ಇಸ್ಲಾಮಾಬಾದ್: ಮುಸ್ಲಿಮರ ಪವಿತ್ರ ಹಬ್ಬವಾದ ರಮಜಾನ್ ಸಂದರ್ಭದಲ್ಲಿ ಗಲ್ಲು ಶಿಕ್ಷೆಗೆ ಗುರಿಯಾದ ಕೈದಿಗಳಿಗೆ ಗಲ್ಲಿಗೇರಿಸದಂತೆ ಪ್ರಧಾನಮಂತ್ರಿ ನವಾಜ್ ಷರೀಫ್ ನೇತೃತ್ವದ ಸರಕಾರ ಆದೇಶ ಹೊರಡಿಸಿದೆ.
ದೇಶದ ಅಂತರಿಕ ಸಚಿವಾಲಯ ಇಂದು ಎಲ್ಲಾ ರಾಜ್ಯಗಳಿಗೆ ನೋಟಿಸ್ ಜಾರಿ ಮಾಡಿದ್ದು ಕೇಂದ್ರ ಸರಕಾರದ ಆದೇಶ ಪಾಲನೇ ಮಾಡುವಂತೆ ಆದೇಶ ನೀಡಿದೆ ಎಂದು ಮಾಧ್ಯಮ ಮೂಲಗಳು ವರದಿ ಮಾಡಿವೆ.
ರಮಜಾನ್ ಹಬ್ಬದ ಸಂದರ್ಭದಲ್ಲಿ ಮುಸ್ಲಿಂ ಭಾಂಧವರು ಉಪವಾಸ ವೃತವನ್ನು ಕೈಗೊಳ್ಳುವುದರಿಂದ ಗಲ್ಲು ಶಿಕ್ಷೆಗೆ ಗುರಿಪಡಿಸುವುದು ಸರಿಯಲ್ಲ ಎಂದು ಪಾಕ್ ಸಂಸತ್ತು ಅಭಿಪ್ರಾಯಪಟ್ಟಿದೆ.
ಯುರೋಪ್ ರಾಷ್ಟ್ರಗಳು ಸೇರಿದಂತೆ ಹಲವು ರಾಷ್ಟ್ರಗಳು ಮತ್ತು ಮಾನವ ಹಕ್ಕುಗಳ ಅಂತಾರಾಷ್ಟ್ರೀಯ ಸಂಘಟನೆಗಳು ಗಲ್ಲು ಶಿಕ್ಷೆಯನ್ನು ರದ್ದುಪಡಿಸುವಂತೆ ಪಾಕಿಸ್ತಾನ ಸರಕಾರವನ್ನು ಒತ್ತಾಯಿಸಿದ್ದವು.
ಪಾಕಿಸ್ತಾನದಲ್ಲಿ ಅಪರಾಧಿಕ ನ್ಯಾಯಾಂಗ ವ್ಯವಸ್ಥೆಯಲ್ಲಿ ಪೊಲೀಸರ ಕ್ರೂರತೆ ಬಯಲಾಗಿದೆ. ಕಾನೂನು ವ್ಯವಸ್ಥೆಯಲ್ಲಿನ ಲೋಪದೋಷಗಳಿಂದಾಗಿ ಆರೋಪಿಗಳಿಗೆ ಸೂಕ್ತ ನ್ಯಾಯ ದೊರೆಯುತ್ತಿಲ್ಲ ಎನ್ನುವುದು ಯುರೋಪ್ ರಾಷ್ಟ್ರಗಳ ವಾದವಾಗಿದೆ.
ಪಾಕಿಸ್ತಾನದಲ್ಲಿ ಗಲ್ಲಿಗೇರಿಸುವುದು ಕಾನೂನು ಬದ್ಧವಾಗಿದೆ.ಭಯೋತ್ಪಾದನೆ ತಡೆಗೆ ಇಂತಹ ಕಠಿಣ ಶಿಕ್ಷೆ ಸೂಕ್ತ ಎಂದು ಪಾಕ್ ಸರಕಾರ ಸ್ಪಷ್ಟಪಡಿಸಿದೆ.