ಕರಾವಳಿ

ಸೌದಿಅರೇಬಿಯದಲ್ಲಿ ಸಂಕಷ್ಟಕ್ಕೆ ಸಿಲುಕಿದ ವಾಮಂಜೂರಿನ ಮಹಿಳೆಯ ರಕ್ಷಣೆ : ನೆರವಿನ ನಿರೀಕ್ಷೆಯಲ್ಲಿ ಬಡಕುಟುಂಬ

Pinterest LinkedIn Tumblr

ಮಂಗಳೂರು : ಅನಾರೋಗ್ಯ ಪೀಡಿತ ಪತಿ ಮತ್ತು ಮಗನ ವಿದ್ಯಾಭ್ಯಾಸದ ಜವಾಬ್ದಾರಿಯನ್ನು ಹೊತ್ತು ಉದ್ಯೋಗಕ್ಕಾಗಿ ಸೌದಿ ಅರೇಬಿಯಾಕ್ಕೆ ತೆರಳಿದ ಮಹಿಳೆಯೋರ್ವರು ಸಂಕಷ್ಟಕ್ಕೆ ಸಿಲುಕಿದ್ದು, ದಕ್ಷಿಣ ಕನ್ನಡ ಜಿಲ್ಲಾ ಎಸ್‌ಡಿಪಿಐ ಸಂಘಟನೆಯ ಮೂಲಕ ಈ ಮಹಿಳೆಯನ್ನು ಪತ್ತೆಹಚ್ಚಿ ರಕ್ಷಿಸುವಲ್ಲಿ ನೆರವಾಗಿದೆ.

ವಾಮಂಜೂರಿನ ಕೆಳರಾಯ್ ಕೋಡಿ ಎರಡನೇ ಬ್ಲಾಕಿನ ನಿವಾಸಿ ಬಾಲಪ್ಪ ಬಾಲಕೃಷ್ಣ (55) ಎಂಬವರ ಪತ್ನಿ ವಿಜಯಾ (43) ಎಂಬವರೇ ಸೌದಿ ಅರೇಬಿಯದಲ್ಲಿ ಸಂಕಷ್ಟಕ್ಕೀಡಾ ಗಿರುವ ಮಹಿಳೆ.

ಹಲವು ತಿಂಗಳಿನಿಂದ ಸರಿಯಾಗಿ ಫೋನ್ ಸಂಪರ್ಕಕ್ಕೆ ಸಿಗದೆ, ಊರಿಗೆ ಮರಳಲು ಸಾಧ್ಯವಾಗದೆ ಸೌದಿ ಅರೇಬಿಯದ ದಮಾಮ್ ಎಂಬ ನಗರದಲ್ಲಿ ಗೃಹ ಬಂಧನದಲ್ಲಿರುವ ಬಗ್ಗೆ ವರದಿಯಾಗಿದೆ. ವಿಜಯಾ ಅವರ ಬಿಡುಗಡೆಯ ನಿರೀಕ್ಷೆಯಲ್ಲಿ ವೃದ್ಧ ಪತಿ ಮತ್ತು ಪ್ರಥಮ ಪಿಯುಸಿಯಲ್ಲಿ ಕಲಿಯುತ್ತಿರುವ ಮಗ ಜಗಜೀವನ್ ದಿನ ದೂಡುತ್ತಿದ್ದಾರೆ. ತೀರಾ ಬಡಕುಟುಂಬಕ್ಕೆ ವಿಜಯಾ ಅವರೇ ಆಧಾರಸ್ತಂಭವಾಗಿದ್ದರು.

2015ರ ಜುಲೈ 15ರಂದು ಬಜ್ಪೆಯ ಮಹಿಳೆಯೋರ್ವರ ಪರಿಚಯದ ಮೂಲಕ ಸೌದಿ ಅರೇಬಿಯಕ್ಕೆ ಮನೆಗೆಲಸದ ಉದ್ಯೋಗಕ್ಕೆಂದು ವಿಜಯಾ ತೆರಳಿದ್ದರು. ಕೆಲವು ತಿಂಗಳು ಮಾತ್ರ ಫೋನ್ ಸಂಪರ್ಕದಲ್ಲಿದ್ದ ವಿಜಯಾ ಅನಂತರದ ದಿನಗಳಲ್ಲಿ ಅಪರೂಪಕ್ಕೊಮ್ಮೆ ಮಾತ್ರ ಸಂಪರ್ಕಕ್ಕೆ ಸಿಗುತ್ತಿದ್ದರು. ಯಾವಾಗಲಾದರೊಮ್ಮೆ ಹಣ ಕಳುಹಿಸಿಕೊಡುತ್ತಿದ್ದರು.

ಆದರೆ ಎರಡು ವರ್ಷಗಳ ಬಳಿಕ ಪತಿಗೆ ವಿಪರೀತ ಅನಾರೋಗ್ಯದ ಕಾರಣ ಊರಿಗೆ ಮರಳಲು ಬಯಸಿದ ವಿಜಯಾರಿಗೆ ಸೌದಿ ಪ್ರಾಯೋಜಕನು ಸ್ಪಂದಿಸಲೇ ಇಲ್ಲ. ವಿಶೇಷವೆಂದರೆ ಇದುವರೆಗೆ ವಿಜಯಾ ಅವರಿಗೆ ಒಂದು ಮೊಬೈಲ್ ಸೌಲಭ್ಯವನ್ನೂ ಪ್ರಾಯೋಜಕನು ಒದಗಿಸಿಲ್ಲ. ಹೀಗಾಗಿ ವಿಜಯಾ ಅವರ ಪರಿಸ್ಥಿತಿ ತಿಳಿಯಲು ಅನಕ್ಷರಸ್ಥ ಬಾಲಕೃಷ್ಣ ಅವರಿಗೆ ಸಾಧ್ಯವಾಗುತ್ತಿರಲಿಲ್ಲ.

ಬಾಲಕೃಷ್ಣ ಅವರು ಊರಿನ ಪರಿಚಯದವರಿಗೆ ಈ ವಿಚಾರವನ್ನು ತಿಳಿಸಿದ್ದರು. ಮಾಹಿತಿ ಪಡೆದ ಎಸ್ ಡಿಪಿಐ ಮುಖಂಡ ರಿಯಾಝ್ ಫರಂಗಿಪೇಟೆ ಅವರು ಸೌದಿ ಅರೇಬಿಯ ದಲ್ಲಿರುವ ಕರಾವಳಿಯ ಯುವಕರಿಗೆ ಮಾಹಿತಿ ನೀಡಿದ್ದು, ಅನಿವಾಸಿ ಭಾರತೀಯರ ಸಂಕಷ್ಟಗಳಿಗೆ ಸ್ಪಂದಿಸುತ್ತಿರುವ ಇಂಡಿಯನ್ ಸೋಶಿಯಲ್ ಫೋರಮ್ ವಿಜಯಾ ಪ್ರಕರಣವನ್ನು ಭಾರತೀಯ ರಾಯಭಾರ ಕಚೇರಿಯ ಗಮನಕ್ಕೆ ತಂದಿರುವುದಾಗಿ ತಿಳಿದುಬಂದಿದೆ.

ಈಗಾಗಲೇ ಪ್ರಕರಣಕ್ಕೆ ಸಂಬಂಧಿಸಿದ ದಾಖಲೆ ಪತ್ರಗಳನ್ನು ರಿಯಾಝ್ ಅವರು ಇಂಡಿಯನ್ ಸೋಶಿಯಲ್ ಫೋರಮ್ ಗೆ ತಲುಪಿಸಿದ್ದು ಶೀಘ್ರದಲ್ಲೇ ವಿಜಯಾ ಅವರು ತವರಿಗೆ ಮರಳುವಂತಾಗಬಹುದು ಎಂಬ ವಿಶ್ವಾಸವನ್ನು ಇಂಡಿಯನ್ ಸೋಶಿಯಲ್ ಫೋರಮ್ ವ್ಯಕ್ತಪಡಿಸಿದೆ.

Comments are closed.