ವಿವಿಧ ಕ್ಷೇತ್ರಗಳಲ್ಲಿ ಮಹತ್ತರ ಸಾಧನೆ ಮಾಡಿದ 13 ಗಣ್ಯರಿಗೆ ಆಳ್ವಾಸ್ ನುಡಿಸಿರಿ ಪ್ರಶಸ್ತಿ ಪ್ರದಾನ
ಮೂಡಬಿದ್ರೆ, ನ.21 : ಜೈನಕಾಶಿ ಮೂಡುಬಿದಿರೆಯ ವಿದ್ಯಾಗಿರಿಯಲ್ಲಿ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ| ಎಂ. ಮೋಹನ ಆಳ್ವ ಅವರ ಸಾರಥ್ಯದೊಂದಿಗೆ ‘ಕರ್ನಾಟಕ: ನಾಳೆಗಳ ನಿರ್ಮಾಣ’ ಎಂಬ ಪರಿಕಲ್ಪನೆಯಲ್ಲಿ ಮೂರು ದಿನಗಳ ಕಾಲ ನಡೆದ13ನೇ ವರ್ಷದ ‘ಆಳ್ವಾಸ್ ನುಡಿಸಿರಿ-2016’ಕ್ಕೆ ಸಂಭ್ರಮದ ತೆರೆ ಬಿದ್ದಿದೆ.
ಆಳ್ವಾಸ್ ನುಡಿಸಿರಿಯ ಸಮಾರೋಪ ಭಾಷಣ ಮಾಡಿದ ಖ್ಯಾತ ವಿಮರ್ಶಕ ಡಾ| ಗಿರಡ್ಡಿ ಗೋವಿಂದರಾಜ ಅವರು, ಆಳ್ವಾಸ್ ನುಡಿಸಿರಿ ವರ್ಷದಿಂದ ವರ್ಷಕ್ಕೆ ಹೊಸ ಪರಿಭಾಷೆಯೊಂದಿಗೆ, ಕನ್ನಡ ಮನಸ್ಸು ಕಟ್ಟುವ ಕಾಯಕದಲ್ಲಿ ಅಂಗ್ರಪಂಕ್ತಿಯಲ್ಲಿ ಸಾಗುತ್ತಿದೆ. ಈ ಸಮ್ಮೇಳನ ಸಾಂಸ್ಕೃತಿಕ ಅವಶ್ಯಕತೆಗಳನ್ನು ಪೂರೈಸುತ್ತಾ, ಅತ್ತ ಬಲಪಂಥೀಯ ಅಲ್ಲದೆ ಇತ್ತ ಎಡಪಂಥೀಯ ಅಲ್ಲದೆ ಮಾಧ್ಯಮ ಪಂಥವನ್ನು ಪ್ರತಿಪಾದಿಸುತ್ತಿರುವುದು ಸಂತಸದ ಸಂಗತಿ ಎಂದು ಹೇಳಿದರು.
ಪ್ರಸ್ತುತ ಮಧ್ಯಮ ವರ್ಗದ ಚಿಂತನೆ ದೇಶದಲ್ಲಿ ಅಗತ್ಯವಿದ್ದು, ಇದು ಪ್ರಗತಿ ಪಥದತ್ತ ಸಾಗಲು ಸಹಕಾರಿಯಾಗಿದೆ. ನುಡಿಸಿರಿಯ ಮೂಲಕ ದೇಶದಲ್ಲಿ ಹೊಸ ಕ್ರಾಂತಿಗೆ ಮುನ್ನುಡಿ ಬರೆದ ಮೋಹನ್ ಆಳ್ವರು, ಪ್ರಜಾಪ್ರಭುತ್ವದ ನಿಜವಾದ ಪ್ರತಿನಿಧಿಯಾಗಿದ್ದಾರೆ ಎಂದು ಬಣ್ಣಿಸಿದರು. ಜನಪದ ಕಲೆಗಳಿಗೆ ಪ್ರೋತ್ಸಾಹ ನೀಡುತ್ತಿರುವ ಆಳ್ವರ ಕಾರ್ಯ ಶ್ಲಾಘನೀಯ. ಆಳ್ವಾಸ್ ನುಡಿಸಿರಿ ಪ್ರಶಸ್ತಿ ದೊಡ್ಡವರಿಗೆ ಸಮಾಧಾನ ನೀಡಿ, ಚಿಕ್ಕವರಿಗೆ ಪ್ರೋತ್ಸಾಹ ನೀಡುತ್ತಿದೆ ಎಂದು ಅವರು ತಿಳಿಸಿದರು.
ಕರ್ನಾಟಕದ ನಾಳೆಗಳ ನಿರ್ಮಾಣ ಮಾಡಲು ಹೊರಟಿರುವ ಆಳ್ವಾಸ್ ನುಡಿಸಿರಿ-2016 ಭವಿಷ್ಯದ ಕನಸುಗಳನ್ನು ಇಂದು ಬಿತ್ತಿದೆ. ಈ ಬಾರಿಯ ನುಡಿಸಿರಿ ಯುವಜನತೆಯನ್ನೆಲ್ಲ ಪಾಲುದಾರರನ್ನಾಗಿಸಿ ಒಂದು ಅದ್ಭುತವನ್ನೇ ಸೃಷ್ಟಿಸಿದೆ. ಈ ಹಿನ್ನೆಲೆಯಲ್ಲಿ ಇದನ್ನು ಯುವಸಿರಿ ಎಂದರೂ ತಪ್ಪಿಲ್ಲ. ಎಲ್ಲಾ ಯುವ ಕಲಾವಿದರನ್ನು ಕಸೂತಿಯಂತೆ ಹೆಣೆದು ಇಲ್ಲಿ ಒಂದು ರಮ್ಯ ಲೋಕವನ್ನೇ ಸೃಜಿಸಲಾಗಿದೆ. ಒಂದು ಯುವಸಮೂಹವನ್ನು ಎಷ್ಟು ಪರಿಪೂರ್ಣವಾಗಿ ಬಳಸಬಹುದೆಂಬುದಕ್ಕೆ ಆಳ್ವಾಸ್ ನುಡಿಸಿರಿ ಒಂದು ಸ್ಪಷ್ಟ ನಿದರ್ಶನ ಎಂದು ಆಳ್ವಾಸ್ ನುಡಿಸಿರಿ ಸಮ್ಮೇಳನಾಧ್ಯಕ್ಷೆ ಡಾ.ಬಿ.ಎನ್. ಸುಮಿತ್ರಾಬಾಯಿ ಹೇಳಿದರು.
ಆಳ್ವಾಸ್ ನುಡಿಸಿರಿ-ಕನ್ನಡ ನಾಡು ನುಡಿ ಸಂಸ್ಕೃತಿಯ ರಾಷ್ಟ್ರೀಯ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು. ಈ ಬಾರಿಯ ನುಡಿಸಿರಿಯಲ್ಲಿ ನಾರಾಯಣ ರೆಡ್ಡಿಯವರಂಥ ಹಿರಿಯರಿಂದ ಹಿಡಿದು ಟಿ.ಜಿ.ಶ್ರೀನಿಧಿಯಂಥ ಕಿರಿಯರವರೆಗೂ ಎಲ್ಲರೂ ತಮ್ಮ ವಿಚಾರಧಾರೆಗಳನ್ನು ಜನರೊಂದಿಗೆ ಹಂಚಿಕೊಂಡಿದ್ದಾರೆ. ವಿಭಿನ್ನ ಕ್ಷೇತ್ರಗಳಲ್ಲಿ ಅರ್ಥಪೂರ್ಣ ಚರ್ಚೆಗಳನ್ನು ನಡೆಸುವುದರ ಮೂಲಕ ನಾಳೆಗಳ ನಿರ್ಮಾಣಕ್ಕೆ ಭದ್ರ ತಳಹದಿಯನ್ನು ಹಾಕಲಾಗಿದೆ. ನುಡಿಸಿರಿಯ ಸಮಮೇಳನಾಧ್ಯಕ್ಷತೆ ದೊರಕುವುದೇ ಒಂದು ಗೌರವದ ವಿಚಾರ. ಡಾ. ಮೋಹನ್ ಆಳ್ವರು ಯಾವುದೇ ದುರಭಿಮಾನಗಳಿಲ್ಲದೇ ಈ ಸಮಮೇಳನವನ್ನು ನಡೆಸುತ್ತಿರುವುದು ಒಂದು ಶ್ರೇಷ್ಠವಾದ ವಿಚಾರ. ನಾಡು ಕಟ್ಟುವ ಈ ಕೆಲಸ ಸದಾಕಾಲ ಹೀಗೆ ಮುಂದುವರೆಯುತ್ತಿರಬೇಕು ಎಂದರು.
ಆಳ್ವಾಸ್ ನುಡಿಸಿರಿ ಪ್ರಶಸ್ತಿ ಪ್ರದಾನ
ಸಮಾರೋಪ ಸಮಾರಂಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಮಹತ್ತರ ಸಾಧನೆ ಮಾಡಿದ 13 ಗಣ್ಯರಿಗೆ ಆಳ್ವಾಸ್ ನುಡಿಸಿರಿ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು.
ಸಾಹಿತ್ಯದಲ್ಲಿ ಗಿರಡ್ಡಿ ಗೋವಿಂದರಾಜು, ಸುಬ್ರಾಯ ಚೊಕ್ಕಾಡಿ, ಚೆನ್ನಣ್ಣ ವಾಲೀಕಾರ ಸಂಶೋಧನೆಯಲ್ಲಿ ಡಾ.ಕೆ.ಆರ್. ಸಂಧ್ಯಾ ರೆಡ್ಡಿ, ಮಾಧ್ಯಮದಲ್ಲಿ ಜಿ.ಎನ್. ರಂಗನಾಥ ರಾವ್, ರಂಗಭೂಮಿಯಲ್ಲಿ ಕೆ.ವಿ. ಅಕ್ಷರ, ಸಿನಿಮಾದಲ್ಲಿ ಹರಿಣಿ, ಸಂಘಟನೆಯಲ್ಲಿ ಶ್ರೀನಿವಾಸ ಜಿ.ಕಪ್ಪಣ್ಣ, ಯಕ್ಷಗಾನದಲ್ಲಿ ಶೀನಪ್ಪ ರೈ ಸಂಪಾಜೆ, ಜಬ್ಬಾರ್ ಸಮೊ; ಸುಗಮ ಸಂಗೀತದಲ್ಲಿ ಎಚ್. ಆರ್. ಲೀಲಾವತಿ, ಕೃಷಿಯಲ್ಲಿ ಚಂದ್ರಶೇಖರ ಚೌಟ, ಶಿಲ್ಪದಲ್ಲಿ ಡಾ.ಜಿ. ಜ್ಞಾನಾನಂದರಿಗೆ ಪ್ರಶಸ್ತಿಯನ್ನು ನೀಡಲಾಯಿತು. ಕಾರ್ಯಕ್ರಮದಲ್ಲಿ ಸಂಸದ ನಳಿನ್ ಕುಮಾರ್ ಕಟೀಲ್, ಮಾಜಿಸಚಿವ ಅಭಯಚಂದ್ರ ಜೈನ್ ಮುಖ್ಯ ಅತಿಥಿ ಸ್ಥಾನವನ್ನು ವಹಿಸಿದ್ದರು. ಮಾಜಿ ಸಚಿವ ಅಮರನಾಥ ಶೆಟ್ಟಿ, ಜಯಶ್ರೀ ಅಮರನಾಥ ಶೆಟ್ಟಿ, ಆಳ್ವಾಸ್ ವಿಶ್ವ ನುಡಿಸಿರಿ ವಿರಾಸತ್ ಅಧ್ಯಕ್ಷ ಡಾ. ಬಿ.ಎ. ವಿವೇಕ್ ರೈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ವೇಣುಗೋಪಾಲ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಅಂಡಾರು ಗುಣಪಾಲ ಹೆಗಡೆ ವಂದಿಸಿದರು.
‘ಮಹಿಳೆ ಮೂರಕ್ಷರದ ಪದವಲ್ಲ’ – ಡಾ. ಕೆ. ಆರ್. ಸಂಧ್ಯಾ ರೆಡ್ಡಿ
ಮೂಡುಬಿದಿರೆ : `ಮಹಿಳೆ ಎಂದರೆ ಅದು ಕೇವಲ ಮೂರಕ್ಷರದ ಪದವಲ್ಲ. ಅದರ ವ್ಯಾಪ್ತಿ ತುಂಬಾನೇ ದೊಡ್ಡದು. ಹೀಗಾಗಿ ವಿಭಿನ್ನ ವರ್ಗದ ಪುರುಷರು ಬೇರೆ ಬೇರೆ ರೀತಿಯಲ್ಲಿ ಅವಳನ್ನು ವ್ಯಾಖ್ಯಾನಿಸಿದ್ದಾರೆ. ಸಹನಾ ಮೂರ್ತಿ, ಶಕ್ತಿ ಸ್ವರೂಪಿಣಿ, ಮಾಯೆಯಾಗಿ ಅವಳನ್ನು ಕಂಡಿದ್ದಾರೆಯೇ ಹೊರತು ಅವಳ ಸ್ವಂತಿಕೆಯನ್ನು, ಅಸ್ತಿತ್ವವನ್ನು ಯಾರೂ ನೋಡಲು ಹೋಗಿಲ್ಲ. ಒಬ್ಬ ಮಹಿಳೆಯ ಜೀವನದ ಸ್ಥಿತ್ಯಂತರಗಳೇ ಅವಳ ಬದುಕನ್ನು ರೂಪಿಸುತ್ತದೆ’ ಎಂದು ಸಾಹಿತಿ ಡಾ.ಕೆ.ಆರ್ ಸಂಧ್ಯಾ ರೆಡ್ಡಿ ಹೇಳಿದರು.
ಆಳ್ವಾಸ್ ನುಡಿಸಿರಿಯಲ್ಲಿ `ಮಹಿಳೆ’ಯ ಬಗ್ಗೆ ವಿಶೇಷೋಪನ್ಯಾಸ ನೀಡಿ ಅವರು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡರು. ಮಹಿಳೆಯರ ಬಗ್ಗೆ ತುಂಬಾ ತಪ್ಪು ಕಲ್ಪನೆಗಳಿವೆ. ಅವಳನ್ನು ತುಂಬಾ ಭಾವುಕ ಜೀವಿ ಎಂದು ಕರೆಯುತ್ತಾರೆ. ಅವಳ ಭಾವನಾತ್ಮಕತೆಯನ್ನು ಯಾಕೆ ಋಣಾತ್ಮಕ ದೃಷ್ಟಿಯಿಂದ ನೋಡುತ್ತಾರೆಂಬುದೇ ಒಂದು ದೊಡ್ಡ ಪ್ರಶ್ನೆ. ಒಬ್ಬ ಪುರುಷ ದೇಶದ ಬಗ್ಗೆ ಮಾತನಾಡಿದರೆ ಅದನ್ನು ದೇಶಭಕ್ತಿಯೆಂದೂ ಅವನನ್ನು ದೇಶಪ್ರೇಮಿಯೆಂದೂ ಕರೆಯುತ್ತಾರೆ. ಅದೇ ಒಬ್ಬ ಸ್ತ್ರೀ ತನ್ನ ತಾಯಿ ಬಗ್ಗೆ, ತಾಯಿ ಮನೆಯ ಬಗ್ಗೆ ಮಾತನಾಡಿದರೆ ಅವಳನ್ನು ಭಾವುಕಳೆಂದು ಪರಿಗಣಿಸಲಾಗುತ್ತದೆ. ಎರಡೂ ಸಂಗತಿಗಳ ತಳಹದಿ ಒಂದೇ ಆದರೂ ಅದರ ಅಭಿವ್ಯಕ್ತಿಯಲ್ಲಿ ತಾರತಮ್ಯ ಮಾಡಲಾಗುತ್ತದೆ ಎಂದರು.
ವೈಚಾರಿಕ ಇತಿಹಾಸವನ್ನು ಗಮನಿಸಿದಾಗ ಅಲ್ಲಿ ಪುರುಷರು ಸಾವಿನ ಬಗ್ಗೆ ಜಿಜ್ಞಾಸೆ ಮಾಡಿದ್ದರ ಬಗ್ಗೆ ಉಲ್ಲೇಖವಿದೆ; ಆದರೆ ಮಹಿಳೆಯರು ಸಾವಿನ ಬಗ್ಗೆ ಜಿಜ್ಞಾಸೆ ಮಾಡಿದ್ದರ ಬಗ್ಗೆ ಪುರಾವೆಗಳು ಸಿಗುವುದು ಸ್ವಲ್ಪ ಕಷ್ಟವೇ. ಯಾಕೆಂದರೆ ಹೆಣ್ಣು ಯಾವಾಗಲೂ ಜೀವ ಕೊಡುವವಳು, ಕೌಟುಂಬಿಕ ಜವಾಬ್ದಾರಿಗಳನ್ನು ಹೊತ್ತು ಮುನ್ನಡೆಯುವವಳು ಹಾಗಾಗಿ ಅವಳಿಗೆ ಸಾವಿನ ಬಗ್ಗೆ ಯೋಚಿಸಲೂ ಪುರುಸೊತ್ತಿರುವುದಿಲ್ಲ. ಇನ್ನು ಸಾಮಾಜಿಕ ಕಾರ್ಯಗಳನ್ನು ಗಮನಿಸಿದಾಗ, ನಮ್ಮ ಇತಿಹಾಸದಲ್ಲಿ ವೇಶ್ಯೆಯರು ಕೆರೆಗಳನ್ನು ಕಟ್ಟಿಸಿದ್ದಾರೆಯೇ ಹೊರತು ದೇವಸ್ಥಾನಗಳಿಗೆ ದಾನ ದತ್ತಿಗಳನ್ನು ನೀಡಿದ್ದು ತುಂಬಾ ಕಡಿಮೆ. ಪುರುಷ ಪ್ರಧಾನ ಸಮಾಜದಲ್ಲಿ ಇದಕ್ಕೆ ಬೇರೇನೇ ವ್ಯಾಖ್ಯಾಗಳಿದ್ದರೂ ಎಲ್ಲರಿಗೂ ಲಾಭವಾಗಬೇಕೆಂಬ ಉದ್ದೇಶ ಮಹಿಳೆಯರ ಸಾಮಾಜಿಕ ಕಾರ್ಯಗಳ ಹಿಂದೆ ಇದ್ದದ್ದು ಇದರಿಂದ ಸ್ಪಷ್ಟವಾಗುತ್ತದೆ ಎಂದು ಸಂಧ್ಯಾ ರೆಡ್ಡಿ ಮಹಿಳಾ ಪಾತ್ರದ ಬಗ್ಗೆ ವಿಶ್ಲೇಷಿಸಿದರು.
ಮಹಿಳೆಯರನ್ನು ನಮ್ಮ ಸಂಸ್ಕೃತಿಯಲ್ಲಿ ತುಂಬಾ ಪೂಜನೀಯ ಭಾವದಲ್ಲಿ ನೋಡಿದರೂ ಅವಳನ್ನು ಒಂದು ಚೌಕಟ್ಟಿನಲ್ಲಿ ಬಂಧಿಸಿಟ್ಟಿರುವುದು ತುಂಬಾ ವಿಷಾದಕರ. ಒಂದು ಪರಂಪರಾಗತ ಚೌಕಟ್ಟಿನಲ್ಲಿ ಅವಳನ್ನು ನೋಡುತ್ತ ಬಂದಿದ್ದು ಅವಳೇನಾದರೂ ತಪ್ಪಿ ನಡೆದರೆ `ಗಂಡುಬೀರಿ’ ಎಂದೇ ಕರೆಯಲಾಗುತ್ತದೆ. ಮಹಿಳೆಯರಲ್ಲಿ ಎಷ್ಟೇ ಒಳ್ಳೆಯ ಗುಣ-ಸಾಮರ್ಥ್ಯಗಳಿದ್ದರೂ, ಅವಳ ಕೊಡುಗೆಗಳು ಅಪಾರವಾಗಿದ್ದರೂ ಅದನ್ನು ಮರೆಮಾಚಿ ಅವಳನ್ನು ಮೂಢನಂಬಿಕೆಗಳ ಲೋಕಕ್ಕೆ ಎಳೆದೊಯ್ಯುವ ಪ್ರಯತ್ನ ನಡೆಯುತ್ತಿದೆ. ಇಂತಹ ಪ್ರಯತ್ನಗಳು ಕೊನೆಯಾಗಿ ಮಹಿಳೆಯ ಒಳ್ಳೆಯ ಗುಣಗಳನ್ನು ಮಾನ್ಯ ಮಾಡುವ ಪ್ರಯತ್ನ ಆಗಬೇಕಿದೆ ಎಂದು ಅವರು ಹೇಳಿದರು.
ವೇದಿಕೆಯಲ್ಲಿ ಆಳ್ವಾಸ್ ನುಡಿಸಿರಿ-2016ರ ಸಮ್ಮೇಳನಾಧ್ಯಕ್ಷೆ ಡಾ. ಬಿ.ಎನ್. ಸುಮಿತ್ರಾಬಾಯಿ, ನುಡಿಸಿರಿ ಸ್ವಾಗತ ಸಮಿತಿಯ ಉಪಾಧ್ಯಕ್ಷ ಡಾ. ನಾ. ದಾಮೋದರ ಶೆಟ್ಟಿ ಉಪಸ್ಥಿತರಿದ್ದರು.
ಕವಿಸಮಯ-ಕವಿನಮನ: ಕವಿರಾಜ್
ಮೂಡುಬಿದಿರೆ : `ಸಿನಿಮಾ ಹಾಡು ಬರೆಯುವುದು ಅಷ್ಟು ಸುಲಭದ ಕೆಲಸವಲ್ಲ. ಹಾಡು ಬರೆಯುವುದಕ್ಕೂ ಮೊದಲು ಹಾಡಿನ ರಾಗವನ್ನು ಕೊಟ್ಟಿರುತ್ತಾರೆ. ಆ ರಾಗಕ್ಕೆ ತಕ್ಕಂತೆ ಅರ್ಥಪೂರ್ಣವಾಗಿ ಹಾಡುಗಳನ್ನು ರಚಿಸುವುದು, ನಿರ್ದೇಶಕರು ಅದನ್ನು ಒಪ್ಪುವಂತೆ ಮಾಡುವುದು ಕಷ್ಟದ ಕೆಲಸವೇ. ಆದರೆ ಇದ್ಯಾವುದೂ ಗೊತ್ತಿಲ್ಲದ ಕೆಲವು ಜನರು ಸಿನಿಮಾ ಸಾಹಿತ್ಯ ಕ್ಷೇತ್ರದ ಬಗ್ಗೆ ಉಡಾಫೆಯಿಂದ ಮಾತನಾಡುತ್ತಾರೆ’ ಎಂದು ತಮ್ಮ ಸಿನಿಮಾ ಅನುಭವಗಳನ್ನು ಹಂಚಿಕೊಂಡದ್ದು ಖ್ಯಾತ ಸಿನಿಮಾ ಸಾಹಿತಿ ಕವಿರಾಜ್.
ಆಳ್ವಾಸ್ ನುಡಿಸಿರಿಯಲ್ಲಿ ನಡೆದ ಕವಿಸಮಯ-ಕವಿನಮನ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಸಿನಿಮಾ ಹಾಡುಗಳಲ್ಲಿ ಬಳಕೆಯಾಗುವ ಹಲವು ಪದಗಳ ಬಗ್ಗೆ ಜನರು ಆಕ್ಷೇಪ ವ್ಯಕ್ತಪಡಿಸುತ್ತಾರೆ ಎಂದ ಕವಿರಾಜ್ ಅದಕ್ಕೆ ಸಮರ್ಥನೆ ಕೊಟ್ಟರು.
ಜನಸಾಮಾನ್ಯರು ತಮ್ಮ ಆಡುಮಾತಿನಲ್ಲಿ ಬಳಸುವ ಕೆಲವು ಸಹಜ ಪದಗಳನ್ನೇ ಸಿನಿಮಾ ಸಾಹಿತ್ಯದಲ್ಲಿ ಬಳಸಿದರೆ ತಪ್ಪೇನು? ಎಲ್ಲರಿಗೂ ಅರ್ಥವಾಗುವಂತೆ ಸರಳ ಸಾಹಿತ್ಯವನ್ನು ಕೊಟ್ಟಾಗ ಮಾತ್ರ ಅದು ಜನರನ್ನು ಸುಲಭವಾಗಿ ತಲುಪುತ್ತದೆ. ಹೀಗಾಗಿ ಜನಸಾಮಾನ್ಯರ ಕೆಲವು ಆಡುಮಾತುಗಳನ್ನು ಸಾಹಿತ್ಯದಲ್ಲಿ ಬಳಸಿದರೆ ತಪ್ಪಿಲ್ಲ. ಸಿನಿಮಾ ಸಾಹಿತ್ಯ ಬಗ್ಗೆ ಆರೋಪಗಳನ್ನು ಮಾಡುವವರು ಈ ಕ್ಷೇತ್ರದಲ್ಲಿ ಏನನ್ನೂ ಸಾಧಿಸದೇ ಹೊರಬಿದ್ದವರು ಎಂದು ಅವರು ಅಭಿಪ್ರಾಯ ಪಟ್ಟರು.
ಸಿನಿಮಾ ಸಾಹಿತ್ಯಕ್ಕೆ ಅಪಾರವಾದ ಶಕ್ತಿಯಿದೆ. ಮಹಾನ್ ವಿದ್ವಾಂಸರು, ಸಾಹಿತಿಗಳ ಸಾಹಿತ್ಯ ಮಾಡದಿರುವ ಕೆಲವು ಕಾರ್ಯಗಳನ್ನು ಸಿನಿಮಾ ಹಾಡುಗಳು ಮಾಡಿವೆ. ಡಾ. ರಾಜ್ರ `ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು’ ಅಪಾರ ಕನ್ನಡಾಭಿಮಾನವನ್ನು ಬಡಿದೆಬ್ಬಿಸದರೆ, ಸುದೀಪ್ರ `ಏನಾಗಲಿ ಮುಂದೆ ಸಾಗು ನೀ’ ಎಂಬ ಹಾಡು ಜೀವನದಲ್ಲಿ ನಿರಾಶೆ ಕಂಡವರ ಸುಪ್ತಚೈತನ್ಯವನ್ನು ಬಡಿದೆಬ್ಬಿಸಿದೆ. ಇಂತಹ ಹಲವಾರು ಉದಾಹರಣೆಗಳು ನಮ್ಮ ಜೊತೆ ಇವೆ ಎಂದು ಕವಿರಾಜ್ ಹೇಳಿದರು. ಅವರು ಬರೆದ `ಸಂಜೆಗಳೇಕೆ ಹೀಗಿವೆ……ಸುಡು ಸುಡು ಬೇಸಿಗೆ ಹಾಗೆ’ ಭಾವಗೀತೆಗೆ ಆಳ್ವಾಸ್ ವಿದ್ಯಾರ್ಥಿಗಳು ಧ್ವನಿಯಾದರು. ಚಿತ್ರ ಕಲಾವಿದ ಬಾಗೂರು ಮಾರ್ಕಂಡೇಯ ಗೀತೆಗೆ ವರ್ಣ ಚಿತ್ರವನ್ನು ರಚಿಸಿದರು.
ವಿಚಾರಗೋಷ್ಠಿ : ಕೃಷಿ ಮತ್ತು ಪರಿಸರ ನಾಳೆಗಳ ನಿರ್ಮಾಣ: ಎಲ್ ವರ್ತೂರು ನಾರಾಯಣ ರೆಡ್ಡಿ
ಮೂಡುಬಿದಿರೆ: ನಮ್ಮ ನಿಜವಾದ ನೆಮ್ಮದಿ ನಮ್ಮನ್ನು ಹೊತ್ತು ಸಲಹುತ್ತಿರುವ ಭೂಮಿ ತಾಯಿಯನ್ನು ಕಾಪಾಡಿಕೊಳ್ಳುವುದರಲ್ಲಿ ಇದೆ. ಇದನ್ನು ಅರ್ಥ ಮಾಡಿಕೊಳ್ಳದೇ ನಾವು ಭೂಮಿಯನ್ನು ನಮ್ಮ ಭೋಗದ ವಸ್ತುವಾಗಿ ಪರಿಗಣಿಸುತ್ತಿರುವುದೇ ನಮ್ಮೆಲ್ಲಾ ನಿನ್ನೆ ಇಂದು ಹಾಗೂ ನಾಳೆಯ ಸಮಸ್ಯೆಗಳಿಗೆ ಮೂಲ ಕಾರಣ ಎಂದು ನಾಡೋಜ ಎಲ್ ವರ್ತೂರು ನಾರಾಯಣ ರೆಡ್ಡಿ ನುಡಿದರು.
ಸ್ವಾತಂತ್ರ್ಯಪೂರ್ವದ ನಮ್ಮ ದೇಶದ ಕೃಷಿ ಪರಿಸ್ಥಿತಿಯನ್ನು ವಿವರಿಸಿದ ಅವರು, ಆಹಾರಧಾನ್ಯಗಳ ತವರೂರಾಗಿದ್ದ ನಮ್ಮ ದೇಶ ಕೆಲವೇ ವರ್ಷಗಳ ಅಂತರದಲ್ಲಿ ಬರಗಾಲದ ಬೀಡಾಗಿ ಮಾರ್ಪಾಡು ಹೊಂದಿತು. ಕೃಷಿಯನ್ನು ಅವಲಂಬಿತ ಜನ ದಿನ ಕಳದರೆ ಕಷ್ಟ ಕಾರ್ಪಣ್ಯದ ನಡುವೆ ಜೀವನ ಸಾಗಿಸುವ ದಿನಗಳು ಬಂದವು. ಇದೀಗ ಉಣ್ಣುವ ಅನ್ನದ ಜೊತೆಗೆ, ಸೇವಿಸುವ ಗಾಳಿಯು ವಿಷಕಾರಿಯಾಗಿ ನಮ್ಮ ಸರ್ವನಾಶಕ್ಕೇ ನಾವೇ ಕಾರಣಿಭೂತರಾಗಿ ಮಾರ್ಪಾಡುಗೊಂಡಿದ್ದೇವೆ ಎಂದರು. ಕೃಷಿವಿಜ್ಞಾನ ಸಂಶೋಧನೆಗಳು ಜನರಿಗೆ ಉಪಕಾರಿಯಾಗುವ ಬದಲು ಜನರನ್ನು ಹೆಚ್ಚು ಸೋಮಾರಿಯನ್ನರಾಗಿ ರೂಪಿಸಿ, ಮಾರಕ ರಾಸಾಯಾನಿಕ ಪದ್ದತಿಗೆ ಮಾರು ಹೋಗುವಂತೆ ಮಾಡಿವೆ ಎಂದರು. ಒಂದು ಕೀಟದ ನಾಶಕ್ಕೇ 25 ಕೀಟಗಳು ನಮ್ಮ ಪರಿಸರದಲ್ಲೇ ಇವೆ ಎಂಬ ಕನಿಷ್ಠ ಜ್ಞಾನವಿಲ್ಲದೇ, ರಾಸಾಯಾನಿಕ ಗೊಬ್ಬರ ಬಳಕೆಯಿಂದ ನಮ್ಮ ಅವನತಿಯನ್ನು ನಾವೇ ತಂದು ಕೊಳ್ಳುತ್ತಿದ್ದೇವೆ ಎಂದರು.
ಸರ್ಕಾರ ರಾಸಾಯನಿಕ ಗೊಬ್ಬರಗಳ ಬಳಕೆಯನ್ನು ಹೆಚ್ಚು ಹೆಚ್ಚು ಪ್ರಚುರ ಪಡಿಸುವುದನ್ನು ಗಮನಿಸಿದರೆ ಯಾವುದೋ ಬಹುರಾಷ್ಟ್ರೀಯ ಕಂಪೆನಿಯ ಷೇರು ಇವರ ಖಾತೆಗೆ ಜಮಾವಾಗುತ್ತಿರವುದು ಖಾತ್ರಿಯಾಗುತ್ತದೆ ಎಂದರು. ನಾವು ಗಿಡ ಮರವನ್ನು ಬೆಳೆಸಿ ಉಳಿಸಿದರೆ ನಮ್ಮ ಮುಂದಿನ ಸಂತತಿಯನ್ನು ನೂರ್ಕಾಲ ಕಾಪಾಡುದರಲ್ಲಿ ಸಂಶಯವಿಲ್ಲ ಎಂದು ತಿಳಿಸಿದರು. ನಾವು ಪಶುಬಲಿ ನಿಲ್ಲಿಸಿದರೆ, ನಮ್ಮವರು ಬಲಿಪಶು ಆಗುವುದನ್ನ ತಪಿಸಬಹುದು ಎಂದರು. ಒಂದು ಮರ 50 ಸಾವಿರದಷ್ಟು ಆಮ್ಲಜನಕ ನೀಡಬಲ್ಲ ಸಾಮಾರ್ಥ್ಯ ಹೊಂದಿದೆ, ಆದ್ದರಿಂದ ಪ್ರತಿಯೊಬ್ಬರು ತಮ್ಮ ಪರಿಸರದಲ್ಲಿ ಗಿಡಮರವನ್ನು ನೆಟ್ಟು ಉಳಿಸಿ, ನಮ್ಮ ಮೊಮ್ಮಕ್ಕಳ ಸಾಲಕ್ಕೇ ಬಡ್ಡಿ ನೀಡದಿದ್ದರೂ, ಕೊನೆ ಪಕ್ಷ ಮೊತ್ತವನ್ನಾದರೂ ಹಿಂತಿರುಗಿಸುವ ಕೆಲಸವನ್ನು ಮಾಡುವ ಎಂದರು.
ವಿಜ್ಞಾನಿ ಡಾ ಟಿ ವಿ ರಾಮಚಂದ್ರ ಪರಿಸರದ ಕುರಿತು ಮಾತನಾಡಿ, ಶೇಕಡಾ 2.5 ರಷ್ಟು ಇರುವ ಪಶ್ಚಿಮಘಟ್ಟ ನಮ್ಮ ಸಂಪೂರ್ಣ ದಕ್ಷಿಣಭಾರತದ ಪರಿಸರವನ್ನು ಸಮತೋಲನದಲ್ಲಿಡುವಲ್ಲಿ ಸಹಕಾರಿಯಾಗಿದೆ ಎಂದು ತಿಳಿಸಿದರು. ನಿತ್ಯ ನಿರಂತರವಾಗಿ ಸಾಗುತ್ತಿರುವ ನಮ್ಮ ಪರಿಸರದ ಮೇಲಿನ ದಬ್ಬಾಳಿಕೆ, ದೌರ್ಜನ್ಯ ನಮ್ಮ ಸರ್ವನಾಶದ ದಿಕ್ಸೂಚಿ ಎಂದು ತಿಳಿಸಿದರು.
ನಮ್ಮನ್ನಾಳುತ್ತಿರುವ ಸರ್ಕಾರ ವಿಜ್ಞಾನಿಗಳು ನೀಡುತ್ತಿರುವ ವೈಜ್ಞಾನಿಕ ವರದಿಯನ್ನು ಪರಿಗಣಿಸದೆ ಎಸಿರೂಮಿನಲ್ಲಿ ಕುಳಿತು ಅಧಿಕಾರಿಗಳು ತಯಾರಿಸುವ ವರದಿಯನ್ನು ಅನುಷ್ಠಾನಗೊಳಿಸುತ್ತಿವೆ. ವಿಜ್ಞಾನಿಗಳಿಗೆ ದೇಶ,ಭಾಷೆ,ರಾಜ್ಯ, ಸ್ಥಳಗಳ ಹಂಗಿಲ್ಲದೇ ಕಾರ್ಯನಿರ್ವಹಿಸುವವರು ನಾವು, ಆದರೆ ನಮ್ಮನ್ನೆ ಜರಿಯುವವರು ಹೆಚ್ಚು ಎಂದು ತಿಳಿಸಿದರು.
ಉದ್ಯಾನನಗರಿಯಾಗಿದ್ದ ಬೆಂಗಳೂರು ಈಗ ಸತ್ತ ನಗರಿಯಾಗಿ ಮಾರ್ಪಾಡು ಹೊಂದಿದೆ. ಸೇವಿಸಲು ಶುದ್ದ ಆಮ್ಲಜನಕವಿಲ್ಲದೇ, ಹಣಕೊಟ್ಟು ಆಮ್ಲಜನಕದ ವ್ಯಾಪಾರ ಮಾಡುವ ಆಕ್ಸಿಜನ್ ಬಾರ್ಗಳು ತಲೆ ಎತ್ತಿವೆ. ಇಡೀ ಬೆಂಗಳೂರಿಗೆ ಸಾಕಾಗುವಷ್ಟು ಮಳೆ ನೀರನ್ನು ಸಂರಕ್ಷಿಸಿ ಇಡುವುದರಿಂದ ನೀರಿನ ಬೇಡಿಕೆ ಪೂರೈಸಲು ಸಾದ್ಯವಿದ್ದರೂ ಆ ಗೋಜಿಗೆ ಹೋಗುವ ಮನಸ್ಸು ಯಾರಿಗಿಲ್ಲ. ಎತ್ತಿನಹೊಳೆ ಯೋಜನೆಯನ್ನು ಕಟುವಾಗಿ ಟೀಕಿಸಿದ ಅವರು ಇದು ಮೂರ್ಖರಿಂದ ಮೂರ್ಖರೇ ಮಾಡಿರುವ ಯೋಜನೆಯಾಗಿದೆ ಎಂದರು.
ಕವಿ ಸಮಯ- ಕವಿ ನಮನ-ಜ್ಯೋತಿ ಮಹಾದೇವ್
ಸಾಹಿತ್ಯ ಎನ್ನುವುದು ಹುಟ್ಟಿನಿಂದ ಬರುವುದಿಲ್ಲ ನಾವು ಅದನ್ನು ತಪಸ್ಸಾಗಿ ಆಚರಿಸಬೇಕು ಪ್ರಸ್ತುತ ವಿದ್ಯಾಮಾನದಲ್ಲಿ ಸಾಹಿತ್ಯದಲ್ಲಿ ಗೋಡೆ, ಕಂದಕ,ಕೋಟೆಗಳು ಉಂಟಾಗಿ ಬಿರುಕು ಬಿಟ್ಟಿದೆ. ಸಾಹಿತ್ಯವನ್ನು ಉದ್ಯಾನವನ ಮಾಡುವಲ್ಲಿ ಆಲೋಚಿಸಬೇಕೆಂದು ಆಳ್ವಾಸಿನ ರತ್ನಾಕರ ವರ್ಣಿ ವೇದಿಕೆಯಲ್ಲಿ ನಡೆದ ಕವಿ ಸಮಯ ಕವಿ ನಮನದಲ್ಲಿ ಕವಯತ್ರಿ ಜ್ಯೋತಿ ಮಹಾದೇವ್ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡುತ್ತ ಕಾವ್ಯಮೀಮಾಂಸೆಯಲ್ಲಿ ಹಲವು ರಸ, ಪಾಂಡಿತ್ಯ, ವಕ್ರೋಕ್ತಿ ಹಾಗೂ ಹಿತನುಡಿಗಳು ಇದರ ಭಾಗವಾಗಿದೆ.
ಸಾಹಿತ್ಯ ಎನ್ನುವುದು ಆಲದ ಮರವಿದ್ದ ಹಾಗೆ ಅದೇ ರೀತಿ ಸಾಹಿತ್ಯ ಮುಂದೆ ಬರುವ ಸಾಹಿತಿಗಳಿಗೆ ನೆರಳಾಗಿ ಮನೋಲ್ಲಾಸ ನೀಡುವ ತಾಣವಾಗಬೇಕು ಸಾಹಿತ್ಯ ಮತ್ತು ಸಂಸ್ಕೃತಿಯಲ್ಲಿ ನಾವು ಮೊದಲು ಅರಿತುಕೊಂಡು ಅದರ ಬಗ್ಗೆ ಗಮನ ಆರಿಸಬೇಕೆನ್ನುತ್ತಾ ಸಂಸ್ಕೃತಿ ಹಾಗೂ ಪ್ರಕೃತಿಯ ವ್ಯತ್ಯಾಸಗಳನ್ನು ತಿಳಿಸಿಕೊಡುತ್ತಾ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದರು.
ಈ ಕಾರ್ಯಕ್ರಮದಲ್ಲಿ ಡಾ. ಬಿ. ನಾದ ಶೆಟ್ಟಿ ಹಾಗೂ ಡಾ. ಬಿ. ಎನ್ ಸುಮಿತ್ರ ಬಾಯಿ ಉಪಸ್ಥಿತರಿದ್ದರು. ಉಷಾ ನಿರೂಪಿಸಿದರು.
ಕವಿಸಮಯ-ಕವಿಮನ- ಪ್ರಜ್ಞಾಮತ್ತಿಹಳ್ಳಿ
ಬುದ್ದಿವಂತಿಕೆ, ಪ್ರತಿಬೆ ಇದ್ರೆ ಚಂದ ಆದ್ರೆ ಅದುವೇ ಬದುಕಲ್ಲ
ಮಾತು ಸೋತಾಗ ಕವಿತೆ ಬರುತ್ತೆ
ಮನೋಭಾವ, ಅನಿಸಿಕೆಡ, ದೋರಣೆಗಳೇ ಕವಿತೆಯ ಮೂಲ
ನಮ್ಮ ಕವಿತೆ ಒದುವವನ ಯಾವುದೋ ಸಂವೇದನೆಗೆ ತಾಕಿದರೆ ಅದುವೆ ನಿಜವಾದ ಕವಿತೆಯ ಸಾರ್ಥಕತೆ
ಕವಿತೆ ಅನೋದಮಯ, ಅದರ ಮಾರ್ಗದಲ್ಲಿ ಸಾಗುವುದೇ ಸೌಭಗ್ಯ
ನೆಲ-ಜಲ-ನೈಸರ್ಗಿಕ ಸಂಪನ್ಮೂಲ ರಕ್ಷಣೆ
ಮೂಡುಬಿದಿರೆ : `ಅಭಿವೃದ್ಧಿ ಎಂಬ ಮರೀಚಿಕೆಯ ಬೆನ್ನು ಹತ್ತಿದ ನಾವು ಹೊಸ ಲೋಕದಲ್ಲಿ ಬದುಕುತ್ತಿದ್ದೇವೆ. ತಂತ್ರಜ್ಞಾನದ ಕಡೆಗೆ ತೋರಿಸುತ್ತಿರುವ ಆಸಕ್ತಿಯಲ್ಲಿ ಸ್ವಲ್ಪವನ್ನಾದರೂ ಪರಿಸರ ಸಂರಕ್ಷಣೆಯತ್ತ ತೋರಬೇಕು. ನಮ್ಮ ಕೆರೆ ಕಟ್ಟೆಗಳನ್ನು ಬೇರೆ ಯಾರೋ ಬಂದು ನೋಡಿಕೊಳ್ಳಲಿ ಎನ್ನುವ ಬದಲು ಸಕ್ರಿಯವಾಗಿ ಪಾಲ್ಗೊಂಡು ನಾವೇ ನಮ್ಮ ಜಲ ಹಾಗೂ ಪ್ರಕೃತಿ ಮೂಲಗಳ ಸಂರಕ್ಷಣೆ ಮಾಡಬೇಕಿದೆ. ಹಾಗಾದಾಗ ಮಾತ್ರ ನಮ್ಮ ಪ್ರಕೃತಿಯಲ್ಲಿ ಸಮತೋಲನ ಸಾಧಿಸಲು ಸಾಧ್ಯ’ ಎಂದು ಪರಿಸರ ತಜ್ಞ ಕೇಶವ ಹೆಗಡೆ ಕೊರ್ಸೆ ಹೇಳಿದರು.
ಆಳ್ವಾಸ್ ನುಡಿಸಿರಿಯಲ್ಲಿ ನೆಲ-ಜಲ-ನೈಸರ್ಗಿಕ ಸಂಪನ್ಮೂಲ ರಕ್ಷಣೆ ಎಂಬ ವಿಷಯದ ಕುರಿತು ವಿಶೇಷೋಪನ್ಯಾಸ ನೀಡಿದರು. ನಮ್ಮಲ್ಲಿ ಶೇ.10 ಅರಣ್ಯ ಕೂಡ ಇಲ್ಲ. ಈ ಅರಣ್ಯಪ್ರದೇಶಗಳಲ್ಲಿ ಇಂದಿಗೂ ಜನವಸತಿಯಿದ್ದು, ನೈಸರ್ಗಿಕ ಅರಣ್ಯ ರಕ್ಷಣೆ ಸಾಧ್ಯವಾಗುತ್ತಿಲ್ಲ. ಮಾನವ ನಿರ್ಮಿತ ಗೋಮಾಳ ಕೂಡ ಅನೇಕ ಕಾರಣಗಳಿಂದಾಗಿ ನಾಶವಾಗುತ್ತಿದೆ. ಗೋಮಾಳಗಳ ನಾಶವೇ ಹಳ್ಳಿಗಳು ಸಂಕಷ್ಟಕ್ಕೆ ಸಿಲುಕಲು ಕಾರಣ. ಅವೈಜ್ಞಾನಿಕ ಜೀವನ ವಿಧಾನಗಳು, ನಮ್ಮನ್ನು ಕಾಡುತ್ತಿರುವ ಆಂತರಿಕ ಗೊಂದಲ, ಹೊಣೆಗಾರಿಕೆಯಿಂದ ತಪ್ಪಿಸಿಕೊಳ್ಳುತ್ತಿರುವ ಮನುಷ್ಯನ ರೀತಿಗಳು ಅರಣ್ಯ ನಾಶಕ್ಕೆ ಕಾರಣವಾಗಿವೆ ಎಂದು ಅವರು ವಿಶ್ಲೇಷಿಸಿದರು.
ಜಲಮೂಲಗಳ ವಿಷಯ ಬಂದಾಗಲೂ ಅಷ್ಟೇ. ನದಿಗಳನ್ನು ಯಥೇಚ್ಛವಾಗಿ ಬಳಸಬಹುದೆಂಬ ಭಾವನೆ ಇಂದು ನೀರಿನ ಮೂಲಗಳನ್ನೇ ನಾಶಪಡಿಸುವುದರ ಜೊತೆಗೆ ಅಂತರ್ಜಾಲ ಮೂಲಗಳನ್ನು ಹಾಳು ಮಾಡಿವೆ. ನೀರಿನ ಮೂಲಗಳೇ ಮಲಿನಗೊಂಡ ಕಾರಣದಿಂದ ಇಂದು ಹೊಸ ಬಗೆಯ ಕ್ಯಾನ್ಸರ್ಗಳು ಮಾನವ ಲೋಕಕ್ಕೆ ಮಾರಿಯಾಗಿ ಕಾಡುತ್ತಿವೆ ಎಂದ ಕೇಶವ ಹೆಗಡೆಯವರು, ತಂತ್ರಜ್ಞಾನವನ್ನು ಸರಿಯಾದ ರೀತಿಯಲ್ಲಿ ಬಳಸಲು ಸೋಲುತ್ತಿರುವ ಮನುಷ್ಯನ ಅಜ್ಞಾನವನ್ನು ಟೀಕಿಸಿದರು. ಎಲ್ಲ ಸಮಸ್ಯೆಗಳಿಗೂ ತಂತ್ರಜ್ಞಾನದಿಂದ ಪರಿಹಾರ ಕಂಡುಕೊಳ್ಳಲು ಸಾಧ್ಯವಿಲ್ಲ. ಆದರೆ ಅದರಿಂದ ಒಳ್ಳೆಯ ಚಿಂತನೆಗಳಿಗೆ ಒಂದು ಅಡಿಪಾಯವನ್ನು ಸೃಷ್ಟಿಸಬಹುದು. ಒಳ್ಳೆಯ ಹಿತ್ತಿಲು ಇದ್ದಾಗ ಮಾತ್ರ ಅಂಗಳದಲ್ಲಿ ಸುಂದರ ಸೌಧವನ್ನು ಕಟ್ಟಲು ಸಾಧ್ಯ ಎಂದು ಸೂಚ್ಯವಾಗಿ ಹೇಳಿದರು.
Comments are closed.