ಕರಾವಳಿ

ಉಡುಪಿಯ ಮಾಬುಕಳದಲ್ಲಿ ಅಗ್ನಿ ಅವಘಡ: ನವವಿವಾಹಿತೆ ದಾರುಣ ಸಾವು: ಮೊಬೈಲ್ ಸ್ಫೋಟ ಶಂಕೆ

Pinterest LinkedIn Tumblr

ಉಡುಪಿ: ಮನೆಯಲ್ಲಿದ್ದ ವೇಳೆ ಸಂಭವಿಸಿದ ಅಗ್ನಿ ಅವಘಡದಲ್ಲಿ ಬೆಂಕಿ ತಗುಲಿ ನವವಿವಾಹಿತ ಮಹಿಳೆ ದಾರುಣವಾಗಿ ಮೃತಪಟ್ಟ ಘಟನೆ ಉಡುಪಿ ಜಿಲ್ಲೆಯ ಬ್ರಹ್ಮಾವರ ಸಮೀಪದ ಮಾಬುಕಳ ಎಂಬಲ್ಲಿ ಸಂಭವಿಸಿದೆ. ಅಶ್ವಿನಿ ಕುಂದರ್ (26) ಮೃತ ದುರ್ದೈವಿ.

ಉಡುಪಿ ಮೂಲದ ಯುವಕನೊಂದಿಗೆ ಕಳೆದ ಎರಡು ತಿಂಗಳ ಹಿಂದಷ್ಟೆ ವಿವಾಹವಾಗಿದ್ದ ಅಶ್ವಿನಿ ಪಡುಕೆರೆ ಕಾಲೇಜಿನಲ್ಲಿ ಪ್ರಾಧ್ಯಾಪಕಿಯಾಗಿದ್ದರೆನ್ನಲಾಗಿದೆ. ವಿವಾಹದ ಬಳಿಕ ಪತಿಯ ಮನೆಯಲ್ಲಿದ್ದ ಅವರು ಸೋಮವಾರ ಮಾಬುಕಳದ ತಾಯಿ ಮನೆ ಬಳಿ ನಡೆಯಲಿದ್ದ ದೈವಸ್ಥಾನದ ಜಾತ್ರೆ ಹಿನ್ನೆಲೆ ಆಗಮಿಸಿದ್ದರು. ರಾತ್ರಿ ವೇಳೆ ಮನೆ ಹೊರಭಾಗದಲ್ಲಿ ಮೊಬೈಲ್ ಫೋನಿನಲ್ಲಿ ಮಾತನಾಡುತ್ತಿದ್ದ ವೇಳೆ ಬೆಂಕಿ ಅವಘಡ ಸಂಭವಿಸಿದ್ದು ಸಮೀಪದ ಹುಲ್ಲು ಶೇಖರಿಸಿಟ್ಟ ರಾಶಿಗೂ ಬೆಂಕಿ ತಗುಲಿದೆ. ಮೇಲ್ನೋಟಕ್ಕೆ ಮೊಬೈಲ್ ಸ್ಫೋಟವಾಗಿ ಬೆಂಕಿ ಅವಘಡ ಸಂಭವಿಸಿದೆ ಎನ್ನಲಾಗುತ್ತಿದ್ದು ಗಂಭೀರ ಗಾಯಗೊಂಡ ಅಶ್ವಿನಿ ಅವರನ್ನು ಮಂಗಳೂರು ಆಸ್ಪತ್ರೆಗೆ ಚಿಕಿತ್ಸೆಗಾಗಿ ಕರೆದೊಯ್ಯಲಾಯಿತು. ಚಿಕಿತ್ಸೆ ಪಡೆಯುತ್ತಿದ್ದ ಅವರು ಫಲಕಾರಿಯಾಗದೇ ಇಂದು ಬೆಳಿಗ್ಗೆ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು.

ಉಡುಪಿ ಅಗ್ನಿಶಾಮಕ ದಳ ಸಿಬ್ಬಂದಿಗಳು ಹುಲ್ಲಿಗೆ ಹಚ್ಚಿದ್ದ ಬೆಂಕಿ ನಂದಿಸಿದ್ದರು. ಕೋಟ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ.

(ವರದಿ- ಯೋಗೀಶ್ ಕುಂಭಾಸಿ)

Comments are closed.