ನವದೆಹಲಿ: ಲೋಕಸಭೆ ಚುನಾವಣೆಗೆ ಕೆಲವೇ ತಿಂಗಳು ಬಾಕಿ ಇರುವ ಈ ಹೊತ್ತಿನಲ್ಲಿ ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಫೆಬ್ರವರಿ 1ರಂದು ಬಜೆಟ್ ಮಂಡನೆ ಮಾಡಲು ಮುಂದಾಗಿದೆ. ಚುನಾವಣಾ ಪೂರ್ವ ಬಜೆಟ್ನಲ್ಲಿ ರೂ. 5 ಲಕ್ಷದೊಳಗಿನ ಆದಾಯ ಹೊಂದಿದವರಿಗೆ ತೆರಿಗೆ ವಿನಾಯಿತಿ ಘೋಷಿಸುವ ಸಾಧ್ಯತೆಯಿದೆ. ಈ ಮೂಲಕ ಮಧ್ಯಮ ಮತ್ತು ಕೆಳ ಮಧ್ಯಮ ವರ್ಗದ ಮತದಾರರನ್ನು ಸೆಳೆಯಲು ಹಣಕಾಸು ಸಚಿವ ಅರುಣ್ ಜೇಟ್ಲಿ ಮುಂದಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಸದ್ಯ ಆದಾಯ ತೆರಿಗೆ ವಿನಾಯಿತಿಯ ಮಿತಿ ರೂ 2.5 ಲಕ್ಷ ವಾರ್ಷಿಕ ವರಮಾನವಾಗಿತ್ತು. ಇದೀಗ ಈ ಮಿತಿಯನ್ನು ಐದು ಲಕ್ಷಕ್ಕೆ ಏರಿಕೆ ಮಾಡಲು ಕೇಂದ್ರ ಮುಂದಾಗಿದೆ ಎಂದು ಮೂಲಗಳು ತಿಳಿಸಿವೆ. ಬಿಜೆಪಿ ನೇತೃತ್ವದ ಎನ್ಡಿಎ ಮೈತ್ರಿಕೂಟ ಅಧಿಕಾರಕ್ಕೆ ಬಂದರೆ ಈ ಮಹತ್ವದ ತೆರಿಗೆ ವಿನಾಯಿತಿ ನಿರ್ಧಾರವನ್ನು ಜಾರಿಗೆ ತರುವ ಅವಕಾಶವಿದೆ. ಒಂದರ್ಥದಲ್ಲಿ ಈ ನಿರ್ಣಯ ಮತದಾರರನ್ನು ಸೆಳೆಯುವಲ್ಲಿ ಸಹಕಾರಿಯಾಗಲಿದೆ.
ಜತೆಗೆ ಪರೋಕ್ಷ ತೆರಿಗೆ ಮತ್ತು ವಾಣಿಜ್ಯ ತೆರಿಗೆಯಲ್ಲಿ ಯಾವುದೇ ಬದಲಾವಣೆ ಅಥವಾ ವಿನಾಯಿತಿ ನೀಡದಿರಲು ಕೇಂದ್ರ ನಿರ್ಧರಿಸಿದೆ ಎನ್ನಲಾಗಿದೆ. ಇದೇ ಫೆಬ್ರವರಿ 1ರಂದು ಅರುಣ್ ಜೇಟ್ಲಿ ತಮ್ಮ ಐದನೇ ಮತ್ತು ಅಧಿಕಾರಾವಧಿಯ ಕಡೆಯ ಬಜೆಟ್ ಮಂಡನೆ ಮಾಡುತ್ತಿದ್ದು, ತೆರಿಗೆ ಪದ್ಧತಿಯನ್ನು ಬಲಾಯಿಸಿರಲಿಲ್ಲ.
“ನೌಕರರ ವರ್ಗಕ್ಕೆ ಕಳೆದ ಮೂರು ವರ್ಷಗಳಿಂದ ಎಲ್ಲ ರೀತಿಯ ತೆರಿಗೆ ವಿನಾಯಿತಿ ನೀಡಲಾಗಿದೆ. ಇದಕ್ಕಿಂತ ಹೆಚ್ಚು ವಿನಾಯಿತಿಯಾಗಲೀ ಬದಲವಾಣೆಯನ್ನಾಗಲೀ ಮಾಡಲು ಸಾಧ್ಯವಿಲ್ಲ,” ಎಂದು ಕಳೆದ ಬಜೆಟ್ ಮಂಡನೆಯ ವೇಳೆ ಜೇಟ್ಲಿ ತಿಳಿಸಿದ್ದರು.
ಈ ಹಿಂದೆ ರೂ. 2.5 ಲಕ್ಷ ಮತ್ತು ರೂ. 5 ಲಕ್ಷ ನಡುವಿನ ಆದಾಯ ಹೊಂದಿರುವವರಿಗೆ 10% ತೆರಿಗೆ ವಿಧಿಸಲಾಗಿತ್ತು. ಈ ಮಿತಿಯನ್ನು 5%ಗೆ 2017ರ ಬಜೆಟ್ನಲ್ಲಿ ಅರುಣ್ ಜೇಟ್ಲಿ ಇಳಿಸಿದ್ದರು. ಈಗ 5% ಇದ್ದ ತೆರಿಗೆಯನ್ನು ಸಂಪೂರ್ಣವಾಗಿ ಕಡಿತಗೊಳಿಸಿ, ರೂ. 5 ಲಕ್ಷದವರೆಗೆ ತೆರಿಗೆ ವಿನಾಯಿತಿ ನೀಡಲು ಹೊರಟಿದ್ದಾರೆ. ಇದರಿಂದ ಸಹಜವಾಗಿ ಈ ಮೊತ್ತವನ್ನು ಗಳಿಸುತ್ತಿರುವ ನೌಕರರಿಗೆ ಸಹಾಯವಾಗಲಿದೆ. ಈ ಹಿನ್ನಲೆಯಲ್ಲಿ ಜೇಟ್ಲಿ ಮತ ಕ್ರೋಢೀಕರಣಕ್ಕೆ ಮುಂದಾಗಿದ್ದಾರ ಎಂಬ ಪ್ರಶ್ನೆಯೂ ಕೇಳಿ ಬರುತ್ತಿದೆ. ಒಟ್ಟಿನಲ್ಲಿ ಲೋಕಸಭೆ ಚುನಾವಣೆಯ ಹೊಸ್ತಿಲಲ್ಲಿ ಮತದಾರನ ಮನವೊಲಿಸಲು ಕೇಂದ್ರ ಸರ್ಕಾರ ಅಂತಿಮ ಪ್ರಯತ್ನಕ್ಕೆ ಕೈ ಹಾಕಿದೆ.
Comments are closed.