ನವದೆಹಲಿ: “ಜಮ್ಮು-ಕಾಶ್ಮೀರದ ಪುಲ್ವಾಮ ಬಾಂಬ್ ದಾಳಿ ಕೃತ್ಯ ನಾನೇ ಮಾಡಿಸಿದ್ದು ಎಂದು ಹೇಳಿಕೊಂಡಿರುವ ಜೈಶ್-ಎ-ಮೊಹಮ್ಮದ್ ಸಂಘಟನೆಯ ಉಗ್ರ ಮಸೂದ್ ಅಜರ್ನನ್ನು ನೀವೇ ಬಂಧಿಸಿ; ಇಲ್ಲದೇ ಹೋದರೆ ನಾವೇ ಅರೆಸ್ಟ್ ಮಾಡುತ್ತೇವೆ,” ಎಂದು ಪಂಜಾಬ್ ಸಿಎಂ ಕ್ಯಾಪ್ಟನ್ ಅಮರೀಂದರ್ ಸಿಂಗ್ ಪಾಕ್ಗೆ ಎಚ್ಚರಿಕೆ ನೀಡಿದ್ದಾರೆ. “ನಿಮ್ಮದೇ ದೇಶದ ಜೈಶ್ ಎ ಮೊಹಮ್ಮದ್ ಉಗ್ರ ಸಂಘಟನೆಯ ಮುಖ್ಯಸ್ಥ ಮಸೂದ್ ಅಜರ್ ಪಾಕಿಸ್ತಾನದ ಬಹಾವಲಪುರದಲ್ಲಿಯೇ ಇದ್ದಾನೆ. ಮೊದಲು ಆತನನ್ನು ಬಂಧಿಸಿ, ಕಠಿಣ ಕ್ರಮ ಕೈಗೊಳ್ಳಿ,” ಎಂದು ಪಾಕ್ ಪ್ರಧಾನಿ ಇಮ್ರಾನ್ ಖಾನ್ಗೆ ಅಮರೀಂದರ್ ಸಿಂಗ್ ಆಗ್ರಹಿಸಿ, ಟ್ವೀಟ್ ಮಾಡಿದ್ದಾರೆ.
ಭಾರತ ಮೂಲದ 40ಕ್ಕೂ ಹೆಚ್ಚು ಯೋಧರು ಪುಲ್ವಾಮ ಬಾಂಬ್ ದಾಳಿಯಲ್ಲಿ ಉಗ್ರರ ಅಟ್ಟಹಾಸಕ್ಕೆ ಬಲಿಯಾಗಿದ್ದರು. ಬಳಿಕ ಈ ದಾಳಿಯ ಹಿಂದೆ ಪಾಕಿಸ್ತಾನದ ಕೈವಾಡ ಇಲ್ಲ ಎಂದು ಅಲ್ಲಿನ ಪ್ರಧಾನಿ ಇಮ್ರಾನ್ ಹೇಳಿದ್ದರು. ಈ ಬೆನ್ನಲ್ಲೇ ಪ್ರತಿಕ್ರಿಯಿಸಿರುವ ಅಮರೀಂದರ್ ಸಿಂಗ್, ಯೋಧರ ಸಾವಿಗೆ ಪಶ್ಚಾತ್ತಾಪ ಪಡದೇ ಇಮ್ರಾನ್ ಖಾನ್ ಸುಖಾಸುಮ್ಮನೇ ಹೇಳಿಕೆ ನೀಡುತ್ತಿದ್ದಾರೆ. ಹೀಗಾಗಿ ನಾವು ಪಾಕ್ ಜತೆಗೆ ಬೇರೆಯದೇ ರೀತಿಯಲ್ಲಿ ನಿಷ್ಠುರವಾಗಿ ವ್ಯವಹರಿಸಬೇಕಿದೆ ಎಂದಿದ್ದಾರೆ.
ಇನ್ನು 26/11ರ ಮುಂಬೈ ಉಗ್ರರ ದಾಳಿ ನಡೆದು 10 ವರ್ಷಗಳಾಗುತ್ತ ಬಂದಿದೆ. ಈ ವಿಚಾರದಲ್ಲಿ ನೀವು ಏನು ಮಾಡಿದ್ದೀರಿ ಎಂದು ಕಂಡಿದ್ದೇವೆ. ನಿಮಗೆ ನಿಮ್ಮದೇ ರೀತಿಯಲ್ಲಿ ಉತ್ತರಿಸಬೇಕಿದೆ. ಯಾವುದೇ ಪರಿಸ್ಥಿತಿ ಎದುರಿಸಲು ಭಾರತ ಸರ್ವಸನ್ನದ್ಧವಾಗಿದೆ. ಪುಲ್ವಾಮ ಉಗ್ರ ದಾಳಿಯ ಹೊಣೆಯನ್ನು ಜೈಶ್ ಎ ಮೊಹಮ್ಮದ್ ಸಂಘಟನೆ ಹೊತ್ತಿದೆ. ಈ ಕೃತ್ಯವನ್ನು ಐಎಸ್ಐ ಸಹಾಯದ ಜತೆಗೆ ಎಸಗಿದೆ. ಪಾಕಿಸ್ತಾನದ ಬಹಾವಲಪುರದಲ್ಲೇ ಇರುವ ಆತನನ್ನು ನೀವು ಬಂಧಿಸಿ, ಇಲ್ಲದಿದ್ದರೇ ನಾವೇ ಬಂಧಿಸುತ್ತೇವೆ ಎಂದು ಅಮರೀಂದರ್ ಟ್ವೀಟ್ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇನ್ನೊಂದೆಡೆ ಪುಲ್ವಾಮಾ ಉಗ್ರ ದಾಳಿಯಲ್ಲಿ ಪಾಕ್ ಶಾಮೀಲಾಗಿಲ್ಲ ಎಂದ ಇಮ್ರಾನ್ ಖಾನ್ಗೆ ಪಿಡಿಪಿ ಅಧ್ಯಕ್ಷೆ ಮೆಹಬೂಬ ಮುಫ್ತಿ ಕೂಡ ಚಾಟಿ ಬೀಸಿದ್ದಾರೆ. ಯೋಧರ ಮೇಲೆ ದಾಳಿ ಮಾಡಿದ್ದ ಜೈಶ್ಗೆ ನೀವು ಬೆಂಬಲಿಸಿದರ ಬಗ್ಗೆ ಭಾರತದ ಬಳಿ ಪುರಾವೆ ಇದೆ. ಹೀಗಾಗಿಯೇ ನಿಮ್ಮ ಮೇಲೆ ಭಾರತ ಆರೋಪ ಮಾಡುತ್ತಿದೆ. ನಿಮ್ಮ ದೇಶ ಮೊದಲು ನುಡಿದಂತೆ ನಡೆಯುವುದನ್ನು ಕಲಿಯಬೇಕಿದೆ. ಪಠಾಣ್ಕೋಟ್ ಉಗ್ರ ದಾಳಿಯ ಬಗ್ಗೆಯೂ ನಿಮಗೆ ಪುರಾವೆ ನೀಡಲಾಗಿತ್ತು. ಆದರೂ ನೀವು ಈ ಬಗ್ಗೆ ಕ್ರಮತೆಗೆದುಕೊಳ್ಳಲಿಲ್ಲ” ಎಂದು ತಿರುಗೇಟು ನೀಡಿದ್ದಾರೆ.
ಇದರ ಜತೆಗೆ ಇಮ್ರಾನ್ ಖಾನ್ ಇತ್ತೇಚೆಗಷ್ಟೇ ಪಾಕ್ ಪ್ರಧಾನಿಯಾಗಿದ್ದಾರೆ. ಅವರೇ ಉಗ್ರರ ವಿರುದ್ಧ ಕ್ರಮ ತೆಗೆದುಕೊಳ್ಳಲು ಒಂದು ಅವಕಾಶ ನೀಡೋಣ. ಚುನಾವಣೆ ಹೊತ್ತಲ್ಲಿಯೇ ಪಾಕ್ ವಿರುದ್ಧ ಹೋರಾಟ ಮಾಡುತ್ತೇವೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಇಲ್ಲದೇ ಹೋಗಿದ್ದರೇ ಯಾವುದೇ ಕಾರಣಕ್ಕೂ ಪಾಕ್ ವಿರುದ್ಧ ಹೋರಾಟದ ಮಾತುಗಳನ್ನು ಆಡುತ್ತಿರಲಿಲ್ಲ ಎಂದು ಕಿಡಿಕಾರಿದ್ದಾರೆ.
ಇತ್ತೇಚೆಗೆ ಪಾಕ್ ಪ್ರಧಾನಿ ಇಮ್ರಾನ್ ಖಾನ್ ವಿಡಿಯೋ ತುಣುಕೊಂದನ್ನು ಬಿಡುಗಡೆ ಮಾಡಿದ್ದರು. ಈ ವಿಡಿಯೋದಲ್ಲಿ ಪಾಕ್ ಶಾಂತಿ ಮತ್ತ ಸ್ಥಿರತೆಯನ್ನು ಬಯಸುತ್ತದೆ. ಪುಲ್ವಾಮಾ ಉಗ್ರ ದಾಳಿ ನಡೆಸಿದವರ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಲು ಪೂರಕ ದಾಖಲೆಗಳನ್ನು ನೀಡಿ. ಬಳಿಕ ಜೈಶ್ ಸಂಘಟನೆ ವಿರುದ್ಧ ನಾವು ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಹೇಳಿದ್ದರು. ಇದಕ್ಕೆ ಇಡೀ ಪ್ರಪಂಚವೇ ವ್ಯಾಪಕ ವಿರೋಧ ವ್ಯಕ್ತಪಡಿಸಿತ್ತು.
Comments are closed.