ಬೆಂಗಳೂರು: ದೇಶಿಯ ನಿರ್ಮಿತ ಎಚ್ಎಎಲ್’ನ ಲಘು ಯುದ್ಧ ವಿಮಾನ ತೇಜಸ್’ನಲ್ಲಿ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಗುರುವಾರ ಹಾರಾಟ ನಡೆಸಿದ್ದಾರೆ. ಸುಮಾರು 30 ನಿಮಿಷಗಳ ಕಾಲ ಹಾರಾಟ ನಡೆಸುವ ಮೂಲಕ ರಾಜನಾಥ್ ಸಿಂಗ್ ತೇಜಸ್ ಯುದ್ಧ ವಿಮಾನದಲ್ಲಿ ಹಾರಾಟ ನಡೆಸಿದ ಮೊದಲ ರಕ್ಷಣಾ ಸಚಿವರು ಎನಿಸಿದ್ದಾರೆ.
ಹಾರಾಟಕ್ಕೂ ಮುನ್ನ ಪೈಲಟ್ ಉಡುಪು ಧರಿಸಿದ ರಕ್ಷಣಾ ಸಚಿವರು ಏರ್ವೈಸ್ ಮಾರ್ಷಲ್ ಎನ್.ತಿವಾರಿ ಜತೆ ಸಹ ಪೈಲಟ್ ಆಗಿ 30 ನಿಮಿಷ ಹಾರಾಟ ನಡೆಸಿದರು. ಇದಕ್ಕೂ ಮುನ್ನ ವಿಜಯದ ಸಂಕೇತವನ್ನು ತೋರಿ ವಿಮಾನವನ್ನು ಏರಿ ಕುಳಿತರು.
ಹಾರಾಟ ನಡೆಸುವ ಮೂಲಕ ವಿಶೇಷತೆ ಒಂದಕ್ಕೆ ರಾಜನಾಥ್ ಸಿಂಗ್ ಸಾಕ್ಷಿಯಾದರು. ಲಘು ಯುದ್ಧ ವಿಮಾನವೇರಿದ ಮೊದಲ ರಕ್ಷಣಾ ಸಚಿವರು ಎಂಬ ಹೆಗ್ಗಳಿಕೆಗೆ ರಾಜನಾಥ್ ಸಿಂಗ್ ಭಾಜನರಾದರು.
ತೇಜಸ್ ಲಘು ಯುದ್ಧ ವಿಮಾನದ ವಿಶೇಷತೆಗಳು
ಒಂದು ತೇಜಸ್ ವಿಮಾನ ನಿರ್ಮಿಸಲು 300 ಕೋಟಿ ರೂ. ವೆಚ್ಚ ತಗಲುತ್ತದೆ. 12 ಟನ್ ತೂಕ, 13.2 ಮೀ. ಉದ್ದ, 4.4 ಮೀ ಎತ್ತರವಿರುತ್ತದೆ. ಇದರ ರೆಕ್ಕೆಗಳು 8.2 ಮೀ. ಉದ್ದವಿರುತ್ತದೆ. ತೇಜಸ್ ಗಂಟೆಗೆ 1,350 ಕಿ.ಮೀ ವೇಗದಲ್ಲಿ ಹಾರಾಟ ನಡೆಸುತ್ತದೆ. ಇಂಜಿನ್ ಸೇರಿ ಕೆಲವು ಬಿಡಿ ಭಾಗಗಳು ವಿದೇಶಿಯದ್ದಾಗಿದೆ. ಗಾಜಿನ ಹೊದಿಕೆಯ ಕಾಕ್ಪಿಟ್ ಹೊಂದಿರುವ ತೇಜಸ್, 3 ಟನ್ ತೂಕದ ಸ್ಫೋಟಕ ಹೊತ್ತೊಯ್ಯಬಲ್ಲ ಸಾಮರ್ಥ್ಯವನ್ನು ಹೊಂದಿದೆ. ತೇಜಸ್ ಯುದ್ಧ ವಿಮಾನವನ್ನು ಎಚ್ಎಎಲ್ ನಿರ್ಮಿಸಿದೆ.
Comments are closed.