ಮಂಗಳೂರು ಜನವರಿ 09 : ಪ್ರಸವ ಪೂರ್ವದಲ್ಲಿ ಗರ್ಭದ ಭ್ರೂಣಲಿಂಗ ಪತ್ತೆ ಮಾಡುವ ಸ್ಕ್ಯಾನಿಂಗ್ ಸೆಂಟರ್ಗಳ ವಿರುದ್ದ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾ ಆರೋಗ್ಯಾಧಿಕಾರಿ ರಾಮಕೃಷ್ಣರಾವ್ ಹೇಳಿದರು.
ಅವರು ಇಂದು ಮಧ್ಯಾಹ್ನ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳ ಕಛೇರಿಯಲ್ಲಿ ನಡೆದ ಜಿಲ್ಲಾ ಮಟ್ಟದ ಸಲಹಾ ಸಮಿತಿಯ ಸಭೆಯಲ್ಲಿ ಮಾತನಾಡಿದರು. ಜಿಲ್ಲೆಯಲ್ಲಿ ಅನೇಕ ಸ್ಕ್ಯಾನಿಂಗ್ ಸೆಂಟರ್ಗಳು ಕಾರ್ಯಚರಿಸುತ್ತಿದ್ದು ಅವುಗಳ ಕಾರ್ಯವೈಖರಿಯ ತಪಾಸನೆಯನ್ನು ಪ್ರತಿವಾರ ನಡೆಸಲಾಗುತ್ತಿದೆ. ಆದರೆ ಕೆಲವು ಸೆಂಟರ್ಗಳು ಅನೈತಿಕವಾಗಿ ಜನನ ಪೂರ್ವ ಪತ್ತೆ ಮಾಡುವ ಮಾಹಿತಿ ಲಭ್ಯವಿರುವುದರಿಂದ ಕಾನೂನಾತ್ಮಕ ಕ್ರಮ ಕೈಗೊಂಡು ಅದರ ನೋಂದಾವಣೆಯನ್ನು ರದ್ದು ಮಾಡಲಾಗುವುದು ಎಂದು ಅವರು ಎಚ್ಚರಿಸಿದರು.
ಜಿಲ್ಲೆಯಲ್ಲಿ ಸ್ಕ್ಯಾನಿಂಗ್ ಉಪಕರಣ ಉಪಯೋಗಿಸುತ್ತಿರುವ ಕಾರ್ಡಿಯಾಲಜಿಸ್ಟ್ಗಳು ಕಾರ್ಡಿಕಾಕ್ಗೆ ಸಂಬಂಧಪಟ್ಟ ಸ್ಕ್ಯಾನ್ಗಳನ್ನು ಹಾಗೂ ಯುರೋಲಾಜಿಸ್ಟ್ಗಳು ಯೋರೋಲಾಜಿಗೆ ಸಂಬಂಧಪಟ್ಟ ಸ್ಕ್ಯಾನಿಂಗ್ಗಳನ್ನು ಮಾತ್ರ ಮಾಡುತ್ತೇವೆ ಎಂಬುದಾಗಿ ಸ್ಟಾಂಪ್ ಪೇಪರ್ನಲ್ಲಿ ನೋಟರಿ ಅಫಿದಾವಿತ್ ಮಾಡಿ ಆರೋಗ್ಯ ಇಲಾಖೆಯ ಜನನ ಪೂರ್ವ ಲಿಂಗ ಪತ್ತೆ ವಿಭಾಗಕ್ಕೆ ಸಲ್ಲಿಸಬೇಕಾಗುತ್ತದೆ ತಿಳಿಸಿದರು.
ಸಲಹಾ ಸಮಿತಿಯ ಅಧ್ಯಕ್ಷೆ ಡಾ ರಶ್ಮಿ ಮಾತನಾಡಿ ಜನನ ಪೂರ್ವ ಲಿಂಗ ನಿರ್ಣಯದ ಕುರಿತು ಅರಿವು ಮೂಡಿಸಲು ಇದೇ ತಿಂಗಳು ಬಾನುಲಿ ಮೂಲಕ ಮಾಹಿತಿಯನ್ನು ನೀಡಲಾಗುವುದು ಎಂದು ಅವರು ಹೇಳಿದರು.
ಸಭೆಯಲ್ಲಿ ಸರಕಾರಿ ಲೇಡಿಗೋಷನ್ ಆಸ್ಪತ್ರೆಯ ಅಧೀಕ್ಷಕಿ ಸವಿತಾ, ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ಸಿಕಂದರ್ ಪಾಷ, ಡಾ ರತಿಕಾ ಶೆಣೈ, ನ್ಯಾಯವಾದಿ ಚಂದ್ರಹಾಸ ಕೆ ಮತ್ತಿತರರು ಉಪಸ್ಥಿತರಿದ್ದರು.
Comments are closed.