ರಾಷ್ಟ್ರೀಯ

ಹೆಂಡತಿ, ಮಕ್ಕಳನ್ನು ಬಿಟ್ಟು ಪ್ರಿಯತಮೆ ಜೊತೆ ಆತ್ಮಹತ್ಯೆ

Pinterest LinkedIn Tumblr


ಹೈದರಾಬಾದ್: ಪತ್ನಿ ಇಬ್ಬರು ಮಕ್ಕಳನ್ನು ಬಿಟ್ಟು ಪ್ರೀತಿ ಹಿಂದೆಬಿದ್ದ ವ್ಯಕ್ತಿಯೊಬ್ಬ ತನ್ನ ಲವರ್ ಜೊತೆಗೂಡಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ತೆಲಂಗಾಣದಲ್ಲಿ ಇಂದು ನಡೆದಿದೆ.

ಪೆದ್ದಪಲ್ಲಿ ಜಿಲ್ಲೆಯ ಗೋದಾವರಿಖನಿ ಪಟ್ಟಣದ ತಿಲಕ್‍ನಗರದ ನಿವಾಸಿ ವೆಂಕಟೇಶ್ (30), ಜೈಪೂರ್ ತಾಲೂಕಿನ ಮಂದಮರ್ರಿ ನಿವಾಸಿ ಶ್ರೀವಿದ್ಯಾ (18) ಆತ್ಮಹತ್ಯೆ ಮಾಡಿಕೊಂಡ ಪ್ರೇಮಿಗಳು. ಮಂಚಿರ್ಯಾಲ ಜಿಲ್ಲೆಯ ರಸೂಲ್‍ಪಲ್ಲಿ ಗ್ರಾಮದ ಬಳಿಯ ರಾಷ್ಟ್ರೀಯ ಹೆದ್ದಾರಿಯ ಪಕ್ಕದಲ್ಲಿ ಘಟನೆ ನಡೆದಿದೆ.

ಮೃತ ಶ್ರೀವಿದ್ಯಾ ದ್ವಿತೀಯ ಪಿಯುಸಿ ವ್ಯಾಸಂಗ ಮಾಡುತ್ತಿದ್ದಳು. ವೆಂಕಟೇಶ್‍ಗೆ ಮದುವೆಯಾಗಿದ್ದು ಇಬ್ಬರು ಮಕ್ಕಳಿದ್ದಾರೆ. ಶ್ರೀವಿದ್ಯಾ ಇತ್ತೀಚೆಗೆ ಗೋದಾವರಿಖನಿಯ ಸೋದರ ಮಾವನ ಮನೆಗೆ ಹೋಗಿದ್ದಾಗ ವೆಂಕಟೇಶ್‍ನನ್ನು ನೋಡಿದ್ದಳು. ಕೆಲ ದಿನಗಳ ನಂತರ ವೆಂಕಟೇಶ್ ಸಂಬಂಧಿಯೊಬ್ಬರ ಮದುವೆಗಾಗಿ ಮಂದಮರಿಗೆ ಹೋಗಿದ್ದ. ಈ ವೇಳೆ ಶ್ರೀವಿದ್ಯಾ ಮತ್ತೆ ಭೇಟಿಯಾಗಿದ್ದಳು. ಆಗ ಆಕೆಯ ಫೋನ್ ನಂಬರ್ ಪಡೆದಿದ್ದ ವೆಂಕಟೇಶ್ ಆಗಾಗ ಮೆಸೇಜ್ ಹಾಗೂ ಕಾಲ್ ಮಾಡುತ್ತಿದ್ದ.

ವೆಂಕಟೇಶ್ ಹಾಗೂ ಶ್ರೀವಿದ್ಯಾ ಮಧ್ಯದ ಸ್ನೇಹ ಪ್ರೇಮವಾಗಿ ತಿರುಗಿತ್ತು. ಆದರೆ ಇದಕ್ಕೆ ಪೋಷಕರು ವಿರೋಧ ವ್ಯಕ್ತವಾಗಿತ್ತು. ಇದರಿಂದ ಮನನೊಂದ ಪ್ರೇಮಿಗಳು ಮನೆ ಬಿಟ್ಟು ಬಂದಿದ್ದರು. ಮಂಚಿರ್ಯಾಲ ಜಿಲ್ಲೆಯ ರಸೂಲ್‍ಪಲ್ಲಿ ಗ್ರಾಮದ ಬಳಿಯ ರಾಷ್ಟ್ರೀಯ ಹೆದ್ದಾರಿಯ ಪಕ್ಕದಲ್ಲಿ ಬೆಳಗ್ಗೆ 6 ಗಂಟೆಗೆ ವಿಷ ಸೇವಿಸಿದ್ದರು. ಪ್ರೇಮಿಗಳು ಬಿದ್ದು ಒದ್ದಾಡುತ್ತಿರುವುದನ್ನು ಗಮನಿಸಿದ ಸ್ಥಳೀಯರು ಸ್ಥಳಕ್ಕೆ ದೌಡಾಯಿಸಿದ್ದರು.

ವೆಂಕಟೇಶ್ ಸ್ಥಳದಲ್ಲಿಯೇ ಪ್ರಾಣಬಿಟ್ಟಿದ್ದ. ಶ್ರೀವಿದ್ಯಾ ಉಸಿರಾಡುತ್ತಿರುವುದನ್ನು ಗಮನಿಸಿದ ಸ್ಥಳೀಯರು ಆಕೆಯನ್ನು ಸರ್ಕಾರಿ ಆಸ್ಪತ್ರೆಗೆ ಸಾಗಿಸುತ್ತಿದ್ದರು. ಆದರೆ ಮಾರ್ಗ ಮಧ್ಯದಲ್ಲೇ ಶ್ರೀವಿದ್ಯಾ ಸಾವನ್ನಪ್ಪಿದ್ದಾಳೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಆರಂಭಿಸಿದ್ದಾರೆ.

Comments are closed.