ಕರಾವಳಿ

ವಿಪಕ್ಷ ನಾಯಕರು ಕೂಡ ಮೋದಿಜಿಯವರನ್ನು ಹೊಗಳುತ್ತಿದ್ದಾರೆ : ಶಾಸಕ ಕಾಮತ್ ಹರ್ಷ

Pinterest LinkedIn Tumblr

ಮಂಗಳೂರು : ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ, ಸಮಾಜವಾದಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷ, ಸಂಸದ ಮುಲಾಯಂ ಸಿಂಗ್ ಯಾದವ್ ಅವರು ನರೇಂದ್ರ ಮೋದಿಯವರೇ ನಮ್ಮ ದೇಶದ ಮುಂದಿನ ಪ್ರಧಾನಿಯಾಗಲಿ ಎಂದು ಹೇಳಿರುವುದನ್ನು ಮಂಗಳೂರು ನಗರ ದಕ್ಷಿಣ ಶಾಸಕ ಡಿ ವೇದವ್ಯಾಸ ಕಾಮತ್ ಸ್ವಾಗತಿಸಿದ್ದಾರೆ.

ತುಂಬಿದ ಸಂಸತ್ತಿನಲ್ಲಿ ಯುಪಿಎ ಅಧ್ಯಕ್ಷೆ ಶ್ರೀಮತಿ ಸೋನಿಯಾ ಗಾಂಧಿಯವರ ಪಕ್ಕದ ಆಸನದಲ್ಲಿ ಕುಳಿತುಕೊಳ್ಳುವ ಪ್ರಭಾವಿ ನಾಯಕ ಮುಲಾಯಂ ಸಿಂಗ್ ಯಾದವ್ ಅವರು ಸೋನಿಯಾ ಗಾಂಧಿಯವರ ಸಮ್ಮುಖದಲ್ಲಿ ಮೋದಿಯವರು ಮುಂದಿನ ಬಾರಿಯೂ ಪ್ರಧಾನಿ ಯಾಗಲಿ ಎಂದು ಹೇಳಿರುವುದು ಚಿಕ್ಕ ವಿಷಯವಲ್ಲ.

ಮೋದಿಯವರು ಇಡೀ ಸಂಸತ್ತನ್ನು ಐದು ವರ್ಷಗಳಲ್ಲಿ ನಡೆಸಿಕೊಂಡು ಹೋದ ರೀತಿಯನ್ನು ನೋಡಿ ಎಲ್ಲಾ ಸಂಸದರು ಪಕ್ಷಾತೀತವಾಗಿ ಸಂತಸ ವ್ಯಕ್ತಪಡಿಸಿದ್ದಾರೆ. ಅದನ್ನು ನೋಡಿ ಮುಲಾಯಂ ಸಿಂಗ್ ಅವರಂತಹ ರಾಜಕೀಯ ಮುತ್ಸದ್ದಿಗಳ ಬಾಯಲ್ಲಿಯೂ ಮೋದಿಯವರ ನ್ನು ಹೊಗಳದೇ ಇರಲು ಸಾಧ್ಯವಾಗಿಲ್ಲ ಎಂದು ಶಾಸಕ ಕಾಮತ್ ತಿಳಿಸಿದ್ದಾರೆ.

ಮೋದಿಯವರು ಇಡೀ ರಾಷ್ಟ್ರವನ್ನು ವಿಕಾಸದೆಡೆಗೆ ತೆಗೆದುಕೊಂಡು ಹೋದ ಶೈಲಿ, ತೆಗೆದುಕೊಂಡಿರುವ ನಿರ್ಧಾರಗಳು, ಸಬ್ ಕಾ ಸಾತ್, ಸಬ್ ಕಾ ವಿಕಾಸ್ ನೀತಿಗಳು ವಿರೋಧ ಪಕ್ಷದವರ ಬಾಯಿಯಲ್ಲಿಯೂ ಮೋದಿಯೇ ಮುಂದಿನ ಪ್ರಧಾನಿಯಾಗಲಿ ಎಂದು ಹೇಳುವಂತಾಗಿರುವುದು ನಮ್ಮ ವಿಜಯದ ಮೊದಲ ಮೆಟ್ಟಿಲು ಎಂದು ಶಾಸಕ ಕಾಮತ್ ಹರ್ಷ ವ್ಯಕ್ತಪಡಿಸಿದ್ದಾರೆ.

Comments are closed.