ಕುಂದಾಪುರ: ಇದ್ದೊಬ್ಬ ಪುತ್ರ ಯಾವುದೋ ಕಾರಣಕ್ಕೆ ಆತ್ಮಹತ್ಯೆಗೆ ಶರಣಾಗಿ ತಿಂಗಳಷ್ಟೇ ಆಗಿದೆ. ಆದರೇ ಆತನ ಅಗಲುವಿಕೆಯ ನೋವನ್ನು ತಾಳದ ಆತನ ತಾಯಿ ಭಾನುವಾರ ಮನೆಯಲ್ಲಿ ನೀಣು ಬಿಗಿದು ಆತ್ಮಹತ್ಯೆಗೆ ಶರಣಾದ ಘಟನೆ ಮೇ.29ರಂದು ಕುಂದಾಪುರ ತಾಲೂಕಿನ ನಾಡ ಎಂಬಲ್ಲಿ ನಡೆದಿದೆ.
ನಾಡಾ ನಿವಾಸಿ ಚಿಕ್ಕು ಮಡಿವಾಳ(48) ಎನ್ನುವವರೇ ಆತ್ಮಹತ್ಯೆಗೆ ಶರಣಾದ ಮಹಿಳೆ. ಕಳೆದ ತಿಂಗಳು ಆಕೆ ಮಗ ಮಂಜುನಾಥ ಮನೆ ಸಮೀಪ ಆತ್ಮಹತ್ಯೆ ಮಾಡಿಕೊಂಡಿದ್ದರು.
ಘಟನೆ ವಿವರ: ಚಿಕ್ಕು ಮಡಿವಾಳ ಅವರು ತನ್ನ ಪುತ್ರ ಮಂಜುನಾಥನೊಂದಿಗೆ ನಾಡಾದ ತನ್ನ ಮನೆಯಲ್ಲಿ ವಾಸಿಸುತ್ತಾ ಅಲ್ಲಲಿ ಕೂಲಿಕೆಲಸ ಹಾಗೂ ಉದ್ಯೋಗ ಖಾತ್ರಿ ಮೊದಲಾದ ಕೆಲಸ ಮಾಡಿ ಜೀವನ ನಿರ್ವಹಣೆ ಮಾಡಿಕೊಂಡಿದ್ದರು. ಬೆಂಗಳೂರಿನಲ್ಲಿ ಬೀಡ ಅಂಗಡಿ ನಡೆಸಿಕೊಂಡಿದ್ದ ಮಂಜುನಾಥ ಇತ್ತೀಚೆಗೆ ಊರಿಗೆ ಬಂದಿದ್ದು ಯಾವುದೇ ಕೆಲಸ ಮಾಡದೇ ಮನೆಯಲ್ಲಿಯೇ ಇದ್ದ. ಆತನ ಮದುವೆಯನ್ನೂ ಕೂಡ ನಿಶ್ಚಯಿಸಿ ಲಗ್ನಪತ್ರಿಕೆಯನ್ನು ಅಚ್ಚುಹೊಡೆಸಲು ಕೊಡಲಾಗಿತ್ತು. ಆದರೇ ಕಳೆದ ತಿಂಗಳು ಏ.18ರಂದು ಸೋಮವಾರ ಲಗ್ನಪತ್ರಿಕೆ ಕೈಗೆ ಸಿಗುವ ದಿನವೇ ಮಂಜುನಾಥ ಮನೆ ಸಮೀಪದ ಹಾಡಿಯಲ್ಲಿ ಆತ್ಮಹತ್ಯೆಗೆ ಶರಣಾಗಿದ್ದ.
ತಾಯಿಗೆ ಧೈರ್ಯ ಹೇಳು ಎಂದಿದ್ದ ಮಗ…
ಕಳೆದ ತಿಂಗಳು ಆತ್ಮಹತ್ಯೆಯ ಮೊದಲು ಮಂಜುನಾಥ ತನ ಸ್ನೇಹಿತನೋರ್ವನ ಮೊಬೈಲಿಗೆ ‘ನಾನು ಸಮಸ್ಯೆಯಲ್ಲಿರುವೆ, ಅದರಿಂದಾಗಿ ಮನನೊಂದಿರುವೆ, ಆದ್ದರಿಂದ ಸಾಯುವ ನಿರ್ಧಾರಕ್ಕೆ ಬಂದಿರುವೆ, ನನ್ನ ತಾಯಿಗೆ ಧೈರ್ಯ ತುಂಬು..ಆಕಎಯನ್ನು ಚೆನ್ನಾಘಿ ನೋಡಿಕೊಳ್ಳಿ’ ಎಂದು ಸಂದೇಶ ಕಳುಹಿಸಿ ಬಳಿಕ ಕ್ರತ್ಯಕ್ಕೆ ಮುಂದಾಗಿದ್ದ.
(ಆತ್ಮಹತ್ಯೆ ಮಾಡಿಕೊಂಡ ಚಿಕ್ಕು ಮಗ ಮಂಜುನಾಥ)
ಆದರೇ ಇದ್ದೊಬ್ಬನೇ ಮಗ ಈ ರೀತಿಯಾಗಿ ಆತ್ಮಹತ್ಯೆ ಮಾಡಿಕೊಂಡ ತರುವಾಯ ಚಿಕ್ಕು ಅವರು ಮಾನಸಿಕವಾಗಿ ನೊಂದಿದ್ದರು. ಆತನ ಅಂತ್ಯಸಂಸ್ಕಾರದ ಎಲ್ಲಾ ಕ್ರಿಯೆಗಳು ಮುಗಿದ ಮೇಲೆ ಕಳೆದ ಹನ್ನೆರಡು ದಿನಗಳ ಹಿಂದಷ್ಟೇ ಚಿಕ್ಕು ಅವರನ್ನು ಸಂಬಂಧಿಕರು ಬೆಂಗಳುರಿಗೆ ಕರೆದೊಯ್ದಿದ್ದರು. ಆದರೇ ಎರಡು ದಿನಗಳ ಹಿಂದೆ ಬ್ಯಾಂಕಿಗೆ ಹೋಗಬೇಕಿರುವ ಕಾರಣ ಹೇಳಿದ ಚಿಕ್ಕು ಅವರು ಬೆಂಗಳುರಿನಿಂದ ತನ್ನ ಸಹೋದರಿ ನಿವಾಸವಾದ ಕೋಟೇಶ್ವರಕ್ಕೆ ಬಂದು ಅಲ್ಲಿಂದ ಭಾನುವಾರ ಬೆಳೀಗ್ಗೆ ನಾಡಾದ ತನ್ನ ಮನೆಗೆ ಬಂದಿದ್ದರು ಎನ್ನಲಾಗಿದೆ.
ಬೆಳಿಗ್ಗೆಯೂ ಆಚೀಚೆ ಮನೆಯವರೊಂದಿಗೆ ಉತ್ತಮವಾಗಿಯೇ ಮಾತನಾಡಿಕೊಂಡಿದ್ದ ಚಿಕ್ಕು ಅವರು ಮಧ್ಯಾಹ್ನದ ಬಳಿಕ ಮನೆಯ ಮಾಳಿಗೆಯಲ್ಲಿ ನೇಣುಬಿಗಿದು ಆತ್ಮಹತ್ಯೆಗೆ ಶರಣಾಗಿದ್ದಾರೆ. ಚಿಕ್ಕು ಅವರು ಶ್ರಮಜೀವಿಯಾಗಿದ್ದು ಈ ಪರಿಸರದಲ್ಲಿ ಶೋಕದ ಛಾಯೆ ಆವರಿಸಿದೆ.
ಘಟನಾ ಸ್ಥಳಕ್ಕೆ ತಾಲೂಕುಪಂಚಾಯತ್ ಉಪಾಧ್ಯಕ್ಷ ಪ್ರವೀಣ್ ಕುಮಾರ ಶೆಟ್ಟಿ ಕಡ್ಕೆ, ಗಂಗೊಳ್ಳಿ ಪೊಲೀಸರು ಭೇಟಿ ನೀಡಿದ್ದಾರೆ.
ಈ ಬಗ್ಗೆ ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿರಿ:
‘ನಾನು ಸಾಯ್ತಿದ್ದೀನಿ, ಅಮ್ಮನಿಗೆ ಧೈರ್ಯ ಹೇಳು’- ಸ್ನೇಹಿತನಿಗೆ ಸಂದೇಶ ಕಳುಹಿಸಿ ಯುವಕ ಆತ್ಮಹತ್ಯೆ
Comments are closed.