ಮಂಗಳೂರು, ಡಿ.8: ವಿಚಾರಣೆಯ ನೆಪದಲ್ಲಿ ವಿವಾಹಿತ ಮಹಿಳೆಯೊಬ್ಬರಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಹಿನ್ನೆಲೆಯಲ್ಲಿ ಪಣಂಬೂರು ಠಾಣೆಯ ಪೊಲೀಸ್ ಕಾನ್ಸ್ ಸ್ಟೇಬಲ್ ಒಬ್ಬರನ್ನು ಮಂಗಳೂರು ನಗರ ಪೊಲೀಸ್ ಆಯುಕ್ತರು ಅಮಾನತು ಮಾಡಿರುವ ಘಟನೆಯೊಂದು ಮಂಗಳೂರಿನಲ್ಲಿ ನಡೆದಿದೆ.
ಬೆಂಗರೆಯ ವಿವಾಹಿತ ಮಹಿಳೆಯೊಬ್ಬರನ್ನು ವಿಚಾರಣೆಯ ನೆಪದಲ್ಲಿ ಪಣಂಬೂರು ಠಾಣೆಯ ಪೊಲೀಸ್ ಕಾನ್ಸ್ಟೇಬಲ್ ವಿನಯ್ ಎಂಬವರು ಕಳೆದ ಸೋಮವಾರದಿಂದ ಮೊಬೈಲ್ ಮೂಲಕ ಸಂಪರ್ಕಿಸಿ ಲೈಂಗಿಕ ಕಿರುಕುಳ ನೀಡುತ್ತಿದ್ದರು ಎನ್ನಲಾಗಿದೆ.
ಈ ಬಗ್ಗೆ ಸಂತೃಸ್ತ ಮಹಿಳೆ ಸ್ಥಳೀಯ ಡಿವೈಎಫ್ಐ ಕಾರ್ಯಕರ್ತರ ಗಮನಕ್ಕೆ ತಂದಿದ್ದು,ಅದರಂತೆ ಡಿವೈಎಫ್ಐ ಕಾರ್ಯಕರ್ತರು ವಿನಯ್ ಫೋನ್ ಕರೆಗಳನ್ನು ರೆಕಾರ್ಡ್ ಮಾಡಿ ಬುಧವಾರ ಪೊಲೀಸ್ ಆಯುಕ್ತ ಚಂದ್ರಶೇಖರ್ ಅವರಿಗೆ ದೂರು ನೀಡಿದ್ದಾರೆ.
ದೂರು ಸ್ವೀಕರಿಸಿದ ಆಯುಕ್ತರು, ಕೂಡಲೇ ಈ ಬಗ್ಗೆ ಉಪ ಅಯುಕ್ತರು ಮತ್ತು ಮಹಿಳಾ ಠಾಣಾ ಇನ್ಸ್ಪೆಕ್ಟರ್ ಕಲಾವತಿ ಅವರಲ್ಲಿ ಈ ಪ್ರಕರಣದ ಬಗ್ಗೆ ವಿಚಾರಣೆ ನಡೆಸಲು ಸೂಚನೆ ನೀಡಿದ್ದಾರೆ.
ಮಹಿಳೆ ನೀಡಿದ ದೂರಿನ ಹಿನ್ನೆಲೆಯಲ್ಲಿ ಪಣಂಬೂರು ಠಾಣೆಯ ಪೊಲೀಸರ ವಿರುದ್ಧ ಬುಧವಾರ ದೂರು ನೀಡಿದ್ದು. ಸೆ.364 (ಎ) ಮತ್ತು ಸೆ.364 (ಡಿ)ರ ಅನ್ವಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸ್ ಆಯುಕ್ತರು ಆರೋಪಿ ಪೊಲೀಸ್ ನ್ನು ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ. ಆದರೆ ಆರೋಪಿ ಪೊಲೀಸ್ ಕಾನ್ಸ್ಟೇಬಲ್ ವಿನಯ್ ಠಾಣೆಯಿಂದಲೇ ಜಾಮೀನು ಪಡೆದುಕೊಂಡಿರುವುದಾಗಿ ತಿಳಿದು ಬಂದಿದೆ.
ಈ ಬಗ್ಗೆ ಹೆಚ್ಚಿನ ಮಾಹಿತಿ ಇನ್ನಷ್ಟೇ ಲಭ್ಯವಾಗಬೇಕಿದೆ……
Comments are closed.