ಉಪ್ಪಿನಂಗಡಿ, ಡಿ.14: ಉಪ್ಪಿನಂಗಡಿ ಸಮೀಪದ ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ನೀರಕಟ್ಟೆ ಎಂಬಲ್ಲಿ ಚಾಲಕನ ನಿಯಂತ್ರಣ ತಪ್ಪಿದ ಅನಿಲ ಟ್ಯಾಂಕರೊಂದು ತೋಡಿಗೆ ಮಗುಚಿ ಬಿದ್ದ ಘಟನೆ ಮಂಗಳವಾರ ಬೆಳಗ್ಗೆ ಸಂಭವಿಸಿದೆ. ಅಪಘಾತದಿಂದ ಟ್ಯಾಂಕರ್ ಚಾಲಕ ತಮಿಳುನಾಡು ಮೂಲದ ಮರಿಯಪ್ಪನ್ ಸಣ್ಣಪುಟ್ಟ ಗಾಯಗಳೊಂದಿಗೆ ಅಪಾಯದಿಂದ ಪಾರಾಗಿದ್ದಾರೆ.
ಮಂಗಳೂರಿನಿಂದ-ಬೆಂಗಳೂರು ಕಡೆಗೆ ತೆರಳುತ್ತಿದ್ದ ಭಾರತ್ ಗ್ಯಾಸ್ ಕಂಪೆನಿಗೆ ಸೇರಿದ ಅನಿಲ ಟ್ಯಾಂಕರ್ ಬೆಳಗ್ಗೆ 6:30ರ ಸುಮಾರಿಗೆ ಬಜತ್ತೂರು ಗ್ರಾಮದ ನೀರಕಟ್ಟೆ ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿತೋಡೊಂದಕ್ಕೆ ಮಗುಚಿ ಬಿದ್ದಿದೆ. ಈ ಸಂದರ್ಭ ಟ್ಯಾಂಕರ್ನಿಂದ ಅನಿಲ ಸೋರಿಕೆಯುಂಟಾಗಿ ಪರಿಸರದಲ್ಲಿ ಕೆಲಕಾಲ ಭಯದ ವಾತಾವರಣ ನಿರ್ಮಾಣಗೊಂಡಿತ್ತು. ಬಳಿಕ ತಜ್ಞರ ತಂಡ ಸ್ಥಳಕ್ಕಾಗಮಿಸಿ ಅನಿಲ ಸೋರಿಕೆ ತಡೆಗಟ್ಟಿ, ಅನಿಲವನ್ನು ಬದಲಿ ಟ್ಯಾಂಕರ್ಗೆ ಸ್ಥಳಾಂತರಿಸುವ ಕಾರ್ಯ ಕೈಗೊಂಡರು.
ಅಪಘಾತ ನಡೆದ ಸಂದರ್ಭ ಅನಿಲ ಟ್ಯಾಂಕರ್ನ ವಾಲ್ವ್ ಓಪನ್ ಆಗಿದ್ದು, ಅನಿಲ ಸೋರಿಕೆಯಾಗುತ್ತಿತ್ತು. ಕೂಡಲೇ ಸ್ಥಳಕ್ಕೆ ಆಗಮಿಸಿದ ಎಲ್ಪಿಜಿ ತುರ್ತು ಸ್ಪಂದನಾ ವಾಹನದವರು ಅನಿಲ ಸೋರಿಕೆಯನ್ನು ತಡೆಗಟ್ಟಿದರು. ಸ್ಥಳಕ್ಕೆ ಪುತ್ತೂರು, ಮಂಗಳೂರು ಹಾಗೂ ಬಂಟ್ವಾಳದಿಂದ ಅಗ್ನಿಶಾಮಕ ದಳಗಳು ಆಗಮಿಸಿದ್ದು, ಮುಂಜಾಗೃತಾ ಕ್ರಮ ಕೈಗೊಂಡರು. ಪೂರ್ವಾಹ್ನ 11:30ರ ಬಳಿಕ ಟ್ಯಾಂಕರ್ನಲ್ಲಿದ್ದ ಅನಿಲವನ್ನು ಇತರ 4ಟ್ಯಾಂಕರ್ಗಳಿಗೆ ಸ್ಥಳಾಂ ತರಿ ಸುವ ಕಾರ್ಯ ನಡೆಯಿತು.
ಈ ಸಂದರ್ಭ ಮುನ್ನೆಚ್ಚರಿಕಾ ಕ್ರಮವಾಗಿ ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನ ಸಂಚಾರವನ್ನು ತಡೆಯಲಾಯಿತು. ಬೆಂಗಳೂರು ಕಡೆಗೆ ಹೋಗುವ ವಾಹನಗಳನ್ನು ಹಳೆಗೇಟಿನಲ್ಲಿ ತಡೆದು ಪೆರಿಯಡ್ಕ-ಕಾಂಚನ-ನೀರಕಟ್ಟೆ ಮೂಲಕ ಕಳುಹಿಸಲಾಯಿತು. ಮಂಗಳೂರಿಗೆ ಬರುವ ವಾಹನಗಳನ್ನು ನೀರಕಟ್ಟೆಯಲ್ಲಿ ತಡೆದು ಕಾಂಚನ-ಪೆರಿಯಡ್ಕ-ಹಳೆಗೇಟು ಮೂಲಕ ಕಳುಹಿಸಲಾಯಿತು.
Comments are closed.