ರಾಷ್ಟ್ರೀಯ

ಪುತ್ರಿಯಿಂದ ಅಮ್ಮನ ಹತ್ಯೆಗೆ ರೋಚಕ ಟ್ವಿಸ್ಟ್ – ಶವದ ಮುಂದೆಯೇ ಸೆಕ್ಸ್

Pinterest LinkedIn Tumblr


ಹೈದರಾಬಾದ್: ಇಬ್ಬರು ಯುವಕರನ್ನು ಪ್ರೀತಿಸಬೇಡ ಎಂದು ಬುದ್ಧಿಮಾತು ಹೇಳಿದ ತಾಯಿಯನ್ನೇ ಮಗಳು ಕೊಲೆ ಮಾಡಿದ ಪ್ರಕರಣಕ್ಕೆ ಇದೀಗ ಟ್ವಿಸ್ಟ್ ಸಿಕ್ಕಿದೆ. ತಾಯಿಯನ್ನು ಕೊಲೆ ಮಾಡುವಂತೆ ಯುವತಿಗೆ ಪ್ರಿಯಕರನೇ ಪ್ರೇರೆಪಿಸಿದ್ದನು ಎಂಬುದು ಬಯಲಾಗಿದೆ.

ಕೀರ್ತಿ ತಾಯಿಯನ್ನೇ ಕೊಲೆ ಮಾಡಿದ ಮಗಳು. ಕೀರ್ತಿ, ಶಶಿಕುಮಾರ್ ಎಂಬವನನ್ನು ಪ್ರೀತಿಸುತ್ತಿದ್ದಳು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಕೀರ್ತಿ ಹಾಗೂ ಶಶಿಕುಮಾರ್‌ನನ್ನು ಬಂಧಿಸಿ ವಿಚಾರಣೆ ನಡೆಸಿದರು. ಬಳಿಕ ಇಬ್ಬರ ಮೊಬೈಲಿನಲ್ಲಿ ಇದ್ದ ವಿಡಿಯೋ ಹಾಗೂ ವಾಟ್ಸಾಪ್ ಚಾಟಿಂಗ್, ಕಾಲ್ ಡೇಟಾ ಪರಿಶೀಲಿಸಿದಾಗ ಸತ್ಯ ಬೆಳಕಿಗೆ ಬಂದಿದೆ. ಇದನ್ನೂ ಓದಿ: ಇಬ್ಬರು ಯುವಕರನ್ನು ಪ್ರೀತಿಸಬೇಡ ಎಂದ ತಾಯಿಯನ್ನೇ ಕೊಂದ್ಳು

ಖಾಸಗಿ ಕ್ಷಣಗಳನ್ನು ವಿಡಿಯೋ ಮಾಡಿದ:
ಲಾರಿ ಚಾಲಕನಾಗಿದ್ದ ಕೀರ್ತಿ ತಂದೆ ಮನೆಯಿಂದ ಹೊರಗಡೆಯೇ ಹೆಚ್ಚು ಸಮಯ ಕಳೆಯುತ್ತಿದ್ದನು. ಮನೆಗೆ ಬಂದರೆ ಮದ್ಯ ಸೇವಿಸಿ ತನ್ನ ಪತ್ನಿ ರಜಿತಾ ಜೊತೆ ಜಗಳವಾಡುತ್ತಿದ್ದನು. ಈ ದಂಪತಿಗೆ ಕೀರ್ತಿ ಒಬ್ಬಳೇ ಮಗಳಾಗಿದ್ದು, ಈಕೆ ಬಿ.ಟೆಕ್ ಮುಗಿಸಿದ್ದಳು. ಈ ವೇಳೆ ಕೆಲಸವಿಲ್ಲದೆ ಅಲೆದಾಡುತ್ತಿದ್ದ ಶಶಿಕುಮಾರ್, ಕೀರ್ತಿಯನ್ನು ತನ್ನ ಪ್ರೀತಿಯ ಬಲೆಗೆ ಬೀಳಿಸಿಕೊಂಡಿದ್ದನು. ಕೀರ್ತಿ, ಶಶಿಕುಮಾರ್‌ನನ್ನು ನಂಬಲು ಶುರು ಮಾಡಿದ್ದಳು. ಇತ್ತ ಶಶಿಕುಮಾರ್ ನನ್ನ ತಂದೆ ಬಳಿ ಕೋಟ್ಯಂತರ ರೂ. ಆಸ್ತಿ ಇದೆ ಎಂದು ಬಿಲ್ಡಪ್ ಕೊಟ್ಟಿದ್ದನು. ಇದನ್ನೆಲ್ಲಾ ಕೇಳಿದ ಕೀರ್ತಿಗೆ ಶಶಿಕುಮಾರ್ ಮೇಲಿದ್ದ ನಂಬಿಕೆ ಹೆಚ್ಚಾಯಿತು. ಬಳಿಕ ಶಶಿಕುಮಾರ್, ಕೀರ್ತಿ ಜೊತೆ ಕಳೆದ ಖಾಸಗಿ ಕ್ಷಣಗಳನ್ನು ಆಕೆಗೆ ತಿಳಿಯದಂತೆ ವಿಡಿಯೋ ಮಾಡುತ್ತಿದ್ದನು.

ಅಬಾರ್ಷನ್ ಮಾಡಿಸ್ದ:
ಕೀರ್ತಿ ಗರ್ಭಿಣಿ ಆದಾಗ ಶಶಿಕುಮಾರ್ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಗರ್ಭಪಾತ ಮಾಡಿಸಿದ್ದನು. ಇದಾದ ಬಳಿಕ ಶಶಿಕುಮಾರ್ ತನ್ನ ತಂದೆ-ತಾಯಿ ಬಳಿ ಹೋಗಿ ಕೀರ್ತಿಯನ್ನು ಪ್ರೀತಿಸುವುದಾಗಿ ಹೇಳಿದ್ದಾನೆ. ಅಲ್ಲದೆ ಆಕೆಯನ್ನೇ ಮದುವೆಯಾಗುವುದಾಗಿ ಹೇಳಿದ್ದಾನೆ. ಆದರೆ ಆತನ ಪೋಷಕರು ಇದಕ್ಕೆ ಒಪ್ಪಲಿಲ್ಲ. ಬಳಿಕ ಆತ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಕೆ ಹಾಕಿದ್ದನು. ಮಗನ ಹಠದಿಂದ ಬೇಸತ್ತ ಪೋಷಕರು ‘ನಿನಗೆ ಏನು ಬೇಕು ಅದನ್ನು ಮಾಡಿಕೋ’ ಎಂದಿದ್ದಾರೆ. ಹೀಗಾಗಿ ಶಶಿಕುಮಾರ್, ಕೀರ್ತಿ ತಾಯಿಯ ಬಳಿ ಹೋಗಿ ನಾನು ನಿಮ್ಮ ಮಗಳನ್ನು ಪ್ರೀತಿಸುತ್ತಿದ್ದೇನೆ ಹಾಗೂ ಆಕೆಯನ್ನೇ ಮದುವೆಯಾಗುತ್ತೇನೆ ಎಂದು ಹೇಳಿದ್ದಾನೆ.

ಮತ್ತೊಬ್ಬನ ಜೊತೆ ಕೀರ್ತಿ ಮದುವೆ:
ಶಶಿಕುಮಾರ್ ಮಾತು ಕೇಳಿದ ಕೀರ್ತಿ ತಾಯಿ ರಜಿತಾ, ನನ್ನ ಮಗಳು ಮುಂದೆ ಇನ್ನೂ ಓದುವುದು ಇದೆ ಎಂದು ಹೇಳಿ ಮದುವೆ ಪ್ರಸ್ತಾಪವನ್ನು ತಿರಸ್ಕರಿಸಿದ್ದರು. ರಜಿತಾ ಮಾತಿನಿಂದ ಶಶಿಕುಮಾರ್ ಕೋಪಗೊಂಡಿದ್ದನು. ಈ ನಡುವೆ ಕೀರ್ತಿ ಮನೆಯ ಹಿಂಬದಿ ರಸ್ತೆಯಲ್ಲಿ ವಾಸಿಸುವ ಬಾಲರೆಡ್ಡಿಯನ್ನು ಪ್ರೀತಿಸುತ್ತಿರುವ ವಿಷಯ ಆಕೆಯ ಪೋಷಕರಿಗೆ ತಿಳಿಯಿತು. ಬಾಲರೆಡ್ಡಿ ಹಾಗೂ ಕೀರ್ತಿ ಪೋಷಕರು ಪರಸ್ಪರ ಮಾತನಾಡಿ ಇಬ್ಬರಿಗೂ ಮದುವೆ ಮಾಡಿಸಲು ನಿರ್ಧರಿಸಿದ್ದರು. ಈ ವಿಷಯ ಶಶಿಕುಮಾರ್ ಗೆ ತಿಳಿಯುತ್ತಿದ್ದಂತೆ ಆತ ಕೀರ್ತಿಗೆ ಕಿರುಕುಳ ನೀಡಲು ಶುರು ಮಾಡಿದ್ದಾನೆ. ಕೊಲೆ ಮಾಡುವ ಬೆದರಿಕೆ ನೀಡಿದಲ್ಲದೆ ಸೆಕ್ಸ್ ವಿಡಿಯೋವನ್ನು ವೈರಲ್ ಮಾಡುವುದಾಗಿ ಬ್ಲ್ಯಾಕ್‍ಮೇಲ್ ಮಾಡಿದ್ದಾನೆ.

ಬ್ಯ್ಲಾಕ್‍ಮೇಲ್:
ಕೀರ್ತಿ ಮೊದಲಿನಿಂದಲೂ ಶಶಿಕುಮಾರ್‌ನನ್ನು ಮದುವೆಯಾಗಲು ನಿರಾಕರಿಸುತ್ತಿದ್ದಳು. ಇದರಿಂದ ಕೋಪಗೊಂಡ ಶಶಿಕುಮಾರ್, ಆಕೆ ಮದುವೆಯಾಗುವ ಹುಡುಗ ಬಾಲರೆಡ್ಡಿಯನ್ನು ಕೊಲೆ ಮಾಡುವ ಬೆದರಿಕೆ ಹಾಕಿದ್ದಾನೆ. ಈ ವಿಷಯವನ್ನು ತಾಯಿಯ ಬಳಿ ಹೇಳಲಾಗದೆ ಕೀರ್ತಿ, ಶಶಿಕುಮಾರ್ ಹೇಳಿದಂತೆ ಮಾಡಲು ಶುರು ಮಾಡಿದ್ದಳು. ಇದೇ ವೇಳೆ ಅಕ್ಟೋಬರ್ 19ರಂದು ಶಶಿಕುಮಾರ್, ಕೀರ್ತಿಗೆ ಮದ್ಯ ಕುಡಿಸಿ ಆಕೆಯ ತಾಯಿಯನ್ನು ಕೊಲೆ ಮಾಡಲು ಪ್ರೇರೇಪಿಸುತ್ತಾನೆ. ಬಳಿಕ ಕೀರ್ತಿ ಚೂಡಿದಾರದ ಶಾಲಿನಿಂದ ತಾಯಿಯ ಕತ್ತು ಹಿಸುಕಿ ಕೊಲೆ ಮಾಡಿದ್ದಾಳೆ. ಕೊಲೆ ಮಾಡಿ ಮೂರು ದಿನಗಳವರೆಗೂ ಶವವನ್ನು ಮನೆಯಲ್ಲಿಯೇ ಇಟ್ಟುಕೊಂಡು ಇಬ್ಬರು ದೈಹಿಕ ಸಂಪರ್ಕ ಬೆಳೆಸುತ್ತಿದ್ದರು.

ತಂದೆಗೆ ಅನುಮಾನ:
ಮೃತದೇಹದ ವಾಸನೆ ಬರುತ್ತಿದ್ದಂತೆ ಮೃತದೇಹವನ್ನು ರಾಮನ್ನಪೇಟೆ ರೈಲ್ವೆ ಹಳಿ ಮೇಲೆ ಎಸೆದಿದ್ದರು. ಇದಾದ ಬಳಿಕ ಶಶಿಕುಮಾರ್ ಹೇಳಿದಂತೆ ಕೀರ್ತಿ ತನ್ನ ತಂದೆ ಬಳಿ ಸುಳ್ಳು ಹೇಳಿ ಪೊಲೀಸ್ ಠಾಣೆಗೆ ಹೋಗಿ ತನ್ನ ತಾಯಿ ಕಾಣೆಯಾಗಿರುವುದಾಗಿ ದೂರು ನೀಡಿದ್ದಾಳೆ. ಪೊಲೀಸರ ವಿಚಾರಣೆ ವೇಳೆ ಕೀರ್ತಿ ತಂದೆ ಶ್ರೀನಿವಾಸ್ ರೆಡ್ಡಿ ತಮ್ಮ ಮಗಳ ಮೇಲೆ ಅನುಮಾನ ವ್ಯಕ್ತಪಡಿಸಿದ್ದಾರೆ. ಆಗ ಪ್ರಕರಣ ಬೆಳಕಿಗೆ ಬಂದಿದೆ. ಈ ಬಗ್ಗೆ ಪ್ರತಿಕ್ರಿಯಿಸಿದ ಸ್ಥಳೀಯರು ಶಶಿಕುಮಾರ್ ನೀಡಿದ ಬೆದರಿಕೆ ಬಗ್ಗೆ ಕೀರ್ತಿ ತನ್ನ ತಂದೆ, ತಾಯಿ ಅಥವಾ ಬೇರೆ ಯಾರ ಬಳಿಯಾದರೂ ಹೇಳಿಕೊಂಡಿದ್ದರೆ ಈ ಕೊಲೆ ನಡೆಯುತ್ತಿರಲಿಲ್ಲ ಎಂದು ಹೇಳಿದ್ದಾರೆ.

Comments are closed.