂರು ಶಾಸಕ ಎಚ್.ಪಿ. ರಾಜೇಶ್ ಕುಡಿಯುವ ನೀರಿನ ಯೋಜನೆ ಬಗ್ಗೆ ಪ್ರಶ್ನೆ ಮಾಡಿದಾಗ ಮಾಯಕೊಂಡ ಶಾಸಕ ಶಿವಮೂರ್ತಿ ‘ಕುಡಿಯುವ ನೀರು ಯೋಜನೆ ಜಾರಿಗೊಳಿಸಲು ಟೆಂಡರ್ ಕರೆದು 3 ವರ್ಷ ಆಗಿದೆ. ಟೆಂಡರ್ ಅಂತಿಮಗೊಳಿಸಲು 3 ವರ್ಷ ಬೇಕಾ?’ ಎಂದು ಸರ್ಕಾರವನ್ನು ಕೆಣಕಿದರು. ಹೀಗೆ ಇಡೀ ದಿನ ಒಬ್ಬರಲ್ಲ ಒಬ್ಬರು ಆಡಳಿತ ಪಕ್ಷದ ಶಾಸಕರು ಅಸಮಾಧಾನ ಹೊರ ಹಾಕುವ ಕ್ರಿಯೆ ನಡೆದೇ ಇತ್ತು.
ಜೆಡಿಎಸ್– -ಬಿಜೆಪಿ ಜಟಾಪಟಿ
ಬುಧವಾರದ ವಿಶೇಷ ಎಂದರೆ ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ.ಕುಮಾರಸ್ವಾಮಿ ಅವರಿಗೆ ಮಾತನಾಡಲು ಅವಕಾಶ ನೀಡಬೇಕು ಎಂದು ಆ ಪಕ್ಷದ ಸದಸ್ಯರು ಧರಣಿ ನಡೆಸಿದ್ದು. ಪ್ರಶ್ನೋತ್ತರ ಮತ್ತು ಶೂನ್ಯವೇಳೆ ಮುಗಿದ ನಂತರ ಬಿಜೆಪಿಯ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಕಸ್ತೂರಿರಂಗನ್ ವರದಿ ಬಗ್ಗೆ ನಿಲುವಳಿ ಮಂಡಿಸಲು ಮುಂದಾದರು.
ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಜೆಡಿಎಸ್ನ ವೈ.ಎಸ್.ವಿ.ದತ್ತ ‘ಅಜೆಂಡಾ ಪ್ರಕಾರ ಕಬ್ಬು ಬೆಳೆಗಾರರ ಬಗ್ಗೆ ಮಾತನಾಡಲು ಕುಮಾರಸ್ವಾಮಿ ಅವರಿಗೆ ಅವಕಾಶ ನೀಡಬೇಕು’ ಎಂದು ಒತ್ತಾಯಿಸಿದರು. ಇದನ್ನು ಬಿಜೆಪಿ ಸದಸ್ಯರು ಪ್ರತಿಭಟಿಸಿದರು. ‘ನಿಲುವಳಿ ಸೂಚನೆ ಮಂಡಿಸುವಾಗ ಪ್ರಾರಂಭಿಕ ಮಾತುಗಳಿಗೆ ಅವಕಾಶ ನೀಡಬೇಕು. ನಂತರ ವಿಧಾನಸಭಾಧ್ಯಕ್ಷರು ರೂಲಿಂಗ್ ನೀಡುತ್ತಾರೆ. ಇದು ನಿಯಮ. ಸದನದ ನಿಯಮವನ್ನು ಮುರಿಯಲು ಯಾರಿಗೂ ಹಕ್ಕು ಇಲ್ಲ’ ಎಂದು ವಾದಿಸಿದರು.
ಆಗ ಕೋಪಗೊಂಡ ಜೆಡಿಎಸ್ ಸದಸ್ಯರು ಸಭಾಧ್ಯಕ್ಷರ ಪೀಠದ ಮುಂದೆ ಜಮಾಯಿಸಿ ಬಿಜೆಪಿ ವಿರುದ್ಧ ಘೋಷಣೆ ಕೂಗಲು ಆರಂಭಿಸಿದರು. ‘ಸದನ ಬಿಜೆಪಿ ಸ್ವತ್ತಲ್ಲ’ ಎಂದು ಕೂಗಿದರು. ದತ್ತ, ಚಲುವರಾಯಸ್ವಾಮಿ ಅವರು ಸಭಾಧ್ಯಕ್ಷರ ಪೀಠದ ಬಳಿಗೇ ಬಂದು ‘ಕುಮಾರಸ್ವಾಮಿಗೆ ಮಾತನಾಡಲು ಅವಕಾಶ ಕೊಡಿ’ ಎಂದು ಕೋರಿದರು. ಈ ಸಂದರ್ಭದಲ್ಲಿ ಸದನದಲ್ಲಿ ಕೋಲಾಹಲ ಉಂಟಾಗಿ ಯಾರು ಏನು ಮಾತನಾಡುತ್ತಿದ್ದಾರೆ ಎಂಬುದೇ ತಿಳಿಯಲಿಲ್ಲ. ಸದಸ್ಯರನ್ನು ಸಮಾಧಾನ ಪಡಿಸುವ ಕಾಗೋಡು ಅವರ ಯತ್ನ ಕೂಡ ಫಲ ನೀಡಲಿಲ್ಲ.
‘ಇದನ್ನು ಪ್ರತಿಷ್ಠೆಯಾಗಿ ತೆಗೆದುಕೊಳ್ಳಬೇಡಿ. ಕಲಾಪಕ್ಕೆ ಅವಕಾಶ ನೀಡಿ’ ಎಂಬ ಅವರ ಮನವಿಗೆ ಸದಸ್ಯರು ಸೊಪ್ಪು ಹಾಕಲಿಲ್ಲ.
ಎಚ್ಡಿಕೆ ಔದಾರ್ಯ: ನಂತರ ಕುಮಾರಸ್ವಾಮಿ ಅವರೇ ಎದ್ದು ನಿಂತು, ‘ನಮಗೆ ಪ್ರಚಾರ ಬೇಕಾಗಿಲ್ಲ. ನಾವೇ ಸೋಲುತ್ತೇವೆ. ನೀವು ಆರಂಭಿಕ ಮಾತುಗಳನ್ನು ಆಡಿ. ನಂತರವೇ ನಾನು ಮಾತನಾಡುತ್ತೇನೆ’ ಎಂದು ಬಿಜೆಪಿ ಸದಸ್ಯರಿಗೆ ಹೇಳಿದರು. ಆಗ ಜೆಡಿಎಸ್ ಸದಸ್ಯರು ಧರಣಿ ವಾಪಸು ಪಡೆದುಕೊಂಡರು.
ಆಗ ವಿಶ್ವೇಶ್ವರ ಹೆಗಡೆ ಮಾತನಾಡಲು ಆರಂಭಿಸಿದಾಗ ಎದ್ದು ನಿಂತ ಚಲುವರಾಯಸ್ವಾಮಿ ‘ಅಧಿಕೃತ ವಿರೋಧ ಪಕ್ಷವಾದ ಬಿಜೆಪಿಗೆ ಬೇರೆಯವರ ಮಾತು ಕೇಳುವ ಸಂಯಮ ಬೇಕು’ ಎಂದು ಬುದ್ಧಿಮಾತು ಹೇಳಿದರು.