ಕರಾವಳಿ

ಕುಂಬಳೆ ಸಮೀಪ ಭೀಕರ ಅಪಘಾತ : ಕೋಳಿ ಸಾಗಿಸುತ್ತಿದ್ದ ಮಾರುತಿ ಇಕೋ ವ್ಯಾನ್‌ಗೆ ಬೆಂಕಿ -ವ್ಯಾನ್‍ನೊಳಗಿದ್ದ ಇಬ್ಬರು ಮೃತ್ಯು

Pinterest LinkedIn Tumblr

accident_kuble_fire

ಕಾಸರಗೋಡು, ಡಿ.28: ಮಂಗಳೂರು – ಕಾಸರಗೋಡು ರಾಷ್ಟ್ರೀಯ ಹೆದ್ದಾರಿಯ ಕುಂಬಳೆ ಸಮೀಪದ ಮೊಗ್ರಾಲ್ ಕೊಪ್ಪಳ ಬಝಾರ್ನಲ್ಲಿ ಇಂದು ಮುಂಜಾನೆ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಇಬ್ಬರು ಮೃತಪಟ್ಟು, ಇನ್ನೊಬ್ಬರು ಗಾಯಗೊಂಡ ದಾರುಣ ಘಟನೆ ನಡೆದಿದೆ

ಕೋಳಿ ಸಾಗಾಟದ ವ್ಯಾನ್ ಹಾಗೂ ಬಸ್ ನಡುವೆ ಅಪಘಾತ ಸಂಭವಿಸಿದ್ದು, ಅಪಘಾತದ ತೀವ್ರತೆಗೆ ಕೋಳಿ ಸಾಗಾಟದ ವಾಹನದಲ್ಲಿ ಬೆಂಕಿ ಕಾಣಿಸಿಕೊಂಡು ವಾಹನ ಭಾಗಶ: ಬೆಂಕಿಗಾಹುತಿಯಾಗಿದೆ. ಇದೇ ವೇಳೆ ಬಸ್ ಚಾಲಕನ ನಿಯಂತ್ರಣ ತಪ್ಪಿದ ಬಸ್ ಸಮೀಪದ ಮನೆಯ ಗೋಡೆಗೆ ಢಿಕ್ಕಿ ಹೊಡೆದಿದೆ.

ಕೋಳಿ ಸಾಗಾಟದ ವ್ಯಾನ್ ಚಾಲಕ ಪರಪ್ಪಪಳ್ಳಂಜಿ ನಿವಾಸಿ ಉಜ್ವಲ್ ನಾಥ್ (19) ಹಾಗೂ ನೌಕರ ಚೆರ್ಕಳ ಬಾಲಡ್ಕದ ಮಸೂದ್ (21) ಎಂಬವರು ಅಪಘಾತದಲ್ಲಿ ಮೃತಪಟ್ಟ ದುರ್ದೈವಿಗಳು. ಅಪಘಾತದಿಂದ ಬಸ್ ಚಾಲಕ ಗಾಯಗೊಂಡಿದ್ದಾರೆ. ಆತನನ್ನು ಕಾಸರಗೋಡು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಕುಂಬಳೆ ಕಡೆಯಿಂದ ಕಾಸರಗೋಡಿನತ್ತ ಬರುತ್ತಿದ್ದ ಕೋಳಿ ಸಾಗಾಟದ ಮಾರುತಿ ಇಕೋ ವ್ಯಾನ್ ಮತ್ತು ತಿರುವನಂತಪುರದಿಂದ ಮಣಿಪಾಲಕ್ಕೆ ತೆರಳುತ್ತಿದ್ದ ವೋಲ್ವೊ ಬಸ್ ನಡುವೆ ಈ ಅಪಘಾತ ಸಂಭವಿಸಿದೆ. ಮಾರುತಿ ಇಕೋ ವ್ಯಾನ್ ಭಾಗಶ: ಬೆಂಕಿಗಾಹುತಿಯಾದ ಪರಿಣಾಮ ವ್ಯಾನ್ನಲ್ಲಿದ್ದ ಎಂಟು ಬಾಕ್ಸ್ ಕೋಳಿಗಳು ಅಸುನೀಗಿವೆ.

ಕಾಸರಗೋಡಿನಿಂದ ಆಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿಗಳು ಸ್ಥಳೀಯರ ಸಹಕಾರದೊಂದಿಗೆ ಬೆಂಕಿಯನ್ನು ನಂದಿಸಿ ವ್ಯಾನ್ನ ಬಾಗಿಲು ಒಡೆದು ಅದರೊಳಗೆ ಸಿಕ್ಕಿಬಿದ್ದಿದ್ದ ಇಬ್ಬರನ್ನು ಹೊರತೆಗೆದಿದ್ದಾರೆ. ಆದರೆ ಅದಾಗಲೇ ಅವರಿಬ್ಬರೂ ಮೃತಪಟ್ಟಿದ್ದರು. ಇಬ್ಬರ ಮೃತದೇಹ ಕಾಸರಗೋಡು ಜನರಲ್ ಆಸ್ಪತ್ರೆಯ ಶವಾಗಾರದಲ್ಲಿರಿಸಲಾಗಿದೆ.

Comments are closed.