ಕುಂದಾಪುರ: ಶಾಲೆಯ ಆವರಣದ ಸಮೀಪದ ಮನೆಯ ತೆಂಗಿನಮರದಲ್ಲಿದ್ದ ಹೆಜ್ಜೇನು ಗೂಡಿಗೆ ಹದ್ದು ಕುಕ್ಕಿದ ಪರಿಣಾಮ ಜೇನು ಹುಳುಗಳು ಶಾಲಾ ಆಟದ ಮೈದಾನದಲ್ಲಿದ್ದ ವಿದ್ಯಾರ್ಥಿಗಳಿಗೆ ಕಡಿದು ಗಾಯಗೊಳಿಸಿದ ಘಟನೆ ತಾಲೂಕಿನ ಖಂಬದಕೋಣೆ ಸರಕಾರಿ ಪ್ರಾಥಮಿಕ ಶಾಲೆಯಲ್ಲಿ ನಡೆದಿದೆ.
ಶಾಲೆಯ ವಿದ್ಯಾರ್ಥಿನಿಯರಾದ ಶಶಿಕಲಾ(13) ಮತ್ತು ವೀಕ್ಷಿತಾ(9) ಅವರಿಗೆ ಹೆಚ್ಚು ಹುಳುಗಳು ಕಡಿದಿದ್ದು ಮಾತ್ರವಲ್ಲದೇ ಅವರು ಭಯಗೊಂದ ಕಾರಣ ಕೊಂಚ ಅಸ್ವಸ್ಥರಾಗಿದ್ದಾರೆ. ವಿದ್ಯಾರ್ಥಿಗಳಾದ ಸುಭಾಷ್, ಪ್ರೀತೀಶ್, ಹರ್ಷಿತಾ, ಹರ್ಷ, ಅಂಕುಶ, ರಾಘವೇಂದ್ರ, ಆದರ್ಶ, ಸುಜನ, ಶಶಾಂಕ್, ಸುಶಾಂತ್, ಮಣಿಕಂಠ, ಪ್ರಜ್ವಿತಾ, ಅಮ್ರತಾ, ಅನನ್ಯಾ, ಅಂಜಲಿ ಗಾಯಗೊಂಡ ವಿದ್ಯಾರ್ಥಿಗಳಾಗಿದ್ದಾರೆ.
ಸುಮಾರು 89 ಮಕ್ಕಳ ಸಂಖ್ಯೆಯಿರುವ ಖಂಬದಕೋಣೆ ಸರಕಾರಿ ಶಾಲೆಗೆ ವಿದ್ಯಾರ್ಥಿಗಳು ನಿತ್ಯದಂತೆ ಬೆಳೀಗ್ಗೆ ಹಾಜಾರಾಗಿದ್ದು ಶಾಲೆಯ ಆಟದ ಮೈದಾನದಲ್ಲಿ ಆಟವಾಡುತ್ತಿದ್ದರು. ಶಾಲೆ ಸಮೀಪದಲ್ಲಿದ್ದ ಮನೆಯ ತೆಂಗಿನ ಮರದಲ್ಲಿ ಜೇನು ಹುಳಗಳು ಗೂಡು ಕಟ್ಟಿದ್ದು ವಿದ್ಯಾರ್ಥಿಗಳ ಗಮನದಲ್ಲಿರಲಿಲ್ಲ. ಆಟವಾಡುತ್ತಿರುವ ವೇಳೆಯೇ ಹದ್ದೊಂದು ಬಂದು ಜೇನುಗೂಡಿಗೆ ಕುಟುಕಿದೆ. ಇದರಿಂದ ಜೇನುನೊಣಗಳು ಏಕಾಏಕಿ ವಿದ್ಯಾರ್ಥಿಗಳ ಮೇಲೆ ದಾಳಿ ನಡೆಸಿದ್ದು ತಲೆ, ಮುಖ, ಕೈ ಹಾಗೂ ಕಾಲುಗಳಿಗೆ ಕಚ್ಚಿದೆ. ಇದರಿಂದ 17 ವಿದ್ಯಾರ್ಥಿಗಳು ಗಾಯಗೊಂಡಿದ್ದಾರೆ. ಕೂಡಲೇ ಗಾಯಗೊಂಡು ಅಸ್ವಸ್ಥರಾಗಿ ಚೀರಾಡುತ್ತಿದ್ದ ವಿದ್ಯಾರ್ಥಿಗಳನ್ನು 108ಆಂಬುಲೆನ್ಸ್ ನಲ್ಲಿ ಬೈಂದೂರು ಆಸ್ಪತ್ರೆಗೆ ಕರೆದೊಯ್ದು ಅಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿ ಕುಂದಾಪುರ ಸರಕಾರಿ ಆಸ್ಪತ್ರೆಗೆ ಕರೆತಂದು ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.
ಕುಂದಾಪುರ ಸರಕಾರಿ ಆಸ್ಪತ್ರೆಗೆ ಉಡುಪಿ ಡಿಡಿಪಿಐ ದಿವಾಕರ ಶೆಟ್ಟಿ, ಬೈಂದೂರು ಕ್ಷೇತ್ರ ಶಿಕ್ಷಣಾಧಿಕಾರಿ ನಾಗೇಶ್ ನಾಯ್ಕ್ ಭೇಟಿ ನೀಡಿ ಮಕ್ಕಳ ಯೋಗಕ್ಷೇಮ ವಿಚಾರಿಸಿದ್ದಾರೆ.
Comments are closed.