ಮಂಗಳೂರು, ಸೆ.15: ಮಂಗಳೂರು ಕೇರಳ ಸಮಾಜಂ ವತಿಯಿಂದ ನಗರದ ಟಿ.ಎಂ.ಎ. ಪೈ ಸಭಾಂಗಣದಲ್ಲಿ ಬಾನುವಾರ ಓಣಂ ಆಚರಣೆಯನ್ನು ಸಂಭ್ರಮ ಸಡಗರದಿಂದ ಅಚರಿಸಲಾಯಿತು.
ರಾಜ್ಯ ಇಂಧನ ಸಚಿವ ಡಿ.ಕೆ. ಶಿವಕುಮಾರ್ ಸಮಾರಂಭವನ್ನು ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ಕೇರಳ ರಾಜ್ಯದ ಜನರು ಶಿಕ್ಷಣದಲ್ಲಿ ಉನ್ನತ ಸಾಧನೆ ಮಾಡಿ ರಾಷ್ಟ್ರದ ಗಮನ ಸೆಳೆದಿದ್ದಾರೆ. ಇದರೊಂದಿಗೆ ಸಮೃದ್ಧ ವಾದ ಸಾಂಸ್ಕೃತಿಕ ಪರಂಪರೆಯನ್ನು ಉಳಿಸಿಕೊಂಡು ಮುಂದಿನ ಪೀಳಿಗೆಗೂ ತಲುಪಿಸುವ ಮಹತ್ವದ ಕೆಲಸವನ್ನು ಕೇರಳೀಯರು ಮಾಡುತ್ತಿದ್ದಾರೆ ಎಂದು ಶ್ಲಾಘನೆ ವ್ಯಕ್ತಪಡಿಸಿದರು.
ಸಾಮಾಜಿಕ ಸಾಮರಸ್ಯ ಸಾರುವ ಹಬ್ಬ :
ಓಣಂ ಆಚರಣೆ ಕೇರಳದ ಎಲ್ಲಾ ಜಾತಿ, ಜನಾಂಗದ ಜನ ಒಟ್ಟಾಗಿ ಆಚರಿಸುವ ಹಬ್ಬವಾಗಿರುವ ಕಾರಣ ಸಾಮಾಜಿಕ ಸಾಮರಸ್ಯದ ಸಂಕೇತವಾ ಗಿದೆ. ಕರಾವಳಿಯ ಮಲಬಾರ್ ತೀರದ ಒಂದು ಭಾಗವಾಗಿರುವ ಕೇರಳ ಇನ್ನೊಂದು ಭಾಗವಾದ ರಾಜ್ಯದ ಕರಾವಳಿ ತೀರವಾದ ದಕ್ಷಿಣ ಕನ್ನಡ ಜಿಲ್ಲೆಗೂ ಆಹಾರ, ಆಚರಣೆ, ಸಂಪ್ರದಾಯಗಳಲ್ಲಿ ಹಲವಾರು ಸಾಮ್ಯತೆ ಇದೆ ಎಂದು ರಾಜ್ಯ ಅರಣ್ಯ ಸಚಿವ ಬಿ.ರಮಾನಾಥ ರೈ ತಿಳಿಸಿದರು.
ಕಾಸರಗೋಡು ಜಿಲ್ಲೆ ಹಿಂದೆ ದ.ಕ.ಜಿಲ್ಲೆಯ ಒಂದು ಭಾಗವಾಗಿದ್ದ ಕಾರಣ ಇಲ್ಲಿಯ ಎಲ್ಲಾ ಆಚರಣೆಗಳು ಕೇರಳದ ಬಹುತೇಕ ಪ್ರದೇಶದಲ್ಲಿ ಕಾಣಲು ಸಾಧ್ಯವಾಗುತ್ತದೆ. ಕೇರಳ ಹಾಗೂ ಕರ್ನಾಟಕಕ್ಕೆ ಅವಿನಾಭಾವ ಸಂಬಂಧ ಇದೆ ಎಂದು ರಾಜ್ಯ ಯುವಜನ ಸೇವೆ ಕ್ರೀಡೆ ಹಾಗೂ ಮೀನುಗಾರಿಕಾ ಸಚಿವ ಅಭಯಚಂದ್ರ ಜೈನ್ ಹೇಳಿದರು.
ಮಂಗಳೂರು ಕೇರಳ ಸಮಾಜಂನ ಅಧ್ಯಕ್ಷ ಟಿ.ಕೆ.ರಾಜನ್ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಸಮಾರಂಭದಲ್ಲಿ ನಗಾರಾಭಿವೃದ್ಧಿ ಸಚಿವ ವಿನಯ ಕುಮಾರ್ ಸೊರಕೆ, ಸಂಸದ ನಳಿನ್ ಕುಮಾರ್ ಕಟೀಲ್, ಶಾಸಕರಾದ ಜೆ.ಆರ್.ಲೋಬೊ, ಮೊಯ್ದಿನ್ ಬಾವ, ಎ.ಜೆ. ಸಮೂಹ ಸಂಸ್ಥೆಗಳ ಅಧ್ಯಕ್ಷ ಎ.ಜೆ.ಶೆಟ್ಟಿ, ಗೋಕುಲಂ ಸಮೂಹ ಸಂಸ್ಥೆಗಳ ಅಧ್ಯಕ್ಷ ಗೋಕುಲಂ ಗೋಪಾಲಂ ಮೊದಲಾ ದವರು ಉಪಸ್ಥಿತರಿದ್ದರು.
ಕೇರಳ ಸಮಾಜಂನ ಕಾರ್ಯದರ್ಶಿ ವಿ.ಎಸ್.ಅಜಿತ್ಕುಮಾರ್ ಸ್ವಾಗತಿಸಿದರು. ಕೇರಳ ಸಮಾಜಂನ ಉಪಾಧ್ಯಕ್ಷ ಎ.ಪಿ.ಬಾಲಗೋಪಾಲನ್ ವಂದಿಸಿದರು.
ಇದೇ ಸಂದರ್ಭದಲ್ಲಿ ಪೂಕಳಂ ಸ್ಪರ್ಧೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.