ಮಂಗಳೂರು, ಡಿ.26: ದ.ಕ. ಜಿಪಂ, ತಾಪಂ, ಮನಪಾ,ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಮತ್ತು ಮಂಗಳೂರು ವಿವಿ ಕಾಲೇಜು ಇವುಗಳ ಸಹಯೋಗದಲ್ಲಿ ಕುದ್ರೋಳಿ ಯವಕ ಸಂಘ ಮತ್ತು ಯುವವಾಹಿನಿಯ ಜಂಟಿ ಆಶ್ರಯದಲ್ಲಿ ಫೇಸ್ ಟ್ರಸ್ಟ್ ಮಂಗಳೂರು ಇವರ ಆತಿಥ್ಯದಲ್ಲಿ ‘ಯುವೋಲ್ಲಾಸ-2016’ ಕಾರ್ಯಕ್ರಮ ರವಿವಾರ ನಗರದ ರವೀಂದ್ರ ಕಲಾ ಭವನದಲ್ಲಿ ನಡೆಯಿತು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿತಿಗಳಾಗಿ ಭಾಗವಹಿಸಿದ ಆಹಾರ ಸಚಿವ ಯು.ಟಿ. ಖಾದರ್ ಮಾತನಾಡಿ, ದೇಶದ ಪ್ರಗತಿಗೆ ಯವಜನರ ಪಾತ್ರ ಅತೀ ಮುಖ್ಯವಾಗಿದೆ.ದೇಶದಲ್ಲಿ ಅತ್ಯುತ್ತಮ ಸಮಾಜ ನಿರ್ಮಾಣಕ್ಕೆ ಹಿರಿಯರ ಮಾರ್ಗದರ್ಶನದಲ್ಲಿ ಯುವಜನರು ಮುಂದಾಗಬೇಕು. ಯುವಕರು ದೇಶದ ಆಸ್ತಿಯಾಗಿದ್ದು, ಅವರ ಅಭಿವೃದ್ಧಿಗೆ ಪ್ರೋತ್ಸಾಹ ನೀಡುವುದೇ ಯುವಜನ ಮೇಳದ ಉದ್ದೇಶವಾಗಿದೆ. ಭಾರತ ದೇಶದಲ್ಲಿರುವಷ್ಟು ಸಂಸ್ಕೃತಿ, ಹಬ್ಬಗಳ ಆಚರಣೆ ಸಹಿತ ವಿವಿಧತೆಯ ಜನ ಸಮೂಹ ಬೇರೆ ಯಾವ ದೇಶದಲ್ಲೂ ಕಾಣಲು ಸಾಧ್ಯವಿಲ್ಲ ಎಂದು ಹೇಳಿದರು.
ಜೀವನದಲ್ಲಿ ನಾವು ಮಾಡುವ ಯಾವುದೇ ಕೆಲಸ ಕಾರ್ಯಗಳು ದೇಶಕ್ಕೆ ಮಾರಕವಾಗಿರಬಾರದು ಮಾದಕ ವಸ್ತುಗಳ ಏಜೆಂಟರು 16-17 ವರ್ಷ ವಯಸ್ಸಿನ ಯುವಕರನ್ನು ಗುರಿಮಾಡಿಕೊಳ್ಳುತ್ತಿದ್ದಾರೆ. ಇವುಗಳಿಗೆ ಕಡಿವಾಣ ಹಾಕಲು ಸರಕಾರ ಸೂಕ್ತ ಕ್ರಮಗಳನ್ನು ಕೈಗೊಳ್ಳುತ್ತಿದೆ ಎಂದು ತಿಳಿಸಿದರು.
ವರ್ಧಮಾನ್ ದುರ್ಗಾಶೆಟ್ಟಿ ಕಾರ್ಯಕ್ರಮ ಉದ್ಘಾಟಿಸಿದರು. ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಉಪ ನಿರ್ದೇಶಕ ಪ್ರದೀಪ್ ಡಿಸೋಜ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಪುಂಡಲೀಕ ಹೊಸಬೆಟ್ಟು ಭಾಗವಹಿಸಿದ್ದರು.
ವೇದಿಕೆಯಲ್ಲಿ ತಾಲೂಕು ಕ್ರೀಡಾಧಿಕಾರಿ ಲಿಲ್ಲಿ ಪಾಯಸ್, ತಾಪಂ ಇಒ ಗೋಪಾಲಕೃಷ್ಣ ಭಟ್, ಫೇಸ್ ಟ್ರಸ್ಟ್ ನಿರ್ದೇಶಕ ನರೇಶ್ ಕುಮಾರ್ ಸಸಿಹಿತ್ಲು, ಯುವ ವಾಹಿನಿ ಅಧ್ಯಕ್ಷ ಸುನೀಲ್ ಅಂಚನ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
Comments are closed.