ರಾಷ್ಟ್ರೀಯ

ವೈಯಕ್ತಿಕ ಸುರಕ್ಷತೆ ಕಾರಣ ನೀಡಿ ರಾಜೀನಾಮೆ ನೀಡಿದ ಮಹಿಳಾ ಐಎಎಸ್ ಅಧಿಕಾರಿ

Pinterest LinkedIn Tumblr


ಚಂಡೀಗಢ: ಮಾರಣಾಂತಿಕ ಕೊರೊನಾ ವೈರಸ್ ಬಿಕ್ಕಟ್ಟು ಮುಂದುವರಿಯುವ ನಡುವೆ ವೈಯಕ್ತಿಕ ಸುರಕ್ಷತೆಯ ಕಾರಣ ನೀಡಿರುವ ಹರಿಯಾಣ ಮೂಲದ ಮಹಿಳಾ ಐಎಎಸ್ ಅಧಿಕಾರಿ ರಾಣಿ ನಗರ್ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ.

2014ರ ಬ್ಯಾ‌ಚ್‌ನ ಐಎಎಸ್ ಅಧಿಕಾರಿ ರಾಣಿ ನಗರ್, ಹರಿಯಾಣದಲ್ಲಿ ನಿರ್ದೇಶಕಿ, ಹೆಚ್ಚುವರಿ ನಿರ್ದೇಶಕಿ, ಸಾಮಾಜಿಕ ನ್ಯಾಯ ಹಾಗೂ ಸಬಲೀಕರಣ ವಿಭಾಗದಲ್ಲಿ ಹುದ್ದೆಯನ್ನು ನಿರ್ವಹಿಸಿದ್ದಾರೆ.

ವೈಯಕ್ತಿಕ ಸುರಕ್ಷತೆಯ ಆತಂಕದ ಕಾರಣ ನೀಡಿರುವ ರಾಣಿ ನಗರ್, ರಾಜೀನಾಮೆ ಪತ್ರವನ್ನು ರಾಷ್ಟ್ರಪತಿ, ಪ್ರಧಾನ ಮಂತ್ರಿ ಕಚೇರಿ, ಹರಿಯಾಣ ರಾಜ್ಯಪಾಲ ಹಾಗೂ ಹರಿಯಾಣ ಮುಖ್ಯಮಂತ್ರಿಗೂ ರವಾನಿಸಿದ್ದಾರೆ.

‘ತತ್‌ಕ್ಷಣದಿಂದಲೇ ಜಾರಿಗೆ ಬರುವಂತೆಯೇ ಸರ್ಕಾರಿ ಕರ್ತ್ಯವ್ಯದಲ್ಲಿ ವೈಯಕ್ತಿಕ ಸುರಕ್ಷತೆಯ ಆತಂಕದ ವಿಚಾರವಾಗಿ ನಾನು ನನ್ನ ಹುದ್ದೆಗೆ ರಾಜೀನಾಮೆ ಸಲ್ಲಿಸುತ್ತಿದ್ದೇನೆ’ ಎಂದು ರಾಣಿ ನಗರ್ ಹೇಳಿಕೊಂಡಿದ್ದಾರೆ.

ನಿಮಯಗಳ ಪ್ರಕಾರ, ಐಎಎಸ್ ಅಧಿಕಾರಿಗಳ ರಾಜೀನಾಮೆಯನ್ನು ಸ್ವೀಕರಿಸುವ ಅಂತಿಮ ಅಧಿಕಾರವನ್ನು ಸಿಬ್ಬಂದಿ ಮತ್ತು ತರಬೇತಿ ಇಲಾಖೆ (ಡಿಒಪಿಟಿ) ಹೊಂದಿರುತ್ತದೆ. ಈ ಪಕ್ರಿಯೆ ಸುಮಾರು ಮೂರು ತಿಂಗಳು ತೆಗೆದುಕೊಳ್ಳಲಿದೆ.

ಫೇಸ್‌ಬುಕ್ ಹಾಗೂ ಟ್ವಿಟರ್‌ನಲ್ಲೂ ರಾಣಿ ನಗರ್ ರಾಜೀನಾಮೆ ಪತ್ರವನ್ನು ಬಹಿರಂಗಪಡಿಸಿದ್ದಾರೆ. ಅಲ್ಲದೆ ರಾಜ್ಯ ಸರಕಾರದ ಅನುಮತಿಯೊಂದಿಗೆ ತಮ್ಮ ಸೋದರಿಯೊಂದಿಗೆ ತವರೂರಾದ ಗಾಜಿಯಾಬಾದ್‌ಗೆ ಹಿಂತಿರುಗಿದ್ದಾರೆ. ಸುರಕ್ಷಿತವಾಗಿ ತೆರಳಲು ಸರಕಾರವೇ ವಾಹನದ ವ್ಯವಸ್ಥೆ ಮಾಡಿದೆ ಎಂದವರು ಹೇಳಿದರು.

ಈ ಮಧ್ಯೆ ಮಗದೊಂದು ಪೋಸ್ಟ್‌ನಲ್ಲಿ ದಾರಿ ಮಧ್ಯೆ ವಾಹನಕ್ಕೆ ಕೇಡು ಸಂಭವಿಸಿತ್ತು ಎಂಬುದನ್ನು ಅವರು ಪೋಸ್ಟ್ ಮಾಡಿದ್ದರು. ಸಮಸ್ಯೆ ಬಗೆ ಹರಿಸಿದ ಬಳಿಕ ತಮ್ಮ ಪ್ರಯಾಣವನ್ನು ಮುಂದುವರಿಸಿದರು.

ಏಪ್ರಿಲ್ 23ರಂದೇ ಲಾಕ್‌ಡೌನ್ ಬಳಿಕ ತಾವು ರಾಜೀನಾಮೆ ನೀಡುವುದಾಗಿ 38ರ ಹರೆಯದ ರಾಣಿ ನಗರ್ ಘೋಷಣೆ ಮಾಡಿದ್ದರು. 2018ರಲ್ಲಿ ಹರಿಯಾಣದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಅಧಿಕಾರಿಯ ವಿರುದ್ದ ಲೈಂಗಿಕ ಕಿರುಕುಳದ ಆರೋಪವನ್ನು ಹೊರಿಸಿದ್ದರು. ಆಕೆ ದಾಖಲಿಸಿದ ಪ್ರಕರಣದ ವಿಚಾರಣೆ ಚಂಡೀಗಡ ನ್ಯಾಯಾಲಯದಲ್ಲಿದೆ. ಇದಕ್ಕೂ ಮೊದಲು 2017ರಲ್ಲಿ ತಮಗೆ ಜೀವ ಬೆದರಿಕೆ ಇರುವುದಾಗಿ ಹೇಳಿದ್ದರು.

Comments are closed.