ರಾಷ್ಟ್ರೀಯ

ಮುಷ್ಕರ: 75ಕ್ಕೂ ಅಧಿಕ ಬಸ್‌ಗಳಿಗೆ ಕಲ್ಲೇಟು, 7.5 ಕೋಟಿ ರೂ. ನಷ್ಟ

Pinterest LinkedIn Tumblr


ಬೆಂಗಳೂರು: ಕಾರ್ಮಿಕ ಸಂಘಟನೆಗಳು ನೀಡಿದ ಅಖಿಲ ಭಾರತ ಮುಷ್ಕರ ಎರಡನೇ ದಿನ ರಾಜ್ಯದಲ್ಲಿ ತನ್ನ ಕಸುವನ್ನು ಕಳೆದುಕೊಂಡಿತ್ತಾದರೂ ಬೆಂಗಳೂರು ಮತ್ತು ಕೆಲವು ಜಿಲ್ಲೆಗಳಲ್ಲಿ ಜನಜೀವನಕ್ಕೆ ತೊಂದರೆ ಉಂಟು ಮಾಡಿತು.

ಬೆಂಗಳೂರಿನಲ್ಲಿ ಕೆಎಸ್‌ಆರ್‌ಟಿಸಿ ಮತ್ತು ಬಿಎಂಟಿಸಿ ಬಸ್‌ ಸಂಚಾರ ಭಾಗಶಃ ಸ್ಥಗಿತಗೊಂಡಿದ್ದರಿಂದ ವಿದ್ಯಾರ್ಥಿಗಳು ಮತ್ತು ಜನಸಾಮಾನ್ಯರು ಪರದಾಡಿದರು. ಈ ನಡುವೆ, ಎರಡು ದಿನದಲ್ಲಿ ಬೆಂಗಳೂರಿನಲ್ಲಿ 75 ಬಸ್‌ಗಳಿಗೆ ಕಲ್ಲು ತೂರಾಟ ನಡೆಸಲಾಗಿದೆ. ಬಾಗಲಕೋಟ, ಕಲಬುರಗಿ ಹಾಗೂ ಬಳ್ಳಾರಿಯಲ್ಲೂ ಬಸ್‌ಗಳಿಗೆ ಕಲ್ಲು ತೂರಾಟ ನಡೆದಿದೆ. ದಾವಣಗೆರೆಯಲ್ಲಿ 2ನೇ ದಿನವೂ ಬಸ್‌ ಸಂಚಾರಕ್ಕೆ ತಡೆ ಒಡ್ಡಲಾಯಿತು.

ಬ್ಯಾಂಕ್‌ ನೌಕರರ ಮುಷ್ಕರದ ಹಿನ್ನೆಲೆಯಲ್ಲಿ ಬುಧವಾರವೂ ಹೆಚ್ಚಿನ ಬ್ಯಾಂಕ್‌ಗಳು ತೆರೆದಿರಲಿಲ್ಲ. ಕೆಲವು ಕಡೆ ಅಂಚೆ ಕಚೇರಿ ಸೇವೆಯೂ ಇರಲಿಲ್ಲ. ಆದರೆ, ಖಾಸಗಿ ವಾಹನ, ಟ್ಯಾಕ್ಸಿ, ಹೋಟೆಲ್‌, ಪೆಟ್ರೋಲ್‌ ಪಂಪ್‌ಗಳ ಕಾರ್ಯಾಚರಣೆಗೆ ಯಾವುದೇ ತೊಂದರೆಯಾಗಲಿಲ್ಲ.

ಕೇಂದ್ರ ಸರಕಾರದ ಕಾರ್ಮಿಕ ನೀತಿಗಳ ವಿರುದ್ಧ 10 ಸಂಘಟನೆಗಳು ಈ ಮುಷ್ಕರಕ್ಕೆ ಕರೆ ನೀಡಿದ್ದವು. ಬಿಜೆಪಿ ಬೆಂಬಲಿತ ಬಿಎಂಎಸ್‌ ಬೆಂಬಲ ನೀಡಿರಲಿಲ್ಲ.

75 ಬಸ್‌ಗಳಿಗೆ ಕಲ್ಲು
ವೋಲ್ವೋ 09
ಕರ್ನಾಟಕ ಸಾರಿಗೆ 08
ಬಿಎಂಟಿಸಿ 58
ಒಟ್ಟು ನಷ್ಟ: 7.5 ಕೋಟಿ ರೂ.

ರಾಜ್ಯಾದ್ಯಂತ ಪ್ರತಿಭಟನೆ

ಮುಷ್ಕರಕ್ಕೆ ಕರೆ ನೀಡಿದ 10 ಸಂಘಟನೆಗಳು ರಾಜ್ಯದ ಬಹುತೇಕ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ಬುಧವಾರ ಪ್ರತಿಭಟನೆ ನಡೆಸಿದವು. ಕೆಲವೆಡೆ ಉರುಳು ಸೇವೆ, ಮಾನವ ಸರಪಳಿ ಪ್ರದರ್ಶನ ನಡೆಸಲಾಯಿತು.

ಮಹಿಳೆಯರೇ ಮುಂಚೂಣಿ

ರಾಜ್ಯದ ಹೆಚ್ಚಿನ ಕಡೆಗಳಲ್ಲಿ ಮಹಿಳೆಯರು ಪ್ರತಿಭಟನೆಯ ಮುಂಚೂಣಿಯಲ್ಲಿದ್ದರು. ಜತೆಗೆ 2ನೇ ದಿನ ಬಾಗಲಕೋಟ, ಗದಗ, ಚಾಮರಾಜನಗರದಲ್ಲಿ ಮಹಿಳಾ ಕಾರ್ಯಕರ್ತರು ಅಸ್ವಸ್ಥರಾದರು. ಮೊದಲ ದಿನ ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡಿನಲ್ಲಿ ಅಂಗನವಾಡಿ ಕಾರ್ಯಕರ್ತೆಯೊಬ್ಬರು ಪ್ರತಿಭಟನೆ ನಡೆಯುವಾಗಲೇ ಮೃತಪಟ್ಟಿದ್ದರು.

ಕೇಂದ್ರ ಸ್ವಾಮ್ಯದ ಉದ್ದಿಮೆಗಳಲ್ಲಿ ಬಂದ್‌ ಇಲ್ಲ

ಕೇಂದ್ರ ಸರಕಾರಿ ಒಡೆತನದ ಎಚ್‌ಎಎಲ್‌, ಎನ್‌ಎಎಲ್‌, ಬಿಎಚ್‌ಇಎಲ್‌, ಬಿಇಎಂಎಲ್‌, ಬಿಇಎಲ್‌ನಂತಹ ಪ್ರಮುಖ ಉದ್ದಿಮೆಗಳು ಬಂದ್‌ಗೆ ಸ್ಪಂದಿಸಿಲ್ಲ.

* ಪ.ಬಂಗಾಳ, ಕೇರಳದಲ್ಲಿ ಹಿಂಸಾಚಾರ, ರಸ್ತೆ ತಡೆ
* ಪಶ್ಚಿಮ ಬಂಗಾಳದ ನಾನಾ ಕಡೆಗಳಲ್ಲಿ ಶಾಲಾ ಬಸ್‌ಗಳಿಗೆ ಕಲ್ಲು ತೂರಾಟ, ಸಂಚಾರಕ್ಕೆ ತಡೆ
* ತಿರುವನಂತಪುರದಲ್ಲಿ ಎಸ್‌ಬಿಐ ಟ್ರೆಷರಿ ಶಾಖೆಗೆ ದುಷ್ಕರ್ಮಿಗಳ ದಾಳಿ
* ಕೇರಳದ ನಾನಾ ಭಾಗಗಳಲ್ಲಿ ರೈಲು ಸಂಚಾರಕ್ಕೆ ತಡೆ
* ತಮಿಳುನಾಡಿನ ಬ್ಯಾಂಕ್‌ ಮತ್ತು ಕೆಲವು ಸಾರ್ವಜನಿಕ ವಲಯದ ಸಂಸ್ಥೆಗಳು ಬಂದ್‌
* ಗೋವಾದಲ್ಲಿ ಖಾಸಗಿ ಬಸ್‌ಗಳು ಮತ್ತು ಟೂರಿಸ್ಟ್‌ ಟ್ಯಾಕ್ಸಿಗಳು ರಸ್ತೆಗೆ ಇಳಿಯಲಿಲ್ಲ.
* ಮುಂಬಯಿಯಲ್ಲಿ 32000 ಬೆಸ್ಟ್‌ ಬಸ್‌ಗಳು ರಸ್ತೆಗೆ ಇಳಿಯದೆ ಸಂಕಷ್ಟ.

Comments are closed.