ಮಂಗಳೂರು, ಅ.08 : ಪಣಂಬೂರು ಪೊಲೀಸರು ನಡೆಸಿದ ಯಶಸ್ವಿ ಕಾರ್ಯಾಚರಣೆಯೊಂದರಲ್ಲಿ ದ್ವಿಚಕ್ರ ವಾಹನದಲ್ಲಿ ಬಂದು ರಸ್ತೆಯಲ್ಲಿ ನಡೆದುಕೊಂಡು ಹೋಗುವ ಮಹಿಳೆಯರ ಚಿನ್ನಾಭರಣಗಳನ್ನು ದೋಚಿ ಪರಾರಿಯಾಗುತ್ತಿದ್ದ ಪ್ರಕರಣವನ್ನು ಬೇಧಿಸಿ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ಆರೋಪಿಗಳು ಪಣಂಬೂರು ಠಾಣೆಯ ಒಂದು ಪ್ರಕರಣ ಸೇರಿದಂತೆ ಮಂಗಳೂರು ನಗರದ ಮುಲ್ಕಿ, ಮಂಗಳೂರು ಗ್ರಾಮಾಂತರ , ಮಂಗಳೂರು ದಕ್ಷಿಣ , ಉಳ್ಳಾಲ , ಮಂಗಳೂರು ಪೂರ್ವ ಪೊಲೀಸು ಠಾಣೆ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ನಗರ ಪೊಲೀಸು ಠಾಣೆ ಮತ್ತು ಕಾಸರಗೋಡು ಜಿಲ್ಲೆಯ ಮಂಜೇಶ್ವರ ಪೊಲೀಸು ಠಾಣಾ ವ್ಯಾಪ್ತಿ ಮುಂತಾದ ಕಡೆಗಳಲ್ಲಿ ಚಿನ್ನಾಭರಣಗಳನ್ನು ದೋಚಿರುವ ಬಗ್ಗೆ ತಿಳಿಸಿದ್ದಾರೆ ಎಂದು ಬುಧವಾರ ಮಂಗಳೂರು ನಗರ ಪೊಲೀಸ್ ಅಯುಕ್ತ ಆರ್.ಹಿತೇಂದ್ರ ಅವರು ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ್ದಾರೆ.
ಬಂಧಿತ ಆರೋಪಿಗಳನ್ನು ಮುಂಬಾಯಿಯ ಸಾವರ್ಕರ್ ನಗರದ ಮಾತೋಶ್ರೀ ಅಪಾರ್ಟ್ಮೆಂಟ್ ನಿವಾಸಿ ಅಬ್ದುಲ್ ಅಜೀಜ್ ಅವರ ಪುತ್ರ ಜಾಕೀರ್ ಹುಸೈನ್ (23), ಬಜಾಲ್ ಪಕ್ಕಲಡ್ಕ ಯುವಕ ಮಂಡಲದ ಸಮೀಪದ ನಿವಾಸಿ ಮೊಯಿದ್ದೀನ್ ಎಂಬವರ ಪುತ್ರ ಮಹಮ್ಮದ್ ರಿಜ್ವಾನ್ ( 23) ಪೆರ್ಮನ್ನೂರು ಗ್ರಾಮದ ಬಿ ಕೆ ಹೌಸ್ ಚೊಂಬುಗುಡ್ಡೆ ನಿವಾಸಿ ಮಹಮ್ಮದ್ ಮುಸ್ತಾಫ ಅವರ ಪುತ್ರ ಇರ್ಷಾದ್ (28) ಎಂದು ಹೆಸರಿಸಲಾಗಿದೆ.
ಬಂಧಿತರಿಂದ ಒಟ್ಟು 12 ಪ್ರಕರಣಗಳಲ್ಲಿ ಸುಮಾರು 11 ಲಕ್ಷದ ಮೌಲ್ಯದ ಒಟ್ಟು 409 ಗ್ರಾಂ ತೂಕದ 12 ಚಿನ್ನದ ಸರಗಳನ್ನು ಹಾಗೂ ಕೃತ್ಯಕ್ಕೆ ಉಪಯೋಗಿಸಿದ ಸುಮಾರು ಒಂದು ಲಕ್ಷ ಮೌಲ್ಯದ 3 ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಂಡಿರುವುದಾಗಿದೆ ಎಂದು ಕಮಿಷನರ್ ತಿಳಿಸಿದರು.
ಘಟನೆ ವಿವರ :
ದಿನಾಂಕ:24-09-14 ರಂದು ಸಂಜೆ 5 ಗಂಟೆ ವೇಳೆಗೆ ಬೈಕಂಪಾಡಿ ಕೈಗಾರಿಕಾ ಪ್ರದೇಶದಲ್ಲಿ ಕೆಲಸ ಮುಗಿಸಿ ಬೈಕಂಪಾಡಿ ಜಂಕ್ಷನ್ನಿಂದ ಮೀನಕಳಿಯಾ ಹಳೇ ರೈಲ್ವೇ ವಸತಿ ಗೃಹದ ಬಳಿ ನಡೆದುಕೊಂಡು ಹೋಗುತ್ತಿದ್ದ ಶ್ರೀಮತಿ ಆಶಾಲತಾ ಬಂಗೇರ ಎಂಬವರಲ್ಲಿ ಮೋಟಾರು ಸೈಕಲ್ಲಿನಲ್ಲಿ ಬಂದು ಇಬ್ಬರು ವ್ಯಕ್ತಿಗಳು ದಾರಿ ಕೇಳಿ ಅವರ ಕುತ್ತಿಗೆಯಲ್ಲಿದ್ದ ಸುಮಾರು ಒಂದು ಲಕ್ಷ ಮೌಲ್ಯದ 5 ಪವನು ತೂಕದ ಕರಿಮಣಿ ಸರವನ್ನು ದೋಚಿ ಪರಾರಿಯಾಗಿದ್ದು ಈ ಬಗ್ಗೆ ಪಣಂಬೂರು ಪೊಲೀಸು ಠಾಣೆಯಲ್ಲಿ ದಿನಾಂಕ: 24-09-2014 ಪ್ರಕರಣ ದಾಖಲಾಗಿದೆ.
ಈ ಪ್ರಕರಣದ ತನಿಖೆಯನ್ನು ಕೈಗೊಂಡ ಪಣಂಬೂರು ಪೊಲೀಸು ಠಾಣಾ ಪೊಲೀಸು ನಿರೀಕ್ಷಕರು ಮತ್ತು ಅವರ ತಂಡ ಪ್ರಕರಣದಲ್ಲಿ ಆರೋಪಿಗಳು ಉಪಯೋಗಿಸಿದ ಮೋಟಾರು ಸೈಕಲ್ಲಿನ ಮಾಹಿತಿಯ ಆಧಾರದಲ್ಲಿ ಸುಳಿವು ಪತ್ತೆ ಹಚ್ಚಿ ಈ ಮೂವರು ಆರೋಪಿಗಳನ್ನು ಸೆರೆ ಹಿಡಿದಿದ್ದಾರೆ.
ಮಂಗಳೂರು ನಗರದ ಪೊಲೀಸು ಆಯುಕ್ತರಾದ ಶ್ರೀ ಆರ್. ಹಿತೇಂದ್ರ ಇವರ ನಿರ್ದೇಶನದಂತೆ ಮಂಗಳೂರು ನಗರ ಪೊಲೀಸ್ ಉಪ ಆಯುಕ್ತರುಗಳಾದ ಶ್ರೀ. ಜಗದೀಶ್ ಮತ್ತು ಶ್ರೀ. ವಿಷ್ಣುವರ್ಧನ್ ಇವರ ಮಾರ್ಗದರ್ಶನದಂತೆ ಮಂಗಳೂರು ಉತ್ತರ ವಿಭಾಗದ ಮಾನ್ಯ ಸಹಾಯಕ ಪೊಲೀಸ್ ಆಯುಕ್ತರಾದ ಶ್ರೀ. ರವಿಕುಮಾರ್.ಎಸ್. ಇವರ ಖುದ್ದು ನೇತ್ರತ್ವದಲ್ಲಿ ಪಣಂಬೂರು ಠಾಣಾ ಪೊಲೀಸು ನಿರೀಕ್ಷಕರಾದ ಶ್ರೀ ಲೋಕೇಶ್ ಎ.ಸಿ ಹಾಗೂ ಪೊಲೀಸು ಉಪ ನಿರೀಕ್ಷಕರಾದ ಶ್ರೀ ಸತೀಶ್ ಎಮ್ ಪಿ, ಎಎಸ್ಐಗಳಾದ ಶ್ರೀ ಯೋಗೀಶ್ , ಶ್ರೀ ಹರೀಶ್ , ಶ್ರೀಮತಿ ಸುಂದರಿ ಸಿಬ್ಬಂದಿಗಳಾದ ಕುಶಲ ಮಣಿಯಾಣಿ, ಸತೀಶ್ , ಚಿದಾನಂದ , ಪುರುಷೋತ್ತಮ, ರಶೀದ್ , ಮಂಜಪ್ಪ, ರಾಧಾಕೃಷ್ಣ, ಉದಯಕುಮಾರ್ , ಚಂದ್ರಹಾಸ ಆಳ್ವ, ಮಂಜುನಾಥ, ಮತ್ತು ಸುರತ್ಕಲ್ ಠಾಣಾ ಬಿ ಕೆ ಕೃಷ್ಣ ಮುಂತಾದವರು ಈ ಪ್ರಕರಣದ ಪತ್ತೆ ಕಾರ್ಯದಲ್ಲಿ ಭಾಗವಹಿಸಿದ್ದರು.