ಕರಾವಳಿ

ಮಂಗಳೂರಿನಲ್ಲಿ ಕ್ಷಯ ರೋಗ ಪತ್ತೆ ಮತ್ತು ಚಿಕಿತ್ಸೆ ಆಂದೋಲನಕ್ಕೆ ಸಚಿವ ಖಾದರ್ ಚಾಲನೆ

Pinterest LinkedIn Tumblr

ಮಂಗಳೂರು ಜನವರಿ,02 : ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ಜನವರಿ 2 ರಿಂದ 12 ರವರೆಗೆ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಕ್ಷಯ ರೋಗ ಪತ್ತೆ ಮತ್ತು ಚಿಕಿತ್ಸೆ ಆಂದೋಲನವನ್ನು ಬುಧವಾರ ನಗರಾಭಿವೃದ್ಧಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವರಾದ ಯು.ಟಿ.ಖಾದರ್ ಉದ್ಘಾಟಿಸಿದರು.

ನಗರದ ಕೋಡಿಕಲ್‌ನ ಕುದ್ಮುಲ್ ರಂಗರಾವ್ ಕೊರಗ ಸಮುದಾಯ ಭವನದಲ್ಲಿ ಸಚಿವರು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಈ ಸಂರ್ಭದಲ್ಲಿ ಮಾತನಾಡಿದ ಸಚಿವ ಯು.ಟಿ.ಖಾದರ್, ನಮ್ಮ ಜೀವನ ಶೈಲಿ ಬದಲಾದಂತೆ ಆರೋಗ್ಯದಲ್ಲಿ ಬದಲಾವಣೆಗಳಾಗುತ್ತವೆ. ನಮ್ಮ ಸುತ್ತಮುತ್ತಲ ಪ್ರದೇಶಗಳು ಸ್ವಚ್ಛವಾಗಿಟ್ಟು ಆರೋಗ್ಯ ಕಾಪಾಡಿಕೊಳ್ಳಬೇಕು. ಈ ನಿಟ್ಟಿನಲ್ಲಿ ಉತ್ತಮ ಆರೋಗ್ಯಕ್ಕಾಗಿ ಸರ್ಕಾರ ವಿವಿಧ ಉಚಿತಾ ಚಿಕಿತ್ಸೆಗಳನ್ನು ಹಮ್ಮಿಕೊಂಡಿದೆ ಎಂದು ನುಡಿದರು.

ಭಾರತ ದೇಶದ ಮೂಲ ನಿವಾಸಿಗಳೆಂದರೆ ಅದು ಕೊರಗ ಸಮುದಾಯದವರು.ದೇಶದ ಸಂಸ್ಕೃತಿ ಆಚರಣೆ, ವಿಚಾರಣೆಗಳು ಇನ್ನು ಕೂಡ ಈ ಸಮುದಾಯದಲ್ಲಿ ಆಚರಿಸಲ್ಪಡುತ್ತದೆ. ಸರಕಾರದ ವತಿಯಿಂದ ಆರೋಗ್ಯ ಕಾಪಾಡುವ ನಿಟ್ಟಿನಲ್ಲಿ ಹಲವಾರು ಕಾರ್ಯಕ್ರಮ ಹಮ್ಮಿಕೊಂಡಿದ್ದು ಇದರ ಪ್ರಯೋಜನ ಎಲ್ಲರೂ ಪಡೆದುಕೊಳ್ಳಬೇಕು ಎಂದರು.

ಸಚಿವರು ಇದೇ ಸಂದರ್ಭದಲ್ಲಿ ಭಿತ್ತಿ ಪತ್ರಗಳ ಅನಾವರಣ ಮಾಡಿದರು. ಸ್ಥಳೀಯ ಕೊರಗ ನಿವಾಸಗಳಿಗೆ ಸ್ವತಃ ಸಚಿವರೆ ಭೇಟಿ ನೀಡಿ ಕ್ಷಯ ರೋಗ ಚಿಕಿತ್ಸಾ ಆಂದೋಲನದ ಮಾಹಿತಿಯ ಭಿತ್ತಿ ಪತ್ರವನ್ನು ಅಲ್ಲಿನ ಮನೆಯ ಗೋಡೆಗಳಿಗೆ ಅಂಟಿಸಿದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಆರೋಗ್ಯಾಧಿಕಾರಿ ಡಾ. ರಾಮಕೃಷ್ಣ ರಾವ್, ಜಿಲ್ಲಾ ಕ್ಷಯರೋಗ ನಿಯಂತ್ರಣಾಧಿಕಾರಿ ಡಾ. ಬದ್ರುದ್ದೀನ್, ಮಂಗಳೂರು ತಾಲೂಕು ಪಂಚಾಯತ್ ಸದಸ್ಯ ಬಶೀರ್ ಅಹಮದ್, ಕೊರಗ ಸಮುದಾಯದ ಮುಖಂಡ ಕೊಗ್ಗ ಮತ್ತಿತರರು ಉಪಸ್ಥಿತರಿದ್ದರು.

Comments are closed.