ಲಖನೌ: ಅಯೋಧ್ಯೆ ಭೂ ವಿವಾದ ಕುರಿತು ಸುಪ್ರೀಂ ಕೋರ್ಟ್ ನೀಡಲಿರುವ ತೀರ್ಪು ಯಾರ ಪರವಾಗಿ ಬಂದರೂ ಸಂವಿಧಾನ ಹಾಗೂ ನ್ಯಾಯಾಂಗದಲ್ಲಿ ಗೌರವ ಇರಿಸಿ ಅದನ್ನು ಒಪ್ಪಿಕೊಂಡು ಕೋಮು ಸಾಮರಸ್ಯ ಕಾಪಾಡಿಕೊಳ್ಳಬೇಕು ಎಂದು ಅಖಿಲ ಭಾರತೀಯ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ (ಎಐಎಂಪಿಎಲ್ಬಿ) ಮುಸ್ಲಿಂ ಸಮುದಾಯಕ್ಕೆ ಮನವಿ ಮಾಡಿದೆ.
ಸಿಜೆಐ ರಂಜನ್ ಗೊಗೊಯ್ ನೇತೃತ್ವದ ಪಂಚ ಸದಸ್ಯ ಸಂವಿಧಾನ ಪೀಠ 40 ದಿನಗಳ ಕಾಲ ವಿಚಾರಣೆ ನಡೆಸಿದ್ದು, ನವೆಂಬರ್ 17ರೊಳಗೆ ಯಾವುದೇ ದಿನದಂದು ತೀರ್ಪು ಪ್ರಕಟಗೊಳ್ಳುವ ನಿರೀಕ್ಷೆ ಇದೆ. ಕೆಲವು ದಿನಗಳ ಹಿಂದಷ್ಟೇ ಆರೆಸ್ಸೆಸ್ ಕೂಡ ತೀರ್ಪು ಹೇಗೆಯೇ ಬರಲಿ ಅದನ್ನು ಮುಕ್ತ ಮನಸ್ಸಿನಿಂದ ಸ್ವೀಕರಿಸಿ ಸಾಮಾಜಿಕ ಸಾಮರಸ್ಯ ಕಾಪಾಡಿಕೊಳ್ಳುವುದು ಅಗತ್ಯ ಎಂದು ಹೇಳಿತ್ತು.
ಈಗ ಎಐಎಂಪಿಎಲ್ಬಿ ಹಿರಿಯ ಸದಸ್ಯ ಮೌಲಾನ ಖಲೀದ್ ರಶೀದ್ ಫಿರಾಂಗಿ ಮಹಾಲಿ ಅವರು, ”ಸ್ವತಂತ್ರ ಭಾರತದಲ್ಲಿಯೇ ಅಯೋಧ್ಯೆ ಭೂ ವಿವಾದ ಪ್ರಕರಣ ಅತಿ ಮಹತ್ವದ ಕೇಸ್ ಆಗಿದೆ. ಈ ನಿಟ್ಟಿನಲ್ಲಿ ಮೌಲ್ವಿಗಳು ಮುಸ್ಲಿಮರಲ್ಲಿ ಅರಿವು ಮೂಡಿಸಿ ಸಾಮಾಜಿಕ ಸಾಮರಸ್ಯಕ್ಕೆ ನೆರವಾಗಬೇಕು,” ಎಂದು ಮನವಿ ಮಾಡಿಕೊಂಡಿದ್ದಾರೆ.
Comments are closed.