ಕರಾವಳಿ

ಕಂಬಳ ನೂರು ಕಾಲ ನಡೆಯಬೇಕು : ಮಂಗಳೂರಿನಲ್ಲಿ ರಾಮ-ಲಕ್ಷ್ಮಣ ಜೋಡುಕರೆ ಕಂಬಳಕ್ಕೆ ಚಾಲನೆ ನೀಡಿ ಎನ್.ವಿನಯ ಹೆಗ್ಡೆ

Pinterest LinkedIn Tumblr

ಮಂಗಳೂರು, ಡಿಸೆಂಬರ್. 4: ನಗರದ ಬಂಗ್ರಕೂಳೂರಿನಲ್ಲಿ ಮಂಗಳೂರು ಕಂಬಳ ಸಮಿತಿಯ ವತಿಯಿಂದ ಹಮ್ಮಿಕೊಳ್ಳಲಾದ ರಾಮ-ಲಕ್ಷ್ಮಣ ಜೋಡುಕರೆ ಕಂಬಳವನ್ನು ನಿಟ್ಟೆ ವಿಶ್ವವಿದ್ಯಾನಿಲಯದ ಕುಲಾಧಿಪತಿ ಎನ್.ವಿನಯ ಹೆಗ್ಡೆ ಅವರು ಬಾನುವಾರ ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ಸಮಾರಂಭವನ್ನುದ್ದೇಶಿಸಿ ಮಾತನಾಡಿದ ವಿನಯ ಹೆಗ್ಡೆ ಅವರು, ನಮ್ಮ ಹಿರಿಯರು ಬಿಟ್ಟು ಹೋದ ಈ ಕಲೆ ಜಾತ್ರೆಯ ರೀತಿ ಆಚರಣೆಯಾಗಬೇಕು. ನಾಡಿನ ಪುರಾತನ ಸಂಸ್ಕೃತಿಯನ್ನು ಬಿಂಬಿಸುವ ಈ ಕಂಬಳ ನೂರು ಕಾಲ ನಡೆಯಬೇಕು. ಈ ಮೂಲಕ ಜಿಲ್ಲೆಯ ಜನತೆಗೆ ಕಂಬಳದ ಸೌಂದರ್ಯ ಲಭ್ಯವಾಗಬೇಕು ಎಂದರು.

ನೆಲದ ಗ್ರಾಮೀಣ ಕ್ರೀಡೆಯಾಗಿರುವ ಕಂಬಳಕ್ಕೆ ಕಾನೂನು ತೊಡಕು ಎದುರಾದಾಗ ಅದನ್ನು ರಾಜ್ಯ ಹಾಗೂ ಕೇಂದ್ರ ಸರಕಾರಗಳು ಸಮರ್ಥವಾಗಿ ನಿಭಾಯಿಸಿ ಮತ್ತೆ ಕಂಬಳಕ್ಕೆ ಅವಕಾಶ ಮಾಡಿಕೊಟ್ಟಿವೆ. ಇದೀಗ ಮಂಗಳೂರು ನಗರದಲ್ಲೇ ದೊಡ್ಡ ಮಟ್ಟದ ಕಂಬಳ ಆಯೋಜನೆಗೊಂಡಿರುವುದು ಅಭಿಮಾನದ ವಿಚಾರ ಎಂದು ಮಂಗಳೂರು ದಕ್ಷಿಣ ವಿಧಾನ ಸಭಾ ಕ್ಷೇತ್ರದ ಶಾಸಕ ಜೆ.ಆರ್.ಲೋಬೋ ಹೇಳಿದರು.

ತುಳುನಾಡಿನಲ್ಲಿ ಕೋಣಗಳನ್ನು ತರಬೇತುಗೊಳಿಸಿ ಈ ರೀತಿ ಕಂಬಳವನ್ನು ನಡೆಸುವುದು ದೇಶದ ಯಾವುದೇ ಭಾಗದಲ್ಲೂ ಕಾಣಲು ಸಿಗುವುದಿಲ್ಲ. ಇದನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ಕೆಲಸವನ್ನು ನಾವೆಲ್ಲರೂ ಮಾಡಬೇಕಿದೆ ಎಂದು ವಿಧಾನ ಪರಿಷತ್‌ನ ವಿರೋಧ ಪಕ್ಷದ ಮುಖ್ಯ ಸಚೇತಕ ಕ್ಯಾ. ಗಣೇಶ್ ಕಾರ್ಣಿಕ್ ಅಭಿಪ್ರಾಯ ಪಟ್ಟರು.

ಎಂ ಆರ್ ಜಿ ಸಮೂಹ ಸಂಸ್ಥೆಯ ಸಿಎಂಡಿ ಕೆ.ಪ್ರಕಾಶ್ ಶೆಟ್ಟಿ ಕಂಬಳ ನಡೆಯುವ ಜೋಡುಕರೆಯನ್ನು ಉದ್ಘಾಟಿಸಿದರು. ರಾಮ-ಲಕ್ಷ್ಮಣ ಜೋಡುಕರೆ ಕಂಬಳದ ರೂವಾರಿ ಹಾಗೂ ಮಂಗಳೂರು ಕಂಬಳ ಸಮಿತಿಯ ಅಧ್ಯಕ್ಷ ಕ್ಯಾ. ಬೃಜೇಶ್ ಚೌಟ ಅಧ್ಯಕ್ಷತೆ ವಹಿಸಿದ್ದರು.

ಕಾರ್ಯಕ್ರಮದಲ್ಲಿ ವಿಧಾನಸಭಾ ಮಾಜಿ ಉಪಸಭಾಪತಿ ಯೋಗೀಶ್ ಭಟ್, ಮೇಯರ್ ಕವಿತಾ ಸನಿಲ್, ಸಮಿತಿಯ ಕಾರ್ಯಾಧ್ಯಕ್ಷ ನಿತಿನ್ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ರವಿಚಂದ್ರ ಪಿ.ಎಂ, ಗೌರವ ಸಲಹೆಗಾರರಾದ ಉಮಾನಾಥ ಕೋಟ್ಯಾನ್, ವಿಜಯಕುಮಾರ್ ಕಂಗಿನಮನೆ, ಸಮಿತಿಯ ಪದಾಧಿಕಾರಿಗಳು ಉಪಸ್ಥಿತರಿದ್ದರು.

Comments are closed.