ಮಂಗಳೂರು, ಡಿಸೆಂಬರ್.14 : ವರ್ದಾ ಚಂಡಮಾರುತ ತಮಿಳುನಾಡು, ಆಂಧ್ರಪ್ರದೇಶ ಕರಾವಳಿಗೆ ಅಪ್ಪಳಿಸಿದ ಪರಿಣಾಮ ದ.ಕ.ಜಿಲ್ಲೆಯ ಕರಾವಳಿಯಲ್ಲಿ ಬುಧವಾರ ವ್ಯಾಪಕ ಮಳೆಯಾಗಿದೆ. ದಿಡೀರ್ ಮಳೆ ಪರಿಣಾಮ ಮಂಗಳೂರು ಸೇರಿದಂತೆ ಹಲವೆಡೆ ಜನಜೀವನ ಅಸ್ತವ್ಯಸ್ತವಾಗಿದೆ.
ವರ್ದಾ ಚಂಡಮಾರುತದ ಪ್ರಭಾವದಿಂದ ಮಂಗಳೂರು ಹಾಗೂ ಸುತ್ತಮುತ್ತ ಪ್ರದೇಶದಲ್ಲಿ ನಿನ್ನೆಯಿಂದಲೇ ಇಡೀ ದಿನ ಮೋಡಕವಿದ ವಾತಾವರಣ ಇತ್ತು. ಮಂಗಳವಾರ ಸಂಜೆ ಅಲ್ಲಲ್ಲಿ ಸಣ್ಣ ಪ್ರಮಾಣದ ಮಳೆಯಾಗಿದ್ದು. ಬುಧವಾರ ಮಧ್ಯಾಹ್ನದ ಬಳಿಕ ಸಣ್ಣ ಪ್ರಮಾಣದಲ್ಲಿ ಆರಂಭವಾದ ಮಳೆ ಬಳಿಕ ದಿನವೀಡಿ ಜೋರಾಗಿಯೇ ಸುರಿಯಲು ಆರಂಭಿಸಿದೆ.
ದಿಡೀರ್ ಮಳೆಯಿಂದಾಗಿ ಶಾಲಾ,ಕಾಲೇಜು, ಕಚೇರಿ ಹಾಗೂ ದಿನನಿತ್ಯದ ವ್ಯವಹಾರಕ್ಕೆ ಹೋಗುವವರು ಪರದಾಡಿದ್ದಾರೆ. ಅಗತ್ಯ ಸಾಮಾನುಗಳನ್ನು ಖರೀದಿಸಲು ಮನೆಯಿಂದ ಹೊರಗೆ ಕಾಲಿಟ್ಟವರು ಪ್ರಯಾಸ ಪಟ್ಟಿದ್ದಾರೆ. ರಸ್ತೆಗಳಲ್ಲಿ ಮಂಡಿಯುದ್ದ ನೀರು ನಿಂತು ಸಂಚಾರ ದಟ್ಟಣೆ ಸಮಸ್ಯೆ ಕಾಡಿದೆ.
ವರ್ದಾ ಚಂಡಮಾರುತ ತಮಿಳುನಾಡು ಕರಾವಳಿಗೆ ಅಪ್ಪಳಿಸಿದ ಹಿನ್ನೆಲೆಯಲ್ಲಿ ಮುಂದಿನ 24 ತಾಸುಗಳಲ್ಲಿ ತಮಿಳುನಾಡು, ಪುದುಚೇರಿ, ದಕ್ಷಿಣ ಆಂಧ್ರಪ್ರದೇಶ ಸೇರಿದಂತೆ ಕರ್ನಾಟಕದ ಕರಾವಳಿ ಪ್ರದೇಶಗಳಲ್ಲಿ ಮುಂದಿನ 48 ತಾಸುಗಳ ಕಾಲ ಮಳೆ ನಿರೀಕ್ಷೆ ಇದೆ.
ಚೆನ್ನೈ ವಿಮಾನ ಬೆಂಗಳೂರಿಗೆ…
ವರ್ದಾ ಚಂಡಮಾರುತದ ಹಿನ್ನೆಲೆಯಲ್ಲಿ ಸೋಮವಾರ ಹಾಗೂ ಮಂಗಳವಾರ ಬೇರೆ ಬೇರೆ ಕಡೆಗಳಿಂದ ಚೆನ್ನೈಗೆ ತೆರಳಬೇಕಿದ್ದ 16 ವಿಮಾನಗಳು ಬೆಂಗಳೂರಿನತ್ತ ಮುಖಮಾಡಿದ್ದರೆ, ಬೆಂಗಳೂರಿನಿಂದ ಚೆನ್ನೈಗೆ ತೆರಳಬೇಕಿದ್ದ ಸುಮಾರು 14 ವಿಮಾನಗಳು ರದ್ದಾಗಿವೆ.
ಚೆನ್ನೈನಲ್ಲಿ ಲ್ಯಾಂಡ್ ಆಗಬೇಕಾದ 16 ವಿಮಾನಗಳು, ಪ್ರತಿಕೂಲ ಹವಾಮಾನದ ಪರಿಣಾಮ ಬೆಂಗಳೂರಿನಲ್ಲಿ ಬಂದಿಳಿದಿವೆ. ಅದೇ ರೀತಿ, ಬೆಂಗಳೂರಿನಿಂದ ಚೆನ್ನೈಗೆ ತೆರಳಬೇಕಿದ್ದ 14 ವಿಮಾನಗಳ ಹಾರಾಟ ರದ್ದಾಗಿವೆ. ಸಾಮಾನ್ಯವಾಗಿ ನಿತ್ಯ ಚೆನ್ನೈನಿಂದ ಸರಾಸರಿ 22 ವಿಮಾನಗಳು ಬಂದಿಳಿದರೆ, 31 ವಿಮಾನಗಳು ಬೆಂಗಳೂರಿನಿಂದ ಚೆನ್ನೈ ಮೂಲಕ ಬೇರೆ ಬೇರೆ ಕಡೆಗೆ ತೆರಳುತ್ತವೆ.
Comments are closed.