ಮಂಗಳೂರು: ರಂಗಭೂಮಿಯಲ್ಲಿ ಬೆಳೆದ ಕಲಾವಿದರು ಸಿನಿಮಾ, ಧಾರವಾಹಿ ಸೇರಿದಂತೆ ನಾನಾ ಕಲಾ ಕ್ಷೇತ್ರದಲ್ಲಿ ಮಿಂಚುತ್ತಿರುವುದು ಸಂತಸದ ಸಂಗತಿ. ಆದರೆ ಸಮಯ ಸಿಕ್ಕಾಗಲೆಲ್ಲಾ ರಂಗಭೂಮಿಗೂ ಬರಬೇಕು ಮತ್ತು ರಂಗಭೂಮಿ ನಂಟು ಯಾವತ್ತೂ ಬಿಡಬಾರದು ಎಂದು ರಂಗಭೂಮಿಯ ಹಿರಿಯ ನಿರ್ದೇಶಕ ಸದಾನಂದ ಸುವರ್ಣ ಹೇಳಿದರು.
ದ.ಕ. ಜಿಲ್ಲಾಕನ್ನಡ ಸಾಹಿತ್ಯ ಪರಿಷತ್ತು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನೇತೃತ್ವದಲ್ಲಿ ಶಾರದಾ ವಿದ್ಯಾಲಯದಲ್ಲಿ ಗುರುವಾರ ನಡೆದ ರಂಗಾಯಣ ಕಲಾವಿದರೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡುತ್ತಿದ್ದರು.
ಕಲಾವಿದರ ನಡುವೆ ಕೌಟುಂಬಿಕ ಸಂಬಂಧ ಬೆಸೆಯಲು ರಂಗಭೂಮಿಯಿಂದ ಸಾಧ್ಯ. ರಂಗಭೂಮಿಯಲ್ಲಿ ಸಿಗುವ ಸಂತೋಷ, ಸಿನಿಮಾ ಹಾಗೂ ಧಾರವಾಹಿಯಲ್ಲಿ ಸಿಗಲು ಸಾಧ್ಯವಿಲ್ಲ ಎಂದರು. ನಮ್ಮಲ್ಲಿನ ಹಲವು ರಂಗಕಲಾವಿದರು ರಂಗಾಯಣ ಕಲಾವಿದರಿಂದ ಕಲಿಯುವಂಥದ್ದು ಸಾಕಷ್ಟಿದೆ. ಇಲ್ಲಿ ವಿಭಿನ್ನತರಹದ ನಾಟಕಗಳು ನಡೆಯುತ್ತವೆಯಾದರೂ, ಕಡಿಮೆ ಪ್ರಮಾಣದಲ್ಲಿವೆ. ಹವ್ಯಾಸಿ ಕಲಾವಿದರು ಕಡಿಮೆಯಾಗುತ್ತಿದ್ದು, ವಿದ್ಯಾರ್ಥಿಗಳು ಕೂಡಾ ಇಂತಹ ಕ್ಷೇತ್ರದಲ್ಲಿ ತೊಡಗಿಸಿಕೊಳ್ಳಬೇಕು. ನಾಟಕ, ಸಿನಿಮಾದಲ್ಲೂ ಸಾಹಿತ್ಯ ವಿದೆಯೆಂಬುದನ್ನು ಅರ್ಥಮಾಡಿಕೊಳ್ಳಬೇಕು ಎಂದರು.
ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಎಸ್. ಪ್ರದೀಪ ಕುಮಾರ ಕಲ್ಕೂರ ಪ್ರಾಸ್ತಾವಿಕವಾಗಿ ಮಾತನಾಡಿ, ತುಳುನಾಡು ಎಲ್ಲಾ ಕಲೆಗಳಿಗೆ ಗೌರವ ನೀಡಿದ ಪುಣ್ಯಭೂಮಿ. ಇತ್ತೀಚಿನ ದಿನಗಳಲ್ಲಿ ತುಳು ರಂಗಭೂಮಿಯೊಂದಿಗೆ ತುಳು ಸಿನಿಮಾರಂಗ ಬೆಳೆಯುತ್ತಿರುವುದು ಸಂತಸದ ವಿಚಾರಎಂದರು.
ಚಲನಚಿತ್ರ ಹಾಗೂ ರಂಗ ನಿರ್ದೇಶಕ ವಿಜಯಕುಮಾರ್ ಕೊಡಿಯಾಲ್ ಬೈಲ್, ಹಿರಿಯ ಕಲಾವಿದರಾದ ನಿತ್ಯಾನಂದ ಕಾರಂತ ಪೊಳಲಿ, ತೋನ್ಸೆ ಪುಷ್ಕಳ್ ಕುಮಾರ್, ವಿ.ಜಿ. ಪಾಲ್, ತಮ್ಮ ಲಕ್ಷ್ಮಣ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕರವಿ ಕುಮಾರ್, ಅರೆಹೊಳೆ ಪ್ರತಿಷ್ಠಾನದ ಅಧ್ಯಕ್ಷ ಸದಾಶಿವ ರಾವ್, ಜಗನ್ ಪವಾರ್, ಜನಾರ್ದನ ಹಂದೆ, ಡಾ. ಮೀನಾಕ್ಷಿ ರಾಮಚಂದ್ರ, ರಂಗಾಯಣದ ಹುಲುಗಪ್ಪ ಕಟ್ಟಿಮನಿ, ಮತ್ತಿತರರು ಉಪಸ್ಥಿತರಿದ್ದರು.
Comments are closed.