ಮಂಗಳೂರು, ಡಿಸೆಂಬರ್.15: ನೃತ್ಯಗುರು ವಿದ್ವಾನ್ ಮುರಳೀಧರ ರಾವ್ ಅವರು ಶಾಸ್ತ್ರೀಯ ಕಲೆಗಾಗಿ ತನ್ನ ಬದುಕನ್ನೇ ಮುಡಿಪಾಗಿಟ್ಟಿದ್ದರು. ನೃತ್ಯ ಕಲೆಯನ್ನು ತಪಸ್ಸು ಎಂಬಂತೆ ಕರಗತ ಮಾಡಿಕೊಂಡಿದ್ದ ಅವರು,ಆ ಬಗ್ಗೆ ಸಂಶೋಧನೆ ನಡೆಸಿ ಯುವ ಪೀಳಿಗೆಗೆ ಮಾರ್ಗದರ್ಶಕರಾಗಿದ್ದರು ಎಂದು ರಾಜ್ಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಸಚಿವೆ ಉಮಾಶ್ರೀ ಹೇಳಿದರು.
ಅವರು ನೃತ್ಯಗುರು ವಿದ್ವಾನ್ ಕಾಸರಗೋಡು ಮುರಳೀಧರ ರಾವ್ ಅವರಿಗೆ ಗುರುವಾರ ನಗರದ ಸನಾತನ ನಾಟ್ಯಾಲಯದ ಸಭಾಂಗಣದಲ್ಲಿ ನಡೆದ ಸರಳ ಕಾರ್ಯಕ್ರಮದಲ್ಲಿ ರಾಜ್ಯೋತ್ಸವ ಪ್ರಶಸ್ತಿಯನ್ನು ಪ್ರದಾನ ಮಾಡಿ ಮಾತನಾಡಿದರು.ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ಸಾಂಸ್ಕೃತಿಕ ಕ್ಷೇತ್ರದಲ್ಲಿ ಅರ್ಹರನ್ನು ಹುಡುಕಾಡಿ ಪ್ರಶಸ್ತಿ ನೀಡುತ್ತದೆ. ಅರ್ಜಿ ಸಲ್ಲಿಸದೆ ಪ್ರಶಸ್ತಿ ಪಡೆದ ಹಿರಿಯ ಚೇತನರಲ್ಲಿ ಇವರೂ ಒಬ್ಬರು. ಇದರಿಂದ ಪ್ರಶಸ್ತಿಯ ಮೌಲ್ಯವೂ ಹೆಚ್ಚುತ್ತದೆ ಎಂದು ಸಚಿವೆ ಉಮಾಶ್ರೀ ಹೇಳಿದರು.
ಮುರಳೀಧರ ರಾವ್ (93ರ ಹರೆಯ) ಅವರಿಗೆ ಪ್ರಸಕ್ತ ಸಾಲಿನ ರಾಜ್ಯೋತ್ಸವ ಪ್ರಶಸ್ತಿ ಲಭಿಸಿತ್ತು. ಆದರೆ ವಯೋಸಹಜ ಕಾರಣದಿಂದ ಅವರು ಬೆಂಗಳೂರಿಗೆ ತೆರಳಲು ಸಾಧ್ಯವಾಗಿರಲಿಲ್ಲ. ಆ ಹಿನ್ನೆಲೆಯಲ್ಲಿ ಮುರಳೀಧರ ರಾವ್ ಅವರಿಗೆ ರಾಜ್ಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಸಚಿವೆ ಉಮಾಶ್ರೀ ಅವರು ಮಂಗಳೂರಿನಲ್ಲಿ ಪ್ರಶಸ್ತಿ ನೀಡಿ ಗೌರವಿಸಿದರು.
ನೃತ್ಯಗುರು ಉಳ್ಳಾಲ ಮೋಹನ ಕುಮಾರ್, ಕರಾವಳಿ ನೃತ್ಯ ಪರಿಷತ್ ಅಧ್ಯಕ್ಷ ಕಮಲಾಕ್ಷ ಆಚಾರ್, ಜಾನಪದ ವಿದ್ವಾಸ ಎ.ವಿ. ನಾವಡ, ಸನಾತನ ನಾಟ್ಯಾಲಯದ ನಿರ್ದೇಶಕ ಚಂದ್ರಶೇಖರ ಕೆ. ಶೆಟ್ಟಿ ಮುಂತಾದವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
Comments are closed.