ಮಂಡ್ಯ: ಕಬ್ಬಿಗೆ ಬೆಲೆ ನಿಗದಿ ಮಾಡಬೇಕು ಹಾಗೂ ಕಳೆದ ವರ್ಷದ ಬಾಕಿ ಹಣ ನೀಡಬೇಕು ಎಂದು ಆಗ್ರಹಿಸಿ ರೈತ ಸಂಘದ ಸದಸ್ಯರು ಜಿಲ್ಲೆಯಲ್ಲಿ ಬುಧವಾರ ಬೆಂಗಳೂರು– ಮೈಸೂರು ರಸ್ತೆಯ ವಿವಿಧೆಡೆ ರಸ್ತೆ ತಡೆ ನಡೆಸಿ ಪ್ರತಿಭಟನೆ ಮಾಡಿದರು. ಇದರಿಂದಾಗಿ ಈ ಮಾರ್ಗದಲ್ಲಿ ಒಂದು ಗಂಟೆಗೂ ಹೆಚ್ಚು ಕಾಲ ವಾಹನಗಳ ಸಂಚಾರ ಅಸ್ತವ್ಯಸ್ತಗೊಂಡಿತು. ಕೆಲವು ವಾಹನಗಳನ್ನು ಮಳವಳ್ಳಿ ಮಾರ್ಗವಾಗಿ ಕಳುಹಿಸಲಾಯಿತು. ಮಧ್ಯಾಹ್ನದ ನಂತರ ವಾಹನ ಸಂಚಾರ ಸುಗಮಗೊಂಡಿತು.
ರೈತ ಆತ್ಮಾಹುತಿಗೆ ಯತ್ನ: ಮದ್ದೂರು ತಾಲ್ಲೂಕಿನ ಗೆಜ್ಜಲಗೆರೆಯ ಬಳಿಯೂ ಕೆಲಕಾಲ ರಸ್ತೆತಡೆ ನಡೆಸಿ ಪ್ರತಿಭಟನೆ ಮಾಡಲಾಯಿತು. ಪೊಲೀಸರು ಪ್ರತಿಭಟನಾಕಾರರನ್ನು ವಶಕ್ಕೆ ತೆಗೆದುಕೊಳ್ಳಲು ಮುಂದಾದಾಗ ಅಭಿಲಾಷ್ ಎಂಬ ಯುವ ರೈತನೊಬ್ಬ ಕೊರಳಿಗೆ ಹಗ್ಗ ಸುತ್ತಿಕೊಂಡು ಆತ್ಮಾಹುತಿಗೆ ಯತ್ನಿಸಿದ. ಕೂಡಲೇ ಅಕ್ಕಪಕ್ಕದಲ್ಲಿದ್ದವರು ಹಗ್ಗ ತೆಗೆದು ಬಿಸಾಡಿ ಸಮಾಧಾನಪಡಿಸಿದರು.
ಬೆಂಗಳೂರು– ಮೈಸೂರು ರಸ್ತೆಯ ಮಂಡ್ಯ ತಾಲ್ಲೂಕಿನ ವಿ.ಸಿ. ಫಾರಂ ಗೇಟ್ ಬಳಿ ಬೆಳಿಗ್ಗೆ 11 ಗಂಟೆಯ ವೇಳೆಗೆ ಜಾನುವಾರುಗಳೊಂದಿಗೆ ಬಂದ ರೈತರು ರಸ್ತೆ ತಡೆದು ಪ್ರತಿಭಟನೆ ಆರಂಭಿಸಿದರು. ಟನ್ ಕಬ್ಬಿಗೆ ಮುಂಗಡವಾಗಿ
₨ 2,500 ರೂಪಾಯಿ ನೀಡಬೇಕು. ಅಂತಿಮ ದರ ಎಂದು ₨ 3,000 ನಿಗದಿ ಮಾಡಬೇಕು. ಕಳೆದ ವರ್ಷದ ₨ 100 ಬಾಕಿಯನ್ನು ಕೂಡಲೇ ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿದರು.
ಸರ್ಕಾರಿ ಸ್ವಾಮ್ಯದ ಮೈಷುಗರ್ ಕಾರ್ಖಾನೆ ಪುನಃಶ್ಚೇತನಕ್ಕೆ ಸರ್ಕಾರ ಮುಂದಾಗಬೇಕು. ಆ ಮೂಲಕ ರೈತರ ಹಿತರಕ್ಷಣೆ ಮಾಡಬೇಕು. ಕಬ್ಬು, ತೆಂಗು ಸೇರಿದಂತೆ ಹಲವು ಬೆಳೆ ಬೆಳೆಯಲು ಪಂಪ್ಸೆಟ್ ಅವಲಂಬಿಸಿದ್ದೇವೆ. 10 ಗಂಟೆ ನಿರಂತರವಾಗಿ ವಿದ್ಯುತ್ ನೀಡಬೇಕು ಎಂದು ಆಗ್ರಹಿಸಿದರು. ರಸ್ತೆ ತಡೆ ನಿಲ್ಲಿಸಬೇಕು ಎಂಬ ಪೊಲೀಸರ ಮನವಿಗೆ ಓಗೊಡದಿದ್ದಾಗ ಪ್ರತಿಭಟನಕಾರರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡು ನಂತರ ಬಿಡುಗಡೆ ಮಾಡಿದರು.