ಫೋಟೋ: ಅಶೋಕ್ ಬೆಳ್ಮಣ್
ದುಬೈ, ಜು.6: ಯುಎಇ ಪದ್ಮಶಾಲಿ ಸಮುದಾಯದವರಿಂದ ಮೂರನೆ ಸತ್ಯನಾರಾಯಣ ಪೂಜೆಯು ದುಬೈಯ ಸಿಂಧಿ ಸೆರೆಮೋನಿಯಲ್ ಸಭಾಂಗಣದಲ್ಲಿ ಶುಕ್ರವಾರದಂದು ನಡೆಯಿತು.
ಯುಎಇ ಪದ್ಮಶಾಲಿ ಸಮುದಾಯದವರು ತಮ್ಮ ಐದು ವರ್ಷಗಳನ್ನು ಪೂರ್ಣಗೊಳಿಸಿದ ಶುಭ ಸಂದರ್ಭದಲ್ಲಿ ಆಯೋಜಿಸಿದ್ದ ಶ್ರೀ ಸತ್ಯನಾರಾಯಣ ಪೂಜೆಯ ಪೌರೋಹಿತ್ಯವನ್ನು ಯಕ್ಷಗಾನ ಪ್ರಸಂಗಕರ್ತ, ವಾಸ್ತುತಜ್ಞ ಮತ್ತು ಜ್ಯೋತಿಷಿ ಕೆ.ಬಸವರಾಜ್ ಶೆಟ್ಟಿಗಾರ್ ನಡೆಸಿಕೊಟ್ಟರು.
ಸಂಕಲ್ಪ, ಕಲಶ ಪ್ರತಿಷ್ಠಾಪನೆಯ ನಂತರ ಸುಮಾರು ಒಂದೂವರೆ ತಾಸಿನ ಭಜನಾ ಕಾರ್ಯಕ್ರಮವನ್ನು ಪದ್ಮಶಾಲಿ ಭಜನಾ ತಂಡವು ಇತರ ಭಕ್ತವೃಂದದವರೊಂದಿಗೆ ಗೋಧೋಳಿ ಲಗ್ನನಲ್ಲಿ ನೆರವೇರಿಸಿದರು. ನಂತರ ಪೂಜೆಯ ಪುರೋಹಿತರಾದ ಬಸವರಾಜ್ ಶೆಟ್ಟಿಗಾರ್ ತಮ್ಮ ಜ್ಞಾನ ಭಂಡಾರ ಮತ್ತು ಸುಮಧುರ ಕಂಠದಿಂದ ಶ್ರೀ ಸತ್ಯನಾರಾಯಣ ಕಥಾ ಭಾಗವನ್ನು ಬಹಳ ಅರ್ಥಪೂರ್ಣವಾಗಿ ವಿವರಿಸಿದರು.
ಈ ವೇಳೆ ಬಸವರಾಜ್ ಶೆಟ್ಟಿಗಾರ್ ಅವರನ್ನು ಸನ್ಮಾನಿಸಲಾಯಿತು. ಡಾ.ಪದ್ಮನಾಭ ಶೆಟ್ಟಿಗಾರ್ ಸನ್ಮಾನಪತ್ರ ವಾಚಿಸಿದರು. ರಘುರಾಮ್ ಶೆಟ್ಟಿಗಾರ್ ದಂಪತಿಗಳು ಶಾಲು ಹೊದಿಸಿ, ಪುಷ್ಪಗುಚ್ಚ ನೀಡಿದರು. ವರದರಾಜ್ ದಂಪತಿಗಳು ಹಣ್ಣಹಂಪಲು ಹಾಗೂ ಜಗದೀಶ್ ಶೆಟ್ಟಿಗಾರ್ ಸ್ಮರಣಿಕೆ ನೀಡಿದರು. ಸಮುದಾಯದ ಅಧ್ಯಕ್ಷ ರವಿ ಶೆಟ್ಟಿಗಾರ್ ಸನ್ಮಾನ ಪತ್ರ ನೀಡಿ ಗೌರವಿಸಿದರು.