ಕುಂದಾಪುರ: ಕಳೆದ ವರ್ಷ ಜುಲೈ ತಿಂಗಳಲ್ಲಿ ನಿಗೂಢವಾಗಿ ಸಾವನ್ನಪ್ಪಿದ ಶಿರೂರು ಪ.ಪೂ ಕಾಲೇಜಿನ ವಿದ್ಯಾರ್ಥಿನಿ ರತ್ನ ಕೊಠಾರಿ ಪೋಷಕರಿಗೆ ಹಾಗೂ ಇತ್ತೀಚೆಗೆ ಕೊಲೆಗೀಡಾದ ಬೈಂದೂರು ಸ.ಪ.ಪೂ.ಕಾಲೇಜಿನ ವಿದ್ಯಾರ್ಥಿನಿ ಅಕ್ಷತಾ ದೇವಾಡಿಗ ಹಾಗೂ ಬಿಡುಗಡೆಯಾದ ಪರಿಹಾರ ಮೊತ್ತವನ್ನು ಆಯಾ ಕಾಲೇಜಿನಲ್ಲಿ ಮೃತ ವಿದ್ಯಾರ್ಥಿನಿಯರ ಪಾಲಕರಿಗೆ ಹಸ್ತಾಂತರಿಸಲಾಯಿತು.
ಅಕ್ಷತಾ ದೇವಾಡಿಗ ಕುಟುಂಬಕ್ಕೆ 5 ಲಕ್ಷ, ಶಿಕ್ಷಣ ಇಲಾಖೆಯಿಂದ 50ಸಾವಿರ ಮತ್ತು ರತ್ನಾ ಕೊಠಾರಿ ಕುಟುಂಬಕ್ಕೆ ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ 3ಲಕ್ಷ ಮೊತ್ತದ ಚೆಕ್ನ್ನು ಜಿಲ್ಲಾ ಉಸ್ತುವಾರಿ ಸಚಿವರಾದ ವಿನಯ ಕುಮಾರ್ ಸೊರಕೆ ವಿತರಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಬೈಂದೂರು ಶಾಸಕರ ವಿಶೇಷ ಮುತುವರ್ಜಿಯಿಂದ ಮೃತ ವಿದ್ಯಾರ್ಥಿನಿಯರ ಕುಟುಂಬಕ್ಕೆ ಪರಿಹಾರ ದೊರಕಿಸಿಕೊಡುವ ಕೆಲಸ ಆಗಿದೆ. ರತ್ನಾ ಕೊಠಾರಿ ಸಾವಿನ ಬಗ್ಗೆ ಇನ್ನೂ ಕೂಡಾ ಖಚಿತ ತೀರ್ಮಾನಕ್ಕೆ ಬಾರದೇ ಇರುವುದು ಪರಿಹಾರ ಧನ ಮಂಜೂರಾತಿಗೆ ವಿಳಂಭವಾಯಿತು. ಸರಕಾರ ಮಟ್ಟದಿಂದ ಪರಿಹಾರ ಧನ ದೊರಕುವುದು ಇನ್ನೂ ವಿಳಂಬವಾಗುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದಲೇ ಹಣವನ್ನು ನೀಡುವ ಕೆಲಸ ಆಗಿದೆ ಎಂದರು.
ರತ್ನಾ ಕೊಠಾರಿ ಸಾವಿನ ಪ್ರಕರಣದ ತನಿಖೆ ಇನ್ನೂ ಪ್ರಗತಿಯಲ್ಲಿದೆ. ತನಿಖೆಯ ಪುನರ್ ಪರಿಶೀಲನೆಯ ಬಗ್ಗೆ ಇಲಾಖೆಗೆ ಸ್ಪಷ್ಟವಾಗಿ ಸೂಚಿಸಲಾಗಿದೆ. ಗ್ರಾಮಾಂತರ ಪ್ರದೇಶದಿಂದ ಬರುವ ವಿದ್ಯಾರ್ಥಿಗಳ ಬಗ್ಗೆ ಮುತುವರ್ಜಿ ವಹಿಸುವುದು, ಪೊಲೀಸ್ ಇಲಾಖೆ ಕೂಡಾ ದೌರ್ಜನ್ಯ ಪ್ರಕರಣಗಳು ಕಂಡುಬಂದ ತಕ್ಷಣ ಆಧ್ಯತೆಯಡಿ ಕಾರ್ಯ ನಿರ್ವಹಿಸುವಂತೆ ಸೂಚನೆ ನೀಡಲಾಗಿದೆ. ಸರಕಾರ ವಿದ್ಯಾರ್ಥಿಗಳ ಸುರಕ್ಷತೆ ಬಗ್ಗೆ ಹೆಚ್ಚಿನ ನಿಗಾ ವಹಿಸಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಾಸಕ ಗೋಪಾಲ ಪೂಜಾರಿ ಮಾತನಾಡಿ, ರತ್ನಾ ಕೊಠಾರಿ ಸಾವಿನ ಕಾರಣದ ಕುರಿತಾಗಿ ಪೊಲೀಸ್ ಇಲಾಖೆ ಚಾರ್ಜ್ಸೀಟ್ ಸಲ್ಲಿಕೆ ಮಾಡದೇ ಇರುವುದು ಪರಿಹಾರ ಧನ ಮಂಜೂರಾತಿಗೆ ಕಾನೂನಿನ ತೊಡಕನ್ನು ಅನುಭವಿಸಬೇಕಾಯಿತು. ಬಡ ಕುಟುಂಬಕ್ಕೆ ಆವತ್ತೆ ನಾನು 3 ಲಕ್ಷ ಪರಿಹಾರ ಒದಗಿಸುವ ಮಾತು ಕೊಟ್ಟಿದ್ದು, ಎಲ್ಲಿಯೂ ಸಾಧ್ಯವಿಲ್ಲ ಎನ್ನುವ ಭಾವನೆ ವ್ಯಕ್ತ ಪಡಿಸಿಲ್ಲ. ಕೊಠಾರಿ ಸಂಘಟನೆಗಳಿಗೂ ಕೂಡಾ ಈ ಬಗ್ಗೆ ಮನವರಿಕೆ ಮಾಡಿಕೊಟ್ಟಿದ್ದೆ. ಬೆಳಗಾವಿ ಅಧಿವೇಶನದಲ್ಲಿ ರತ್ನಾ ಕೊಠಾರಿ ಸಾವಿನ ಬಗ್ಗೆ ವಿಶೇಷ ಪೈಲ್ ತಯಾರಿಸಿ, ನೇರಾ ಮುಖ್ಯಮಂತ್ರಿ ಪರಿಹಾರ ನಿಧಿಯಿಂದ ಪರಿಹಾರ ಧನ ಘೋಷಿಸಬೇಕೆಂದು ಮುಖ್ಯಮಂತ್ರಿಗಳಿಗೆ ಮನವಿ ಮಾಡಿಕೊಂಡಿದ್ದೆ. ಇದಕ್ಕೆ ಸ್ಪಂದಿಸಿದ ಮುಖ್ಯಮಂತ್ರಿಗಳು ಪರಿಹಾರ ಧನ ಮಂಜೂರಾತಿ ನೀಡಿದ್ದಾರೆ. ಆ ಮೊತ್ತವನ್ನು ಈಗ ಬಡ ಕುಟುಂಬಕ್ಕೆ ನೀಡುವ ಕಾರ್ಯ ಆಗಿದೆ. ರತ್ನಾ ಕೊಠಾರಿ ಸಾವಿನ ಪ್ರಕರಣ ಯಾರೂ ಮರೆತಿಲ್ಲ. ಅದರ ನಿಖರ ಕಾರಣ ಹೊರ ಬರಲಿದೆ. ತನಿಖೆ ಮುಂದುವರಿಯಲಿದೆ ಎಂದರು.
ಈ ಸಂದರ್ಭದಲ್ಲಿ ಜಿ.ಪಂ.ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷೆ ಗೌರಿ ದೇವಾಡಿಗ, ತಾ.ಪಂ.ಸದಸ್ಯರಾದ ರಾಜು ಪೂಜಾರಿ, ಸಾವಿತ್ರಿ ಅಳ್ವೆಗದ್ದೆ, ರಮೇಶ ಗಾಣಿಗ, ಗ್ರಾಮ ಪಂಚಾಯತ್ ಅಧ್ಯಕ್ಷೆ ದಿಲ್ಶಾದ್ ಬೇಗಂ, ಉಪಾಧ್ಯಕ್ಷ ನಾಗೇಶ ಮೊಗವೀರ, ತಹಶೀಲ್ದಾರ್ ಗಾಯತ್ರಿ ನಾಯಕ್, ಬೈಂದೂರು ವಿಶೇಷ ತಹಶೀಲ್ದಾರ್ ಕೊಠಾರಿ ಸಂಘದ ಅಧ್ಯಕ್ಷರು, ಮೊದಲಾದವರು ಉಪಸ್ಥಿತರಿದದರು. ಶಿರೂರು ಕಾಲೇಜಿನ ಶ್ರೀದೇವಿ ಕಾರ್ಯಕ್ರಮ ನಿರ್ವಹಿಸಿ, ಪ್ರಾಂಶುಪಾಲರಾದ ಎಂ.ಪಿ.ನಾಯಕ್ ವಂದಿಸಿದರು.