ರಾಷ್ಟ್ರೀಯ

ಗಂಡನನ್ನು ಕಳೆದುಕೊಳ್ಳುವ ಭೀತಿಯಲ್ಲಿ ಆತ್ಮಹತ್ಯೆಗೆ ಶರಣಾದ ಯೋಧನ ಪತ್ನಿ

Pinterest LinkedIn Tumblr


ರಾಜ್ಕೋಟ್: ಪುಲ್ವಾಮಾ ದಾಳಿ ಹಿನ್ನೆಲೆಯಲ್ಲಿ ಆಘಾತಗೊಂಡಿದ್ದ ಯೋಧನ ಪತ್ನಿ , ತನ್ನ ಪತಿಗೂ ಹೀಗಾಗಬಹುದು ಎಂಬ ಭೀತಿಯಿಂದ ಆತ್ಮಹತ್ಯೆಗೆ ಶರಣಾದ ಹೃದಯವಿದ್ರಾವಕ ಘಟನೆ ಗುಜರಾತಿನಲ್ಲಿ ಶನಿವಾರ ರಾತ್ರಿ ನಡೆದಿದೆ.

ದೇವಭೂಮಿ ದ್ವಾರಕಾದ ಖಂಭಾಲಿಯಾ ನಗರದ ನಿವಾಸಿಯಾಗಿದ್ದ ಮೀನಾಕ್ಷಿ ಜೆಟ್ವಾ ( 22) ಮೃತ ಮಹಿಳೆಯಾಗಿದ್ದಾಳೆ.

ಮೀನಾಕ್ಷಿ ಪತಿ ಭೂಪೇಂದ್ರ ಸಿಂಗ್ ಜಮ್ಮು ಮತ್ತು ಕಾಶ್ಮೀರದ ಗುಲ್‌ಮಾರ್ಗ್‌ನಲ್ಲಿ ನಿಯೋಜನೆಯಾಗಿದ್ದ. ಕೆಲ ದಿನಗಳ ಹಿಂದೆ ಆತ ರಜೆಗೆಂದು ಮನೆಗೆ ಬಂದಿದ್ದ.

ಇತ್ತೀಚಿಗೆ ನಡೆದ ಹಿಮಪಾತದಲ್ಲಿ ತಾನು ಕೂದಲೆಳೆ ಅಂತರದಲ್ಲಿ ಸಾವಿಂದ ಬಚಾವಾದೆ ಎಂದಾತ ಪರಿವಾರದವರ ಬಳಿ ಹೇಳಿಕೊಂಡಿದ್ದು, ಈ ಸಂಗತಿ ಪತ್ನಿಯನ್ನು ಆಘಾತಕ್ಕೆ ದೂಡಿತ್ತು.

ಏತನ್ಮಧ್ಯೆ ಉಗ್ರರ ದಾಳಿಯಲ್ಲಿ ಪುಲ್ವಾಮಾದಲ್ಲಿ 44 ಯೋಧರು ಹುತಾತ್ಮರಾದರು. ಈ ದುರ್ಘಟನೆಯ ಬಳಿಕ ಮೀನಾಕ್ಷಿ ಮತ್ತಷ್ಟು ಆತಂಕಗೊಂಡಿದ್ದಳು. ಹೀಗಾಗಿ ಪತಿ ಬಳಿ ಮತ್ತೆ ಕೆಲಸಕ್ಕೆ ಹಿಂತಿರುಗಬೇಡಿ ಎಂದು ಕೇಳಿಕೊಂಡಿದ್ದಾಳೆ. ಆದರೆ ರಜೆ ಮುಗಿದ ಬಳಿಕ ಆತ ಮರಳಲು ಸಿದ್ಧನಾಗಿದ್ದ.

ಶನಿವಾರ ರಾತ್ರಿ ಭೂಪೇಂದ್ರ ಮತ್ತವರ ಕುಟುಂಬ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲು ತೆರಳಿತ್ತು. ಆಗ ಮೀನಾಕ್ಷಿ ಒಬ್ಬಳೇ ಮನೆಯಲ್ಲಿದ್ದಳು. ರಾತ್ರಿ ಮನೆಗೆ ಮರಳಿದ ಆತ ತನ್ನ ಕೋಣೆ ಒಳಗಿಂದ ಲಾಕ್ ಆಗಿರುವುದನ್ನು ಗಮನಿಸಿ ಪತ್ನಿ ಮಲಗಿದ್ದಾಳೆ, ಆಕೆಗೆ ತೊಂದರೆ ಕೊಡುವುದು ಬೇಡ ಎಂದುಕೊಂಡು ಇನ್ನೊಂದು ಕೋಣೆಗೆ ಹೋಗಿ ಮಲಗಿದ.

ಭಾನುವಾರ ಬೆಳಕು ಹರಿದರೂ ಆಕೆ ಹೊರಗೆ ಬಾರದ್ದರಿಂದ ಆತಂಕಗೊಂಡು ಬಾಗಿಲು ಮುರಿದಿದ್ದಾನೆ. ಆಗ ಆಕೆಯ ಮೃತದೇಹ ಫ್ಯಾನ್‌ನಲ್ಲಿ ನೇತಾಡುತ್ತಿತ್ತು ಎಂದು ತಿಳಿದುಬಂದಿದೆ.

ಕುಟುಂಬದ ಸದಸ್ಯರೆಲ್ಲ ಆಘಾತದಲ್ಲಿರುವುದರಿಂದ ವಿಚಾರಣೆ ನಡೆಸಲು ಸಾಧ್ಯವಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

ಕಳೆದ 2 ವರ್ಷಗಳ ಹಿಂದೆ ಇವರಿಬ್ಬರ ಮದುವೆಯಾಗಿತ್ತು ಎಂದು ತಿಳಿದುಬಂದಿದೆ.

Comments are closed.