ಉಳ್ಳಾಲ: ಕ್ರೈಸ್ತ ಸಮುದಾಯದ ಯುವತಿಯನ್ನು ಬಲವಂತವಾಗಿ ಮದುವೆ ಮಾಡಿ ಮತಾಂತರಕ್ಕೆ ಯತ್ನಿಸಿದ ಆರೋಪದಲ್ಲಿ ನಾನಾ ಸೆಕ್ಷನ್ನಡಿ ಕೇಸು ದಾಖಲಾಗಿದ್ದರೂ ಆರೋಪಿಗಳನ್ನು ಬಂಧಿಸುವಲ್ಲಿ ಕೊಣಾಜೆ ಪೊಲೀಸರು ವಿಫಲರಾಗಿದ್ದಾರೆ ಎಂದು ಆಕ್ಷೇಪಿಸಿದ ಪಿಎಫ್ಐ ಆರೋಪಿಗಳನ್ನು ಬಂಧಿಸುವಂತೆ ಆಗ್ರಹಿಸಿ ಕೊಣಾಜೆ ಪೊಲೀಸ್ ಠಾಣೆ ಆವರಣದಲ್ಲಿ ಸೋಮವಾರ ಪ್ರತಿಭಟನೆ ನಡೆಸಿತು.
ಕ್ರೈಸ್ತ ಸಮುದಾಯದ ಯುವತಿ ಜೊತೆ ಬಲವಂತದ ಮದುವೆ ಪ್ರಕರಣದ ಆರೋಪಿಗಳಾದ ಜಗದೀಶ ಶೇಣವ, ರೋಹನ್ ಶೆಟ್ಟಿ, ಪ್ರವೀಣ್, ಶರತ್, ಗಣೇಶ್ ಕುಂಪಲ, ದಿನೇಶ್ ಕದ್ರಿ ಮುಂತಾದವರನ್ನು ಬಂಧಿಸದೆ ಇರುವುದು ಪೊಲೀಸರ ನಿರ್ಲಕ್ಷ್ಯ. ಪೊಲೀಸರು ವಿಳಂಬ ಮಾಡುವುದರ ಹಿಂದೆ ಇಬ್ಬಗೆ ನೀತಿ ಕಾಣುತ್ತಿದೆ ಎಂದು ಎಸ್ಡಿಪಿಐ ರಾಜ್ಯ ಸಮಿತಿ ಸದಸ್ಯ ಅಲ್ಫೋನ್ಸ್ ಫ್ರಾಂಕೋ ಆರೋಪಿಸಿದರು.
ಪ್ರಕರಣದ ನಿಷ್ಪಕ್ಷಪಾತ ಹಾಗೂ ಸಮಗ್ರ ತನಿಖೆ ನಡೆಸಿ ಆರೋಪಿಗಳನ್ನು ಬಂಧಿಸಿ, ಅನ್ಯಾಯಕ್ಕೊಳಗಾದ ಯುವತಿಗೆ ಒಂದು ವಾರದಲ್ಲಿ ನ್ಯಾಯ ದೊರಕಿಸಿ ಕೊಡದಿದ್ದರೆ ಜಿಲ್ಲಾಧಿಕಾರಿ ಕಚೇರಿ ಮುಂದೆ ಬಹತ್ ಪ್ರತಿಭಟನೆ ನಡೆಸಲಾಗುವುದು ಎಂದು ಮಂಗಳೂರು ಕ್ರಿಯೇಶನ್ ಫೌಂಡೇಶನ್ ಅಧ್ಯಕ್ಷ ಅನ್ವರ್ ಸಾದಾತ್ ಎಚ್ಚರಿಸಿದರು.
ಪ್ರತಿಭಟನೆಯಲ್ಲಿ ಮುಖಂಡರಾದ ಇಮಾಮ್ ಕೌನ್ಸಿಲ್ ಜಿಲ್ಲಾಧ್ಯಕ್ಷ ಜಾಫರ್ ಸಾದಿಕ್ ಫೈಝಿ, ಪಾವೂರು ಗ್ರಾಮ ಪಂಚಾಯಿತಿ ಸದಸ್ಯ ವಲೇರಿಯನ್ ಡಿಸೋಜ, ಎ.ಎಂ.ಅತ್ತಾವುಲ್ಲಾ, ಹನೀಫ್ ಕಾಟಿಪಳ್ಳ ಹಾಗೂ ಝಿಯಾದ್ ಮಲಾರ್ ಮುಂತಾದವರು ಉಪಸ್ಥಿತರಿದ್ದರು.