ಕರಾವಳಿ

‘ಸಮಾಜಸೇವಕನ ಧಾರ್ಮಿಕ ಕ್ರಾಂತಿ’: ಕೊರಗ ಅರ್ಚಕರಿಂದ ಪೂಜೆ ಮಾಡಿಸಿದ ನಿತ್ಯಾನಂದ ಒಳಕಾಡು

Pinterest LinkedIn Tumblr

ಉಡುಪಿ: ನಿನ್ನೆ ನಾಡಿನಾದ್ಯಂತ ದಸರಾ ಮಹೋತ್ಸವ ಸಂಭ್ರಮ. ಈ ನಡುವೆ ಉಡುಪಿಯಲ್ಲಿ ಧಾರ್ಮಿಕ ಆಚರಣೆಯಲ್ಲಿ ಕ್ರಾಂತಿಯಾಗಿದೆ. ಸಮಾಜಸೇವಕ ನಿತ್ಯಾನಂದ ಒಳಕಾಡು ಧಾರ್ಮಿಕ ಆಚರಣೆಯಲ್ಲಿ ಒಂದು ದೊಡ್ಡ ಹೆಜ್ಜೆ ಇಟ್ಟಿದ್ದಾರೆ.

ಉಡುಪಿ ಜಿಲ್ಲಾ ನಾಗರೀಕ ಸಮಿತಿ ಟ್ರಸ್ಟ್ ವತಿಯಿಂದ ಆಯುಧ ಪೂಜೆ ನಡೆಯಿತು. ಉಚಿತ ಸೇವೆ ಒದಗಿಸುವ ಎರಡು ಜೀವರಕ್ಷಕ ಅಂಬಲೇನ್ಸ್, ಉಚಿತ ಸೇವೆಯ ವಿದ್ಯುತ್ ಚಾಲಿತ ಶೀತಲಿಕೃತ ಶವ ರಕ್ಷಣಾ ಯಂತ್ರ, ಹಸಿರು ಅಭಿಯಾನದ ಸೈಕಲ್ ರಿಕ್ಷಾ, ಬೈಕ್ ಗಳಿಗೆ ಪೂಜೆ ಮಾಡಲಾಯ್ತು.

ಪೂಜೆ ಮಾಡಿದ್ರೆ ಅದ್ರಲ್ಲೇನು ವಿಶೇಷ ಅಂತ ಕೇಳ್ಬೇಡಿ. ಪೂಜೆ ಮಾಡಿದ್ದು ಬ್ರಾಹ್ಮಣ ಮತ್ತಿತರ ಮೇಲಗಜಾತಿಯ ಅರ್ಚಕರಲ್ಲ. ಕೊರಗ ಸಮುದಾಯದ ವ್ಯಕ್ತಿ ವಾಹನ ಪೂಜೆ ಮಾಡುವ ಮೂಲಕ ಕ್ರಾಂತಿ ಮಾಡಿದ್ದಾರೆ. ನಗರದ ಚಿತ್ತರಂಜನ್ ಸರ್ಕಲ್ ಬಳಿಯ ಮಾರುಥಿ ವಿಥಿಕಾದಲ್ಲಿ ವಾಹನ ಪೂಜೆ ನಡೆಸಿದ್ದು ಸುಂದರ ಕೊರಗ. ಕೊರಗಜ್ಜ ದೈವದ ಚಾಕರಿ ( ಸೇವೆ) ಮಾಡುವ ಸುಂದರ ಕೊರಗ ವಾಹನ ಪೂಜೆ ಮಾಡಿದ್ದಾರೆ.

ಎಚ್. ಸುಂದರ ಕೊರಗ ಮಂಚಿ ಗ್ರಾಮದವರಾಗಿದ್ದು, ತಮ್ಮ ಬುಡಕಟ್ಟು ಕೊರಗ ಸಂಪ್ರದಾಯದಂತೆ ಶುದ್ಧ, ಕರ್ಪೂರಾರತಿ, ಆರತಿ ಸೇವೆ, ಈಡುಗಾಯಿ ಒಡೆದು ಪೂಜೆ ಸಲ್ಲಿಸಿದ್ದಾರೆ. ಇದೇ ಮೊದಲ ಬಾರಿಗೆ ನಾನು ದಸರಾ ಸಂದರ್ಭ ವಾಹನ ಪೂಜೆ ಮಾಡಿದ್ದೇನೆ. ಬಹಳ ಖುಷಿಯಾಗುತ್ತಿದೆ ಈ ಬೆಳವಣಿಗೆ ನನಗೆ ,ನಮ್ಮ ಸಮಾಜಕ್ಕೆ ಸಿಕ್ಕ ದೊಡ್ಡ ಗೌರವ ಅಂತ ಸುಂದರ ಕೊರಗ ಹೇಳಿದ್ದಾರೆ.

ಈ ಮೂಲಕ ಸಮಾಜದಲ್ಲಿ ಕೊರಗರಿಗೂ ಸ್ಥಾನಮಾನವಿದೆ, ಅವರೂ ಸಾರ್ವಜನಿಕವಾಗಿ ಮುಂದೆ ಬರಬೇಕು ಎಂಬ ಆಶಯವನ್ನುಉಡುಪಿ ಜಿಲ್ಲಾ ನಾಗರೀಕ ಸಮಿತಿಯ ಸಮಾಜ ಸೇವಕ ನಿತ್ಯಾನಂದ ಒಳಕಾಡು ತೋರಿಸಿಕೊಟ್ಟಿದ್ದಾರೆ. ನಮ್ಮ ಸೇವೆ ಜಾತ್ಯಾತೀತ ಮತ್ತು ಧರ್ಮಾತೀತ. ಎಲ್ಲಾ ಜನರಿಗೂ ನಮ್ಮ ಸೇವೆ ಉಚಿತ. ಕೊರಗ ಸಮುದಾಯಕ್ಕೆ ಮೇಲ್ಪಂಕ್ತಿ ಹಾಕುವುದು ನಮ್ಮ ಉದ್ದೇಶ. ಅವರು ನಮ್ಮ ನೆಲದ ಮೂಲ ಜನಾಂಗ. ಅವರಿಗೆ ಮೊದಲ ಗೌರವ ಸಲ್ಲಿಸಬೇಕಾದದ್ದು ನಮ್ಮ ಕರ್ತವ್ಯ ಅಂತ ಹೇಳಿದರು.

ಸಮಾಜ ಸೇವಕರಾದ ತಾರನಾಥ ಮೇಸ್ತ ವಿನಯಚಂದ್ರ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ನೂರಾರು ಸಾರ್ವಜನಿಕರಿಗೆ ತಿಂಡಿ ತಂಪು ಪಾನೀಯ ಸವಿದು ಕ್ರಾಂತಿಗೆ ಕಾರಣವಾದರು.

Comments are closed.