
ಕುವೈತ್: ಕುವೈತ್ ಕನ್ನಡ ಕೂಟದ ಮರಳ ಮಲ್ಲಿಗೆ ದಿನಾಚರಣೆ – ’ಪ್ರತಿಭಾಯಣ’ ಕಾರ್ಯಕ್ರಮವು ಇತ್ತೀಚೆಗೆ ಖೈತಾನ್ ನ ಕಾರ್ಮೆಲ್ ಶಾಲಾ ಸಭಾಂಗಣದಲ್ಲಿ ಜರುಗಿತು. ಕನ್ನಡದ ಪ್ರಸಿದ್ಧ ಹಾಸ್ಯ ಕಲಾವಿದ, ರಂಗಭೂಮಿ, ಕಿರಿತೆರೆ, ಬೆಳ್ಳಿತೆರೆ ನಟ ಮತ್ತು ನಿರ್ದೇಶಕರೂ ಆಗಿರುವ ಶ್ರೀ ನಾಗರಾಜ ಕೋಟೆ ಅವರ ಹಾಸ್ಯವನ್ನು ಒಳಗೊಂಡ ಕಾರ್ಯಕ್ರಮ ತುಂಬಾ ಸೊಗಸಾಗಿ ಮೂಡಿಬಂದಿತು. ಕೋಟೆಯವರು ತಮ್ಮ ಪ್ರತಿಯೊಂದು ಪದ, ಪ್ರತಿ ಮಾತುಗಳಲ್ಲಿ ಹಾಸ್ಯದ ಹೊನಲನ್ನೆ ಹರಿಸಿ, ಸುಮಾರು ಒಂದೂವರೆ ಗಂಟೆಗಳ ಕಾಲ ಪ್ರೇಕ್ಷಕರನ್ನು ನಗೆಗಡಲಲ್ಲಿ ತೇಲಿಸಿದರು.







ಕೂಟದ ಕಾರ್ಯಕಾರಿ ಸಮಿತಿಯವರುಗಳಾದ ಅಧ್ಯಕ್ಷ ಸಿ.ಎ.ಪ್ರಶಾಂತ್ ಶೆಟ್ಟಿ, ಉಪಾಧ್ಯಕ್ಷ ರಾಜೇಶ್ ವಿಠ್ಠಲ್ ಪಿಎಮ್ಪಿ, ಕಾರ್ಯದರ್ಶಿ ಶ್ರೀ ಪ್ರಭು ಆಚಾರ್ ಹಾಗೂ ಖಜಾಂಚಿ ಡಾ|ಶಶಿಕಿರಣ್ ಜಿ. ಪ್ರಭು ರವರು ಜ್ಯೋತಿ ಬೆಳಗುವುದರ ಮೂಲಕ ಕಾರ್ಯಕ್ರಮ ಪ್ರಾರಂಭವಾಯಿತು. ಕೂಟದ ಅಧ್ಯಕ್ಷರು ತಮ್ಮ ಸ್ವಾಗತ ಭಾಷಣದಲ್ಲಿ, ಕನ್ನಡ ಸಾಹಿತ್ಯ, ಸಂಸ್ಕೃತಿಯ ಬಗ್ಗೆ ಯುವ ಪೀಳಿಗೆಗೆ, ಸದಸ್ಯರಿಗೆ ತಿಳಿಸಿ ಹೇಳಿದರು.
ಕಾರ್ಯಕಾರಿ ಸಮಿತಿಯವರು ಕೂಟದ ಪರವಾಗಿ ಶ್ರೀ ನಾಗರಾಜ ಕೋಟೆಯವರನ್ನು ಶಾಲು ಹೊದೆಸಿ, ಸ್ಮರಣಿಕೆ ನೀಡಿ, ಪುರಸ್ಕರಿಸಿ ಸನ್ಮಾನಿಸಿದರು. ಮರಳಮಲ್ಲಿಗೆ ಸಮಿತಿ ಸಂಚಾಲಕಿ ಶ್ರೀಮತಿ ಸಂಧ್ಯಾ ಮತ್ತು ಸಮಿತಿಯವರು ’ಮರಳ ಮಲ್ಲಿಗೆ’ ಸಂಚಿಕೆಯನ್ನು ಬಿಡುಗಡೆಗೊಳಿಸಿದರು.
ನಾಲ್ಕು ತಂಡಗಳಾಗಿ ಕೂಟದ ಸದಸ್ಯರು ನಟಿಸಿದ ಹಾಸ್ಯ ವಿಡಂಬನೆಗಳು ಪ್ರೇಕ್ಷಕರ ಮೆಚ್ಚುಗೆ ಗಳಿಸಿತು. ಕೂಟದ ಕನ್ನಡ ಕಲಿಕೆ ಶಾಲೆ ’ಚಿಗುರುಬಳ್ಳಿ’ ಯ ಚಿಣ್ಣರು ಹಾಡುಗಳನ್ನು ಹಾಡಿ ಮನರಂಜಿಸಿದರು. ಕೂಟದ ಮಕ್ಕಳಿಗೆ ಹಲವಾರು ಸ್ಪರ್ಧೆಗಳನ್ನು ಆಯೋಜಿಸಲಾಗಿದ್ದು, ವಿಜೇತ ಮಕ್ಕಳಿಗೆ ಹಾಗೂ ತಂಡಗಳಿಗೆ ಬಹುಮಾನ ಗಳನ್ನು ನೀಡಿ ಪುರಸ್ಕರಿಸಲಾಯಿತು. ಕಾರ್ಯದರ್ಶಿ ಶ್ರೀ ಪ್ರಭು ಆಚಾರ್ ರವರಿಂದ ಧನ್ಯವಾದ ಸಮರ್ಪಣೆಯೊಂದಿಗೆ ಕಾರ್ಯಕ್ರಮ ಸಮಾಪನಗೊಂಡಿತು.
Comments are closed.