ಕರಾವಳಿ

ಬೊಟ್ಟಿಕೆರೆ ಅವರಿಗೆ ಬೋಳಾರ ಪ್ರಶಸ್ತಿ ಪ್ರದಾನ  – ಬೋಳಾರರ ಸ್ಮೃತಿ ಕಲಾವಿದರಿಗೆ ಸ್ಫೂರ್ತಿ: ಒಡಿಯೂರು ಶ್ರೀ

Pinterest LinkedIn Tumblr

ಮಂಗಳೂರು : ‘ಯಕ್ಷಗಾನದ ಪರಂಪರೆ ಹಿರಿಯರ ಬಳುವಳಿ. ಬೋಳಾರ ನಾರಾಯಣ ಶೆಟ್ಟರಂತಹ ಶ್ರೇಷ್ಠ ಕಲಾವಿದರು ಕೀರ್ತಿಶರೀರಿಗಳಾಗಿ ಇಂದಿನ ಕಲಾವಿದರಿಗೆ ಸ್ಫೂರ್ತಿಯಾಗಿದ್ದಾರೆ. ಅಂಥವರ ನೆನಪಿನಲ್ಲಿ ಯಕ್ಷಗಾನಕ್ಕೆ ಕಸುವು ತುಂಬುವ ಕಾರ್ಯಕ್ರಮಗಳು ನಿರಂತರ ನಡೆಯಬೇಕು’ ಎಂದು ಒಡಿಯೂರು ಶ್ರೀ ಗುರುದೇವ ದತ್ತ ಸಂಸ್ಥಾನದ ಶ್ರೀ ಗುರುದೇವಾನಂದ ಸ್ವಾಮೀಜಿ ಹೇಳಿದ್ದಾರೆ.

ಬೋಳಾರ ನಾರಾಯಣ ಶೆಟ್ಟಿ ಯಕ್ಷ ಪ್ರತಿಷ್ಠಾನದ ವತಿಯಿಂದ ಒಡಿಯೂರು ಶ್ರೀಗುರುದೇವ ದತ್ತ ಸಂಸ್ಥಾನದಲ್ಲಿ ಇತ್ತೀಚಿಗೆ ಜರಗಿದ ‘ಬೋಳಾರ ನಾರಾಯಣ ಶೆಟ್ಟಿ ಸಂಸ್ಮರಣೆ ಮತ್ತು ಪ್ರಶಸ್ತಿ ಪ್ರದಾನ’ ಸಮಾರಂಭದಲ್ಲಿ ಸಂಸ್ಮರಣಾ ಜ್ಯೋತಿ ಬೆಳಗಿ ಅವರು ಆಶೀರ್ವಚನ ನೀಡಿದರು.

ಯಕ್ಷಾಂಗಣ ಮಂಗಳೂರು ಇದರ ಕಾರ್ಯಾಧ್ಯಕ್ಷ ಪ್ರೊ.ಭಾಸ್ಕರ ರೈ ಕುಕ್ಕುವಳ್ಳಿ ಅವರು ಸಂಸ್ಮರಣಾ ಭಾಷಣ ಮಾಡಿ ಮಾತನಾಡುತ್ತಾ ‘ ತೆಂಕುತಿಟ್ಟು ಯಕ್ಷರಂಗದಲ್ಲಿ ದೈತ್ಯ ಪ್ರತಿಭೆಯಾಗಿ ಅಭಿನವ ಕೋಟಿ ಎಂದು ಕರೆಸಿಕೊಂಡ ಬೋಳಾರ ನಾರಾಯಣ ಶೆಟ್ಟಿಯವರು ಕನ್ನಡ ಮತ್ತು ತುಳು ಪ್ರಸಂಗಗಳ ಚರಿತ್ರ ನಟ.ಅವರ ಹೆಸರಿನಲ್ಲಿ ಅವರ ಪುತ್ರ ಬೋಳಾರ ಕರುಣಾಕರ ಶೆಟ್ಟರು 2009 ರಲ್ಲಿ ಸ್ಥಾಪಿಸಿದ ಪ್ರತಿಷ್ಠಾನವು ಹತ್ತನೇ ವರ್ಷಕ್ಕೆ ಕಾಲಿರಿಸಿದ್ದು ಇದುವರೆಗೆ18 ಕಲಾವಿದರಿಗೆ ಪ್ರಶಸ್ತಿ ನೀಡಿ ಪುರಸ್ಕರಿಸಿದೆ’ ಎಂದು ನುಡಿದರು.

ಇದೇ ಸಂದರ್ಭದಲ್ಲಿ ಹಿರಿಯ ಭಾಗವತ ಮತ್ತು ಪ್ರಸಂಗಕರ್ತ ಬೊಟ್ಟಿಕೆರೆ ಪುರುಷೋತ್ತಮ ಪೂಂಜ ಮತ್ತು ಶೋಭಾ ಪೂಂಜ ದಂಪತಿಗೆ ‘ಬೋಳಾರ ದಶಮಾನ ಪ್ರಶಸ್ತಿ’ ಯನ್ನು ಒಡಿಯೂರು ಶ್ರೀ ಪ್ರದಾನ ಮಾಡಿದರು. ಟೈಮ್ಸ್‌ ಗ್ರೂಪ್ ನ ಪ್ರಸರಣಾಧಿಕಾರಿ ಕದ್ರಿ ನವನೀತ ಶೆಟ್ಟಿ ಅಭಿನಂದನಾ ಭಾಷಣ ಮಾಡಿದರು. ಕೆ.ಲಕ್ಷ್ಮೀ ನಾರಾಯಣ ರೈ ಹರೇಕಳ ಸನ್ಮಾನ ಪತ್ರ ವಾಚಿಸಿದರು.

ಸಾಧ್ವಿ ಮಾತಾನಂದಮಯಿ, ವೈದಿಕ ವಿದ್ವಾಂಸ ಹಿರಣ್ಯ ವೆಂಕಟೇಶ್ವರ ಭಟ್, ಹಿರಿಯ ಪತ್ರಕರ್ತ ಮಲಾರ್ ಜಯರಾಮ ರೈ ಅತಿಥಿಗಳಾಗಿದ್ದರು.ಬೋಳಾರ ಪ್ರತಿಷ್ಠಾನದ ಸಂಚಾಲಕ ಬೋಳಾರ ಕರುಣಾಕರ ಶೆಟ್ಟಿ, ಜಯಶೀಲ ಧನಂಜಯ ಶೆಟ್ಟಿ, ವಾಸುದೇವ ಆರ್.ಕೊಟ್ಟಾರಿ, ಬೋಳಾರ ಗೋಪಾಲ ಶೆಟ್ಟಿ , ಕೀರ್ತನ್ ಶೆಟ್ಟಿ, ಕಿಶನ್ ಶೆಟ್ಟಿ ಉಪಸ್ಥಿತರಿದ್ದರು. ಯಶವಂತ ವಿಟ್ಲ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಸದಾಶಿವ ಅಳಿಕೆ ವಂದಿಸಿದರು.

Comments are closed.