ಮಂಗಳೂರು, ನವೆಂಬರ್. 29: ಬ್ಯಾಂಕಿನಿಂದ ಕೊಟ್ಯಾಂತರ ರೂ. ದುರ್ಬಳಕೆ ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿ ಬ್ರಾಂಚ್ ಮ್ಯಾನೇಜರ್ ಸಹಿತ ಐದು ಮಂದಿಯನ್ನು ಬಂಧಿಸಿರುವ ಘಟನೆ ಸುರತ್ಕಲ್ ನಲ್ಲಿ ನಡೆದಿದೆ.
ಇಂಡಿಯನ್ ಓವರ್ಸೀಸ್ ಬ್ಯಾಂಕ್ ನ ಕುಳಾಯಿ ಶಾಖೆಯಲ್ಲಿ 55 ಕೋಟಿ ರೂ. ದುರ್ಬಳಕೆ ಪ್ರಕರಣಕ್ಕೆ ಸಂಬಂಧಿಸಿ ಬ್ಯಾಂಕಿನ ಮ್ಯಾನೇಜರ್ ಶೆರಿನ್ ಮಧುಸೂದನ್ ರನ್ನು ಸುರತ್ಕಲ್ ಪೊಲೀಸರು ಬಂಧಿಸಿದ್ದಾರೆ.
ಬ್ಯಾಂಕಿನ ಮ್ಯಾನೇಜರ್ ಶೆರಿನ್ ಮಧುಸೂದನ್ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿದ್ದಾನೆ. ಈತನನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಂಗ ಬಂಧನ ವಿಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಇದೇ ಸಂದರ್ಭದಲ್ಲಿ ಪ್ರಕರಣದಲ್ಲಿ ಸಹಕರಿಸಿದ್ದಾರೆನ್ನಲಾದ ಇತರ ನಾಲ್ವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ ಎಂದು ಮೂಲಗಳಿಂದ ತಿಳಿದು ಬಂದಿದೆ.ಇತರ ನಾಲ್ವರು ಆರೋಪಿಗಳ ಬಂಧನವನ್ನು ನಿರಾಕರಿಸಿರುವ ಪೊಲೀಸರು, ಶರಿನ್ ಮಧುಸೂದನ್ನನ್ನು ಮಾತ್ರ ಬಂಧಿಸಿರುವುದಾಗಿ ತಿಳಿಸಿದ್ದಾರೆ.
ಹಣ ದುರುಪಯೋಗಕ್ಕೆ ಸಂಬಂಧಿಸಿ ಬ್ಯಾಂಕಿನ ಇತರ ಕೆಲವು ಸಿಬ್ಬಂದಿಗಳ ವಿರುದ್ಧವೂ ಆರೋಪಗಳು ಕೇಳಿಬಂದಿದ್ದು, ಈ ಬಗ್ಗೆ ತನಿಖೆ ಮುಂದುವರಿದಿದೆ.