ಕರಾವಳಿ

ಅಪಘಾತ ಗಾಯಾಳುಗಳಿಗೆ ನೆರವು ನೀಡಿದವರಿಗೆ ಜೀವರಕ್ಷಕ ಪ್ರಶಸ್ತಿ

Pinterest LinkedIn Tumblr

axident_saver-awred

ಮ0ಗಳೂರು ಡಿಸೆಂಬರ್ 24 : ಕರ್ನಾಟಕ ಸರಕಾರವು ನೂತನವಾಗಿ ಜಾರಿಗೊಳಿಸಿರುವ ಮುಖ್ಯಮಂತ್ರಿ ಸಾಂತ್ವಾನ ಹರೀಶ್ ಯೋಜನೆಯು ರಾಜ್ಯದ ವ್ಯಾಪ್ತಿಯಲ್ಲಿ ಘಟಿಸಿದ ರಸ್ತೆ ಅಪಘಾತದ ಯಾವುದೇ ಗಾಯಾಳುಗಳಿಗೆ 48 ಗಂಟೆಗಳವರೆಗೆ ಗರಿಷ್ಠ ರೂ. 25000ಗಳ ವರೆಗೆ ಉಚಿತ ತುರ್ತು ಚಿಕಿತ್ಸೆ ಒದಗಿಸಲಾಗುತ್ತದೆ.

ಈ ಯೋಜನೆಯು ದಿನಾಂಕ 08-03-2016 ರಿಂದ ಜಾರಿಯಲ್ಲಿದ್ದು, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಂಗ ಸಂಸ್ಥೆಯಾದ ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್‍ನ ಮೂಲಕ ಅನುಷ್ಠಾನಗೊಳ್ಳುತ್ತಿದೆ. 2015ರ ರಸ್ತೆ ಅಪಘಾತದ ಸಮೀಕ್ಷೆಯು ತಿಳಿಸುವಂತೆ ಅಪಘಾತ ಹಾಗೂ ಸಾವುಗಳ ಸಂಖ್ಯೆಯಲ್ಲಿ ಕರ್ನಾಟಕ ರಾಜ್ಯವು ದೇಶದ 3ನೇ ರಾಜ್ಯವಾಗಿರುತ್ತದೆ. ಈ ಹಿನ್ನಲೆಯಲ್ಲಿ ಸಾರ್ವಜನಿಕರ ಪಾಲ್ಗೊಳ್ಳುವಿಕೆಯಲ್ಲಿ ಮುಖ್ಯಮಂತ್ರಿ ಸಾಂತ್ವಾನ ಹರೀಶ್ ಯೋಜನೆಯನ್ನು ಜಾರಿಗೊಳಿಸಿದೆ.

ಇದೊಂದು ಲೋಕೋಪಕಾರ ಯೋಜನೆಯಾಗಿದ್ದು, ಸಾರ್ವಜನಿಕರ ಪಾಲ್ಗೊಳ್ಳುವಿಕೆ ಅತ್ಯಂತ ಮಹತ್ವದಾಗಿರುತ್ತದೆ. ಜನರ ಭಾಗಿತ್ವವಿಲ್ಲದೆ ಈ ಯೋಜನೆ ಯಶಸ್ವಿಗೊಳಿಸುವುದು ಸಾಧ್ಯವಿಲ್ಲ.

ಆದ್ದರಿಂದ ಸಾರ್ವಜನಿಕರ ಪಾಲ್ಗೊಳ್ಳುವಿಕೆಗೆ ಹಾಗೂ ಅಪಘಾತದಂತಹ ಸಂಕಷ್ಟದ ಸಂದರ್ಭದಲ್ಲಿ ತಕ್ಷಣದ ಚಿಕಿತ್ಸೆ ಒದಗಿಸಲು ಹಾಗೂ ಜೀವ ಉಳಿಸಲು ನೆರವಾಗುವ ದಯಾಳುಗಳಿಗೆ ಸ್ಪಂದನೆ ನೀಡುವ ಪರೋಪಕಾರಿಗಳಿಗೆ “ಜೀವ ರಕ್ಷಕ ಪ್ರಶಸ್ತಿ” ನೀಡುವ ಮೂಲಕ ಅಂತಹ ಲೋಕೋಪಕಾರಿಗಳನ್ನು ಗೌರವಿಸುವುದು ಅತ್ಯಂತ ಸೂಕ್ತವಿದ್ದು, ಅದಕ್ಕಾಗಿ ಜೀವ ರಕ್ಷಕ ಪ್ರಶಸ್ತಿಯನ್ನು ಸ್ಥಾಪಿಸಲಾಗಿದೆ.

ಈ ಪ್ರಶಸ್ತಿಯನ್ನು ಸ್ಥಾಪಿಸುವ ಬಹುಮುಖ್ಯ ಉದ್ದೇಶವೆಂದರೆ ಅಪಘಾತದ ಸಂದರ್ಭದಲ್ಲಿ ಸ್ಥಳದಲ್ಲಿ ಲಭ್ಯವಿರುವ ವ್ಯಕ್ತಿಗಳು ಯಾವುದೇ ವಿಳಂಬವಿಲ್ಲದೆ ಗಾಯಾಳುಗಳನ್ನು ರಕ್ಷಿಸಲು ತಕ್ಷಣವೇ ಆಸ್ಪತ್ರೆಗಳಿಗೆ ಸಾಗಿಸುವುದು ಹಾಗೂ ಚಿಕಿತ್ಸೆ ಕೊಡಿಸಲು ನೆರವಾಗುವುದು ಮುಂತಾದ ಕಾರ್ಯಗಳನ್ನು ನಿರ್ವಹಿಸುವಂತೆ ಪ್ರೋತ್ಸಾಹಿಸುವುದಾಗಿದೆ.

ಈ ರೀತಿ ಸಹಾಯ ನೀಡಿದ ದಯಾಳುಗಳು ಅಥವಾ ಉಪಕಾರಿ ವ್ಯಕ್ತಿಗಳನ್ನು ಗುರುತಿಸಿ ಈ ಅತ್ಯುನ್ನತ ಮಟ್ಟದ ಜೀವರಕ್ಷಕ ಪ್ರಶಸ್ತಿಯನ್ನು ನೀಡಲಾಗುವುದು. ಯಾವುದೇ ಬಹುಮಾನ ಅಥವಾ ಲಾಭದ ನಿರೀಕ್ಷೆಗಳಿಲ್ಲದೆ, ವಿಶೇಷ ಸಂಬಂಧಗಳಿಲ್ಲದೆ ಸ್ವಯಂ ಪ್ರೇರಿತರಾಗಿ ಬಂದು ಅಪಘಾತದ ಗಾಯಾಳುಗಳಿಗೆ ನೆರವಾಗುವ ಅಥವಾ ಸಹಾಯ ಮಾಡುವ ದಯಾಳು ಹಾಗೂ ಉಪಕಾರಿ ವ್ಯಕ್ತಿ ಈ ಪ್ರಶಸ್ತಿಗೆ ಅರ್ಹರಾಗಿರುತ್ತಾರೆ.

ಅರ್ಹತಾ ಮಾನದಂಡಗಳು: ಕರ್ನಾಟಕ ವ್ಯಾಪ್ತಿಯೊಳಗಿನ ರಸ್ತೆ ಅಪಘಾತದ ಗಾಯಾಳುಗಳಿಗೆ ಸಹಾಯ ಮಾಡಲು ಶ್ರಮಿಸುವ ಯಾವುದೇ ವಯಸ್ಸಿನ ವ್ಯಕ್ತಿ/ಯಾವುದೇ ರಾಷ್ಟ್ರೀಯತೆಯ ವ್ಯಕ್ತಿ. ರಸ್ತೆ ಅಪಘಾತ ಗಾಯಾಳುಗಳಿಗೆ ನೆರವಾದ ಅಥವಾ ಜೀವ ಉಳಿಸಲು ಶ್ರಮಿಸಿದ ವ್ಯಕ್ತಿ ಪ್ರಶಸ್ತಿಗಾಗಿ ಸ್ವಯಂ ರೂಪದಲ್ಲಿ ಅಥವಾ ಸಾಕ್ಷಿಯಾದ ವ್ಯಕ್ತಿಯಿಂದ ನಾಮಕರಣಗೊಳ್ಳಬಹುದು.

ಜೀವರಕ್ಷಕ ಪ್ರಶಸ್ತಿಯ ಆಯ್ಕೆ ವಿಧಾನ: ಎಲ್ಲ ನಾಮಕರಣ/ಅರ್ಜಿಗಳನ್ನು ಜಿಲ್ಲಾ ಜೀವರಕ್ಷಕ ಪ್ರಶಸ್ತಿ ಸಮಿತಿಯು ಪರಿಶೀಲಿಸಿ ಮಾರ್ಗಸೂಚಿಗಳ ಅನ್ವಯ ಮೌಲ್ಯಮಾಪನ ನಡೆಸಿ ವ್ಯಕ್ತಿಗಳು ನೀಡಿದ ಸಹಾಯ ಹಾಗೂ ಸದರಿ ಸಹಾಯದಿಂದ ಉಂಟಾದ ಉತ್ತಮ ಪರಿಣಾಮ ಮುಂತಾದವುಗಳನ್ನು ಆಧರಿಸಿ, ಪ್ರಶಸ್ತಿಗಳನ್ನು ಪ್ರಥಮ, ದ್ವಿತೀಯ ಹಾಗೂ ತೃತೀಯ ಎಂದು ವಿಭಾಗಿಸಿ ಘೋಷಿಸಲಾಗುತ್ತದೆ.

ಪ್ರಥಮ ಪ್ರಶಸ್ತಿಯನ್ನು ಬೆಂಗಳೂರಿನಲ್ಲಿ ಇನ್ನುಳಿದ ಪ್ರಶಸ್ತಿಗಳನ್ನು ಸಂಬಂಧಿಸಿದ ಜಿಲ್ಲೆಗಳಲ್ಲಿ ಪ್ರಧಾನ ಮಾಡಲಾಗುವುದು. ಈ ಪ್ರಶಸ್ತಿಯನ್ನು ಒಂದು ವರ್ಷದಲ್ಲಿ 2 ಬಾರಿ ನೀಡಲಾಗುವುದು. ನಾಮಕರಣ/ಅರ್ಜಿಗಳನ್ನು ಜನವರಿ ಯಿಂದ ಜುಲೈ ವರೆಗೆ ಹಾಗೂ ಆಗಸ್ಟ್‍ನಿಂದ ಡಿಸೆಂಬರ್‍ವರಗೆ ಸ್ವೀಕರಿಸಲಾಗುವುದು. ಪ್ರಶಸ್ತಿಗಳನ್ನು ಪ್ರತೀ ವರ್ಷ ಆಗಷ್ಟ್ 15, ಸ್ವಾತಂತ್ರ್ಯ ದಿನಾಚರಣೆ ಮತ್ತು ಜನವರಿ 26 ಗಣರಾಜ್ಯೋತ್ಸವ ಸಂದರ್ಭದಲ್ಲಿ ನೀಡಲಾಗುವುದು. ಉತ್ತಮ ಸೇವಾ ಕರ್ತರನ್ನು/ಉಪಕಾರಿಗಳನ್ನು ಗುರುತಿಸಲು ಹಾಗೂ ಪ್ರೋತ್ಸಾಹಿಸಲು ಜೀವರಕ್ಷಕ ಪ್ರಶಸ್ತಿಯು ಹಾಗೂ ಪ್ರಮಾಣ ಪತ್ರ ಹಾಗೂ ಫಲಕಗಳನ್ನು ಒಳಗೊಂಡಿದ್ದು ಇವುಗಳನ್ನು ಪ್ರಧಾನ ಮಾಡಲಾಗುವುದು.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಜೀವರಕ್ಷಕ ಪ್ರಶಸ್ತಿಗೆ ಆಯ್ಕೆ ಮಾಡಲು ದಯಾಳು ಮತ್ತು ಉಪಕಾರಿ/ನಾಮಕರಣ ವ್ಯಕ್ತಿಗಳಿಂದ ಪ್ರಶಸ್ತಿಗೆ ಅರ್ಜಿ ಆಹ್ವಾನಿಸಲಾಗಿದೆ.

ಅರ್ಜಿ ಸಲ್ಲಿಸಲು ಡಿಸೆಂಬರ್ 31, ಕೊನೆಯ ದಿನಾಂಕವಾಗಿರುತ್ತದೆ. ಹೆಚ್ಚಿನ ಮಾಹಿತಿ ಮತ್ತು ಅರ್ಜಿ ಫಾರಂನ್ನು ಜಿಲ್ಲಾ ಸಂಯೋಜಕರು, ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಮಂಗಳೂರು ದೂರವಾಣಿ ಸಂಖ್ಯೆ 7259003406 ಇವರಿಂದ ಪಡೆಯಬಹುದು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Comments are closed.