ನವದೆಹಲಿ: ಐಎನ್ಎಕ್ಸ್ ಮೀಡಿಯಾ ಬಹುಕೋಟಿ ಹಗರಣದಲ್ಲಿ ಬಂಧನಕ್ಕೆ ಒಳಗಾಗಿರುವ ಮಾಜಿ ಕೇಂದ್ರ ಸಚಿವ ಪಿ ಚಿದಂಬರಂರನ್ನು ಅಧಿಕಾರಿಗಳು ವಿಶೇಷ ಸಿಬಿಐ ಕೋರ್ಟ್ ಮುಂದೆ ಹಾಜರು ಪಡಿಸಿದ್ದಾರೆ.
ಸಿಬಿಐ ಮುಖ್ಯಕಚೇರಿಯಲ್ಲಿ ಮೂರುಗಂಟೆಗಳ ವಿಚಾರಣೆ ಬಳಿಕ ಅಧಿಕಾರಿಗಳು ಚಿದಂಬರಂ ಅವರನ್ನು ಬಿಗಿ ಭದ್ರತೆಯಲ್ಲಿ ರೋಸ್ ಅವೆನ್ಯೂವಿನಲ್ಲಿರುವ ವಿಶೇಷ ಸಿಬಿಐ ನ್ಯಾಯಾಲಯದ ಮುಂದೆ ಹಾಜರು ಪಡಿಸಿದರು.
ಚಿದಂಬರಂ ಜೊತೆಯಲ್ಲಿ ಅವರ ವಕೀಲ ಕಪಿಲ್ ಸಿಬಲ್, ಅಭಿಷೇಕ್ ಮನು ಸಿಂಗ್ವಿ ಮತ್ತು ಅವರ ಪತ್ನಿ ನಳಿನಿ ಮತ್ತು ಸಹ ಆರೋಪಿಯಾಗಿರುವ ಅವರ ಮಗ ಕಾರ್ತಿ ಚಿದಂಬರಂ ಕೂಡ ನ್ಯಾಯಾಲಯದಲ್ಲಿ ಹಾಜರಿದ್ದಾರೆ.
ಸಿಬಿಐ ಪರ ವಾದ ಮಂಡಿಸಿದ ಸಾಲಿಸಿಟರ್ ಜನರಲ್ ತುಶಾರ್ ಮೆಹ್ತಾ, ಮೌನ ಎಂಬುದು ಸಂವಿಧಾನಿಕ ಹಕ್ಕು. ಇದರ ಬಗ್ಗೆ ನನಗೆ ಯಾವುದೇ ತಕರಾರಿಲ್ಲ. ಆದರೆ ಪ್ರಕರಣ ಕುರಿತು ಮಾಜಿ ಸಚಿವರು ತನಿಖೆಗೆ ಸಹಕರಿಸುತ್ತಿಲ್ಲ. ಮಾಜಿ ಸಚಿವರು ಪ್ರಶ್ನೆಗಳಿಂದ ಪಲಾಯನ ಮಾಡುತ್ತಿದ್ದಾರೆ ಎಂದರು.
ಚಿದಂಬರಂ ಅವರು ತಪ್ಪು ಎಸಗಿದ್ದು, ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸುವುದು ಅವಶ್ಯಕವಾಗಿದೆ. ಈ ಹಿನ್ನೆಲೆ ಅವರನ್ನು ಐದು ದಿನಗಳ ಕಾಲ ವಶಕ್ಕೆ ನೀಡಬೇಕು. ಇದರಿಂದ ಪರಿಣಾಮಕಾರಿ ತನಿಖೆ ನಡೆಸಬಹುದು ಎಂದು ಮನವಿ ಮಾಡಿದರು.
ಚಿದಂಬರಂ ಪರ ವಾದ ಮಂಡಿಸಿದ ಕಪಿಲ್ ಸಿಬಲ್, ಐದು ದಿನ ವಶಕ್ಕೆ ವಿರೋಧ ವ್ಯಕ್ತಪಡಿಸಿದರು.
Comments are closed.