ಲಕ್ನೋ (ಉತ್ತರಪ್ರದೇಶ): ಕೇಂದ್ರದ ಮಾಜಿ ಸಚಿವ ಸ್ವಾಮಿ ಚಿನ್ಮಯಾನಂದ ವಿರುದ್ಧ ಕಾನೂನು ವಿದ್ಯಾರ್ಥಿನಿ ಅತ್ಯಾಚಾರ ಆರೋಪ ಮಾಡಿದ್ದರು. ಇದೀಗ ತಮ್ಮ ಮೇಲೆ ಮಾಡಲಾಗಿರುವ ಎಲ್ಲ ರೀತಿಯ ಆರೋಪಗಳನ್ನು ಸ್ವಾಮಿ ಚಿನ್ಮಯಾನಂದ ಒಪ್ಪಿಕೊಂಡಿದ್ದಾರೆ. ಮತ್ತು ತಮ್ಮ ಕೃತ್ಯಗಳ ಬಗ್ಗೆಯೂ ಅವಮಾನ ವ್ಯಕ್ತಪಡಿಸಿದ್ದಾರೆ ಎಂದು ವಿಶೇಷ ತನಿಖಾ ತಂಡದ ಮುಖ್ಯಸ್ಥರು ಶುಕ್ರವಾರ ಹೇಳಿದ್ದಾರೆ.
ಲೈಂಗಿಕ ದೌರ್ಜನ್ಯ ಮತ್ತು ಬಾಡಿ ಮಸಾಜ್ ಸೇರಿದಂತೆ ಸ್ವಾಮಿ ಚಿನ್ಮಯಾನಂದ ಅವರ ವಿರುದ್ಧ ಮಾಡಲಾಗಿರುವ ಎಲ್ಲ ರೀತಿಯ ಆರೋಪಗಳನ್ನು ಅವರು ಒಪ್ಪಿಕೊಂಡಿದ್ದಾರೆ. ಇದೇ ವೇಳೆ ಸಾಕ್ಷ್ಯಗಳನ್ನು ವಿಚಾರಣೆಗೆ ಒಳಪಡಿಸಲಾಗಿದೆ. ಸ್ವಾಮಿ ಚಿನ್ಮಯಾನಂದ ಅವರು ಮಾಡಿರುವ ಕೃತ್ಯದಿಂದ ಅವಮಾನಿತಗೊಂಡಿದ್ದು, ಈ ಬಗ್ಗೆ ಹೆಚ್ಚಾಗಿ ಮತ್ತೆನನ್ನು ಹೇಳಲಿಲ್ಲ ಎಂದು ಎಸ್ಐಟಿ ಮುಖ್ಯಸ್ಥ ನವೀನ್ ಅರೋರಾ ಅವರು ಚಿನ್ಮಯಾನಂದ ಸ್ವಾಮಿ ಬಂಧಿಸಿದ ಬಳಿಕ ಹೇಳಿದರು.
ಸ್ವಾಮಿ ಚಿನ್ಮಯಾನಂದ ಮಾತನಾಡಿರುವ ಫೋನ್ ಸಂಭಾಷಣೆಯನ್ನು ರೆಕಾರ್ಡ್ ಮಾಡಿಕೊಳ್ಳಲಾಗಿದೆ. ಕೆಲವು ವರ್ಷಗಳಲ್ಲಿ ಯುವತಿಯೊಂದಿಗೆ ಸ್ವಾಮಿ ಚಿನ್ಮಯಾನಂದ 200ಕ್ಕೂ ಹೆಚ್ಚು ಬಾರಿ ಫೋನ್ ಸಂಭಾಷಣೆ ನಡೆಸಿರುವುದನ್ನು ಸಂತ್ರಸ್ತ ಯುವತಿ ಹೇಳಿದ್ದಾರೆ ಎಂದು ಅರೋರಾ ತಿಳಿಸಿದರು.
ಉತ್ತರಪ್ರದೇಶದ ಶಹಜಾನ್ಪುರ್ ನ್ಯಾಯಾಲಯ ಬಿಜೆಪಿ ಮುಖಂಡ ಚಿನ್ಮಯಾನಂದ ಸ್ವಾಮಿಯನ್ನು 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ. ಇಂದು ಬೆಳಗ್ಗೆ 8.50ರಂದು ಚಿನ್ಮಯಾನಂದ ಸ್ವಾಮಿಯನ್ನು ಅವರ ನಿವಾಸ ದಿವ್ಯ ಧಾಮದಲ್ಲಿ ಎಸ್ಐಟಿ ಬಂಧಿಸಿದೆ.
ಬುಧವಾರ ರಾತ್ರಿ ಚಿನ್ಮಯಾನಂದ ಸ್ವಾಮಿ ಶಹಜಾನ್ಪುರ್ದ ವೈದ್ಯಕೀಯ ಕಾಲೇಜಿಗೆ ದಾಖಲಾಗಿದ್ದರು. ಬಳಿಕ ಲಕ್ನೋದ ಕಿಂಗ್ ಜಾರ್ಜ್ ಮೆಡಿಕಲ್ ಯೂನಿವರ್ಸಿಟಿಗೆ ದಾಖಲಾಗುವಂತೆ ಸೂಚನೆ ನೀಡಲಾಯಿತು. ಆದರೆ, ಅವರು ಅಲ್ಲಿಗೆ ಹೋಗದೆ ಗುರುವಾರ ತಮ್ಮ ನಿವಾಸಕ್ಕೆ ಹಿಂದಿರುಗಿದ್ದರು. ಮತ್ತು ಮನೆಯಲ್ಲಿಯೇ ಆಯುರ್ವೇದ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದರು ಎಂದು ಮೂಲಗಳು ತಿಳಿಸಿವೆ.
ಚಿನ್ಮಯಾನಂದ ನಡೆಸುತ್ತಿರುವ ಕಾಲೇಜಿನಲ್ಲಿ ಯುವತಿ ಸ್ನಾತಕೋತ್ತರ ಪದವಿ ವ್ಯಾಸಂಗ ಮಾಡುತ್ತಿದ್ದರು. ಒಂದು ವರ್ಷದಿಂದ ಚಿನ್ಮಯಾನಂದ ತನ್ನ ಮೇಲೆ ಅತ್ಯಾಚಾರ ಎಸಗಿ, ದೈಹಿಕ ದೌರ್ಜನ್ಯ ಎಸಗುತ್ತಿದ್ದರು ಎಂದು ಯುವತಿ ಆರೋಪಿಸಿ ಆತನ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. ಬಳಿಕ ಪ್ರಕರಣದ ತನಿಖೆಗೆ ಸುಪ್ರೀಂಕೋರ್ಟ್ ಎಸ್ಐಟಿ ರಚನೆ ಮಾಡುವಂತೆ ಉತ್ತರಪ್ರದೇಶ ಸರ್ಕಾರಕ್ಕೆ ಸೂಚನೆ ನೀಡಿತ್ತು.
Comments are closed.