ಹೈದರಾಬಾದ್ (ಜು. 5): ಕೊರೋನಾದಿಂದಾಗಿ ಇಡೀ ದೇಶದ ಜನರು ಹೊರಗೆ ಬರಲು ಹೆದರುವಂತಾಗಿದೆ. ಭಾರತದಲ್ಲಿ ಕೊರೋನಾ ಸೋಂಕಿತರ ಪ್ರಮಾಣ 6.5 ಲಕ್ಷಕ್ಕೆ ಏರಿಕೆಯಾಗಿದೆ. ಹೈದರಾಬಾದ್ನಲ್ಲಿ ನಿನ್ನೆ ಅತ್ಯಧಿಕ ಪ್ರಮಾಣದ 1,600 ಕೊರೋನಾ ಕೇಸ್ಗಳು ಪತ್ತೆಯಾಗಿವೆ. ಇದರ ಜೊತೆಗೆ, ಹೈದರಾಬಾದ್ನ ಖ್ಯಾತ ಜ್ಯುವೆಲರಿ ಶಾಪ್ ಮಾಲೀಕ ಕೊರೋನಾದಿಂದ ಸಾವನ್ನಪ್ಪಿರುವುದು ಇನ್ನಷ್ಟು ಆತಂಕಕ್ಕೆ ಕಾರಣವಾಗಿದೆ.
ಹೈದರಾಬಾದ್ನ ಹಿಮಾಯತ್ನಗರದಲ್ಲಿ ಬಹುದೊಡ್ಡ ಆಭರಣ ಮಳಿಗೆಯನ್ನು ಹೊಂದಿರುವ ಮಾಲೀಕರೊಬ್ಬರು ಕೆಲವು ದಿನಗಳ ಹಿಂದೆ ಹೈದರಾಬಾದ್ನ ಗಣ್ಯ ವ್ಯಕ್ತಿಗಳನ್ನು ಕರೆಸಿ, ಬರ್ತಡೇ ಪಾರ್ಟಿ ಮಾಡಿದ್ದರು. ಈ ಪಾರ್ಟಿಯಲ್ಲಿ ಜ್ಯುವೆಲರಿ ಅಸೋಸಿಯೇಷನ್ ಸದಸ್ಯರು ಸೇರಿದಂತೆ ನೂರಕ್ಕೂ ಹೆಚ್ಚು ಗಣ್ಯರು ಪಾಲ್ಗೊಂಡಿದ್ದರು. ಈ ಪಾರ್ಟಿ ಆಯೋಜಿಸಿದ್ದ ವ್ಯಕ್ತಿ ಶನಿವಾರ ಕೊರೋನಾದಿಂದ ಸಾವನ್ನಪ್ಪಿದ್ದಾರೆ.
ಇಂಡಿಯನ್ ಎಕ್ಸ್ಪ್ರೆಸ್ನ ವರದಿ ಪ್ರಕಾರ, ಈ ಪಾರ್ಟಿಯಲ್ಲಿ ಪಾಲ್ಗೊಂಡಿದ್ದ ಮತ್ತೋರ್ವ ಪ್ರಸಿದ್ಧ ಆಭರಣ ಅಂಗಡಿಯ ಮಾಲೀಕ ಕೂಡ ಶನಿವಾರ ಸಾವನ್ನಪ್ಪಿದ್ದಾರೆ. ಅವರಿಗೂ ಈ ಪಾರ್ಟಿಯನ್ನು ಆಯೋಜಿಸಿದ್ದ ಆಭರಣ ಮಳಿಗೆಯ ಮಾಲೀಕರಿಂದ ಕೊರೋನಾ ಬಂದಿರಬಹುದು ಎಂದು ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದಾರೆ. ಅವರ ವೈದ್ಯಕೀಯ ವರದಿ ಬಂದ ನಂತರ ಎಲ್ಲವೂ ಖಚಿತವಾಗಲಿದೆ.
ಪಾರ್ಟಿ ಆಯೋಜಿಸಿದ್ದ ಮತ್ತು ಪಾರ್ಟಿಯಲ್ಲಿ ಪಾಲ್ಗೊಂಡಿದ್ದ ಜ್ಯುವೆಲರಿ ಶಾಪ್ ಮಾಲೀಕರು ಸಾವನ್ನಪ್ಪಿದ ಸುದ್ದಿ ಹೊಬೀಳುತ್ತಿದ್ದಂತೆ ಪಾರ್ಟಿಯಲ್ಲಿ ಪಾಲ್ಗೊಂಡಿದ್ದವರಿಗೆ ಆತಂಕ ಶುರುವಾಗಿದೆ. ಈ ಪಾರ್ಟಿಯಲ್ಲಿ ಪಾಲ್ಗೊಂಡಿದ್ದವರೆಲ್ಲರೂ ಕೊರೋನಾ ತಪಾಸಣೆ ಮಾಡಿಸಿಕೊಳ್ಳಬೇಕೆಂದು ಸೂಚಿಸಲಾಗಿದೆ. ಅವರೆಲ್ಲರೂ ಖಾಸಗಿ ಲ್ಯಾಬ್ನಲ್ಲಿ ಪರೀಕ್ಷೆ ಮಾಡಿಸಿಕೊಂಡಿದ್ದಾರೆ.
Comments are closed.