ರಾಷ್ಟ್ರೀಯ

“ಮಾ’ ಸಕ್ಸಸ್‌; ಉಗ್ರರಾಗಿದ್ದ 50 ಯುವಕರು ಮನೆಗೆ

Pinterest LinkedIn Tumblr


ಜಮ್ಮು: ಯುವಕರು ಪಾಕಿಸ್ಥಾನ ಪ್ರೇರಿತ ಭಯೋತ್ಪಾದಕ ಸಂಘಟನೆಗಳನ್ನು ಸೇರುವುದನ್ನು ತಡೆಯಲು ಭಾರತೀಯ ಸೇನಾಪಡೆಗಳು ಹಮ್ಮಿಕೊಂಡಿದ್ದ “ಮಾ’ (ತಾಯಿ) ಯೋಜನೆಗೆ ಉತ್ತಮ ಯಶಸ್ಸು ಸಿಕ್ಕಿದೆ.

ಕಾಶ್ಮೀರದ ಎಕ್ಸ್‌ವಿ ಆರ್ಮಿ ಕಾಪ್ಸ್‌ì ಈ ಯೋಜನೆಯನ್ನು ಹೊರತಂದಿದ್ದು ಸುಮಾರು 50 ಮಂದಿ ಯುವಕರು ಉಗ್ರವಾದ ತೊರೆದು ಮನೆಗೆ ವಾಪಸ್ಸಾಗಿದ್ದಾರೆ.

15 ಕಾಪ್ಸ್‌ìನ ಜನರಲ್‌ ಆಫೀಸರ್‌ ಕಮಾಂಡಿಂಗ್‌ (ಜಿಒಸಿ)ಯ ಲೆ| ಜ| ಕನ್ವಲ್‌ ಜೀತ್‌ ಸಿಂಗ್‌ ಧಿಲ್ಲೋನ್‌ ಅವರ ನಿರ್ದೇಶನದಲ್ಲಿ ಯೋಜನೆ ಜಾರಿಗೆ ತರಲಾಗಿತ್ತು. ಅದರಂತೆ ಸೇನಾಪಡೆಯ ತಂಡ ನಾಪತ್ತೆಯಾದ ಯುವಕರ ಕುಟುಂಬವನ್ನು ಸಂಪರ್ಕಿಸಿತ್ತು. ಅದರಂತೆ ಉಗ್ರವಾದವನ್ನು ಹಿಡಿದ ಯುವಕರ ತಾಯಂದಿರು, ವಾಪಸ್‌ ಮನೆಗೆ ಬರುವಂತೆ ಮನವಿ ಮಾಡುತ್ತಿದ್ದು, ಇದನ್ನು ವಿವಿಧ ಸಂದರ್ಭಗಳಲ್ಲಿ ಯುವಕರಿಗೆ ಸೇನೆ ತಲುಪಿಸುತ್ತಿತ್ತು. ಅಲ್ಲದೇ ವಾಪಸ್‌ ಬರಲುದ್ದೇಶಿಸಿದ ಯುವಕರಿಗೆ ಮಾನವೀಯತೆಯ ನೆರವನ್ನು ನೀಡುತ್ತಿತ್ತು. ಇದಕ್ಕೆ ಹಲವು ಯುವಕರು ಸಕಾರಾತ್ಮಕವಾಗಿ ಸ್ಪಂದಿಸಿದ್ದು, ಮತ್ತೆ ಮನೆ ಸೇರಿಸಿದ್ದಾರೆ.

ಉಗ್ರವಾದದ ಭಾಗವಾಗಿ ಬಹುತೇಕ ಯುವಕರು ಕಲ್ಲೆಸತಕ್ಕೆ ತೊಡಗಿಕೊಳ್ಳುತ್ತಿದ್ದರು. ಬಳಿಕ ಅವರಿಗೆ ಶಸ್ತ್ರಾಸ್ತ್ರಗಳನ್ನು ನೀಡಿ ದಾಳಿ ನಡೆಸುವಂತೆ ಪ್ರೇರೇಪಿಸಲಾಗುತ್ತಿತ್ತು.

ಹಲವು ಎನ್‌ಕೌಂಟರ್‌ಗಳು ತಾಯಿ-ಮಗನ ಅಪ್ಪುಗೆಯಲ್ಲಿ ಕೊನೆಗೊಂಡಿವೆ. ಕಾಶ್ಮೀರಿ ಯುವಕರ ಜೀವವನ್ನು ರಕ್ಷಿಸುವ ಉದ್ದೇಶವನ್ನು, ಹೊಸ ಬದುಕನ್ನು ಕಟ್ಟಿಕೊಳ್ಳುವ ಆಶಯವನ್ನು ಇದು ಹೊಂದಿದೆ. ನಾವು ಯುವಕರ ಹೆಣದ ಲೆಕ್ಕ ಹಾಕುತ್ತಿಲ್ಲ. ಆದರ ಬದಲಿಗೆ ಎಷ್ಟು ಯುವಕರು ಮತ್ತೆ ತಮ್ಮ ಕುಟುಂಬವನ್ನು, ತಾಯಿಯನ್ನು ಸೇರಿದ್ದಾರೆ ಎಂಬುದನ್ನು ಲೆಕ್ಕ ಹಾಕುತ್ತಿದ್ದೇವೆ ಎಂದು ಧಿಲ್ಲೋನ್‌ ಹೇಳಿದ್ದಾರೆ.

“ಮಾ’ ಯೋಜನೆ ಶುರು ಮಾಡಿದ ಮೇಲೆ ಶೇ.83ರಷ್ಟು ಮಂದಿ ಯುವಕರು ಮನೆಗೆ ವಾಪಸ್ಸಾಗಿರುವುದನ್ನು ಸೇನೆ ಗುರುತಿಸಿದೆ. ಯುವಕರು ಶಸ್ತ್ರ ಹಿಡಿದರೆ, ಆ ವಿಚಾರವನ್ನು ಕುಟುಂಬಕ್ಕೆ ತಿಳಿಸುವ ಕೆಲಸವನ್ನು ಸೇನೆ ಮಾಡಿದೆ. ಜತೆಗೆ ಯಾವುದೇ ಕುಟುಂಬ ಅಥವಾ ತಂದೆ ತನ್ನ ಮಗನ ಶವಪೆಟ್ಟಿಗೆಗೆ ಹೆಗಲು ಕೊಡುವುದನ್ನು ಬಯಸುವುದಿಲ್ಲ ಎಂಬ ಹಿನ್ನೆಲೆಯಲ್ಲಿ ಯುವಕರನ್ನು ವಾಪಸ್‌ ಕರೆತರುವ ಯೋಜನೆಯನ್ನು ಆರಂಭಿಸಲಾಗಿದೆ ಎಂದು ಅಧಿಕಾರಿ ಹೇಳಿದ್ದಾರೆ. ಹೀಗೆ ವಾಪಸ್ಸಾದ ಯುವಕರು ಏನು ಮಾಡುತ್ತಿದ್ದಾರೆ ಎಂದು ಸೇನೆ ಹೇಳದಿದ್ದರೂ, ಕೆಲವರು ಕಾಲೇಜಿಗೆ ಮರು ಸೇರ್ಪಡೆಯಾಗಿದ್ದಾರೆ. ಇನ್ನು ಕೆಲವರು ಕೃಷಿ ಕೆಲಸದಲ್ಲಿ ತಂದೆಗೆ ಸಹಾಯ ಮಾಡುತ್ತಿದ್ದಾರೆ. ಇನ್ನು ಕೆಲವರು ದುಡಿದು ತಮ್ಮ ಕುಟುಂಬಕ್ಕೆ ನೆರವಾಗುತ್ತಿದ್ದಾರೆ ಎಂದು ಅಧಿಕಾರಿ ಧಿಲ್ಲೋನ್‌ ಹೇಳಿದ್ದಾರೆ.

Comments are closed.