ಮಂಗಳೂರು, ಅಕ್ಟೋಬರ್. 6; ಎಮ್ ಆರ್.ಪಿ.ಎಲ್ ರಸ್ತೆ ದುರಸ್ತಿಗೆ ಆಗ್ರಹಿಸಿ ನಾಗರಿಕರು ನಡೆಸುತ್ತಿರುವ ಹೋರಾಟ ದಿನದಿಂದ ದಿನಕ್ಕೆ ತೀವ್ರಗೊಳ್ಳುತ್ತಿದೆ. ಕಂಪೆನಿ ಮತ್ತು ಪಾಲಿಕೆಯ ಮಧ್ಯೆ ರಸ್ತೆ ನಿರ್ವಹಣೆ ಕುರಿತು ಹೆಚ್ಚುತ್ತಿರುವ ತಿಕ್ಕಾಟ – ವಿವಾದದ ನಡುವೆಯೇ ಇಂದು “ನಾಗರಿಕ ಹೋರಾಟ ಸಮಿತಿ ವತಿಯಿಂದ ಸುರತ್ಕಲ್’ನಿಂದ ಎಮ್ ಆರ್ ಪಿ ಎಲ್ ಪ್ರಧಾನ ದ್ವಾರದವರಗೆ ಪಾದಯಾತ್ರೆ ನಡೆಯಿತು.
ಎಮ್ ಅರ್ ಪಿ ಎಲ್ ಪ್ರಧಾನ ದ್ವಾರದ ಮುಂಭಾಗ ನಡೆದ ಪ್ರತಿಭಟನಾ ಸಭೆಯನ್ನುದ್ದೇಶಿಸಿ ಮಾತನಾಡಿದ dyfi ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ, “Mrpl ಕಂಪೆನಿಯು ರಸ್ತೆ ದುರಸ್ತಿಗೊಳಿಸದಿದ್ದಲ್ಲಿ ಸಾರ್ವಜನಿಕರೊಂದಿಗೆ ಸೇರಿ ಕಂಪೆನಿ ವಿರುದ್ಧ ಪ್ರತಿಭಟನೆ ನಡೆಸುತ್ತೇವೆ ಎಂದು ಕಂಪೆನಿ ಮತ್ತು ಜನಪ್ರತಿನಿಧಿಗಳ ವಿರುದ್ದ ತೀವ್ರ ವಾಗ್ದಾಳಿ ನಡೆಸಿದರು. ಇನ್ನು ಹದಿನೈದು ದಿನಗಳಲ್ಲಿ ರಸ್ತೆ ದುರಸ್ತಿಗೊಳ್ಳದಿದ್ದಲ್ಲಿ ಎಮ್ ಆರ್.ಪಿ.ಎಲ್ – ಸುರತ್ಕಲ್ ರಸ್ತೆ ಸಂಚಾರವನ್ನು ಪೂರ್ಣ ಪ್ರಮಾಣದಲ್ಲಿ ತಡೆದು ಹೋರಾಟವನ್ನು ತೀವ್ರಗೊಳಿಸುವುದಾಗಿ ಅವರು ಎಚ್ಚರಿಸಿದರು.
“ಮೇಯರ್ ಮತ್ತು ಜನಪ್ರತಿನಿಧಿಗಳನ್ನು ಆಯ್ಕೆಮಾಡಿ ಕಳುಹಿಸಿರುವುದು ಅಧಿಕಾರ ನಡೆಸಲು, ಪಾಲಿಕೆ ಸೇರಿದಂತೆ ಜಿಲ್ಲಾಡಳಿತ ತಮಗಿರುವ ಅಧಿಕಾರ ಬಳಸಿ ಕಂಪೆನಿಗಳನ್ನು ನಿಯಂತ್ರಿಸಬೇಕು. ಎಮ್ ಆರ್ ಪಿ ಎಲ್, ಎಚ್ ಪಿ ಸಿ ಎಲ್, ಬಿ ಎ ಎಸ್ ಎಫ್ ಮುಂತಾದ ಕಂಪೆನಿಗಳಿಂದ ರಸ್ತೆಯನ್ನು ಕಾಪಾಡಲು ನಿಮ್ಮಿಂದ ಸಾಧ್ಯವಿಲ್ಲ ಎಂದಾದರೆ ಮೇಯರ್ ಹರಿನಾಥ್ ಮೊದಲು ತನ್ನ ಸ್ಥಾನಕ್ಕೆ ರಾಜಿನಾಮೆ ನೀಡಲಿ. ನಂತರ ಸಾರ್ವಜನಿಕರ ಜೊತೆ ಹೋರಾಟಕ್ಕೆ ನೇತೃತ್ವ ಕೊಡಲಿ” ಎಂದು ಮುನೀರ್ ನೇರ ಸವಾಲು ಹಾಕಿದರು.
ಪಾದಯಾತ್ರೆ ಸಾಗುವ ಮಾರ್ಗದಲ್ಲಿ BASF, HPCL ಕಂಪೆನಿಗಳ ದ್ವಾರದ ಮುಂಭಾಗ ಒಂದಷ್ಟು ಹೊತ್ತು ನಿಂತು ಘೋಷಣೆಗಳನ್ನು ಹಾಕುವ ಮೂಲಕ ಕಂಪೆನಿಗಳ ವಿರುದ್ದ ಜನರ ಅತೃಪ್ತಿಯನ್ನು ಪ್ರತಿಭಟನಾಕಾರರು ವ್ಯಕ್ತಪಡಿಸಿದರು.
ಹೋರಾಟ ಸಮಿತಿಯ ಸಂಚಾಲಕ ಬಿ ಕೆ ಇಮ್ತಿಯಾಜ್, ಸಹ ಸಂಚಾಲಕ ನವೀನ್ ಪೂಜಾರಿ ಪಾದಯಾತ್ರೆಯ ನೇತೃತ್ವ ವಹಿಸಿದ್ದರು. ಸಲೀಂ ಶ್ಯಾಡೋ, ಮೆಹಬೂಬ್ ಕಾನ, ಶ್ರೀನಿವಾಸ ಹೊಸಬೆಟ್ಟು, ಮುಹಮ್ಮದಾಲಿ ಬಾಳ, ಬಿ ಕೆಮಕ್ಸೂದ್, ಅಜ್ಮಾಲ್ ಕಾನ ಸಹಿತ ಸ್ಥಳೀಯ ಹಲವು ಸಂಘಸಂಸ್ಥೆಗಳ ಪ್ರತಿನಿಧಿಗಳು ಉಪಸ್ಥಿತರಿದ್ದರು.
ಜಿಲ್ಲಾಧಿಕಾರಿಗಳಿಂದ ರಸ್ತೆ ವೀಕ್ಷಣೆ:
ಸತತ ಪ್ರತಿಭಟನೆಗಳಿಂದ ರಸ್ತೆ ಅವ್ಯವಸ್ಥೆ ವಿವಾದವಾಗುತ್ತಿರುವುದು, ಜನಪ್ರತಿನಿಧಿಗಳು, ಪಾಲಿಕೆಗೆ ಕಗ್ಗಂಟಾಗಿರುವುದು ಜಿಲ್ಲಾಡಳಿಕ್ಕೆ ಬಗ್ಗೆ ಬಿಸಿ ಮುಟ್ಟಿಸಿದೆ. ಪಾದಯಾತ್ರಯೆ ನಂತರ ಜಿಲ್ಲಾಧಿಕಾರಿಗಳು ರಸ್ತೆ ಅವ್ಯವಸ್ತೆ ವೀಕ್ಷಣೆಗೆ ಪಾಲಿಕೆ ಅಧಿಕಾರಿಗಳ ಜೊತೆಗೆ ಸ್ಥಳಕ್ಕೆ ಭೇಟಿ ನೀಡಿದ್ದಾರೆ ಎಂದು ಮುನೀರ್ ಕಾಟಿಪಳ್ಳ ತಿಳಿಸಿದ್ದಾರೆ.
Comments are closed.