ಯಾನ್ಗೊನ್: ಉತ್ತರ ಮಾಯನ್ಮಾರ್ ಕಚಿನ್ ಜೇಡ್ ಗಣಿಯಲ್ಲಿ ಸಂಭವಿಸಿದ್ದ ಭೂಕುಸಿತ ಪ್ರಕರಣದಲ್ಲಿ ಸಾವನ್ನಪ್ಪಿರುವ ಸಂಖ್ಯೆ 100ಕ್ಕೇರಿದ್ದು, ಮಣ್ಣಿನ ಅವಶೇಷಗಳಡಿಯಲ್ಲಿ ಮತ್ತಷ್ಟು ದೇಹಗಳು ಸಿಲುಕಿರುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ನಿನ್ನೆ ಸಂಜೆ ಸಂಭವಿಸಿದ ಭೂಕುಸಿತದಲ್ಲಿ ಈ ವರೆಗೂ ಸುಮಾರು 100 ಶವಗಳನ್ನು ಹೊರತೆಗೆಯಲಾಗಿದ್ದು, ನಾಪತ್ತೆಯಾಗಿರುವ ಸ್ಥಳೀಯರಿಗಾಗಿ ಶೋಧ ಕಾರ್ಯ ನಡೆಯುತ್ತಿದೆ. ಇನ್ನು ರಕ್ಷಣಾ ಕಾರ್ಯಾಚರಣೆಗೆ ಮ್ಯಾನ್ಮಾರ್ ಭದ್ರತಾ ಪಡೆಗಳನ್ನು ನಿಯೋಜಿಸಲಾಗಿದ್ದು, ಸುಮಾರು 150ಕ್ಕೂ ಅಧಿಕ ಸೈನಿಕರು ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ. ಗಾಯಾಳುಗಳನ್ನು ಸಮೀಪದ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಇನ್ನು ಮೃತಪಟ್ಟವರ ಪೈಕಿ ಬಹುತೇಕರು ವಿವಿಧ ಪ್ರದೇಶಗಳಿಂದ ಕೆಲಸಕ್ಕೆ ಬಂದಿದ್ದ ಕೆಲಸಗಾರರು ಎಂದು ತಿಳಿದುಬಂದಿದೆ. ಭೂಕುಸಿತಕ್ಕೆ ಈ ವರೆಗೂ ನಿಗಧಿತ ಕಾರಣ ತಿಳಿದುಬಂದಿಲ್ಲವಾದರೂ, ಗಣಿಗಾರಿಕೆಯಿಂದ ಗುಡ್ಡದ ತಳದಲ್ಲಿದ್ದ ಮಣ್ಣು ಸಡಿಲಗೊಂಡು ಭೂಕುಸಿತ ಸಂಭವಿಸಿರಬಹುದು ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಪ್ರಸ್ತುತ ಪ್ರಕರಣ ಸಂಬಂಧ ತನಿಖೆಗೆ ಆದೇಶಿಸಲಾಗಿದ್ದು, ಕಚಿನ್ ಜೇಡ್ ಸರ್ಕಾರ ತನಿಖೆಯ ಮೇಲುಸ್ತುವಾರಿ ನೋಡಿಕೊಳ್ಳಲಿದೆ ಎಂದು ಮ್ಯಾನ್ಮಾರ್ ಅಧ್ಯಕ್ಷರ ಕಚೇರಿಯ ಹಿರಿಯ ಅಧಿಕಾರಿ ಝಾವ್ ಹ್ಟೇ ಹೇಳಿದ್ದಾರೆ.